ಸಿಎಂ ಸಿದ್ದರಾಮಯ್ಯ ಎದುರು 6 ಜನ ನಕ್ಸಲರು ಶರಣಾಗಲು ಮಧ್ಯಸ್ಥಿಕೆ ವಹಿಸಿದ್ದು ದನಗಾಹಿ ಮಹಿಳೆ !

Published : Jan 13, 2025, 06:02 AM IST
ಸಿಎಂ ಸಿದ್ದರಾಮಯ್ಯ ಎದುರು 6 ಜನ ನಕ್ಸಲರು ಶರಣಾಗಲು ಮಧ್ಯಸ್ಥಿಕೆ ವಹಿಸಿದ್ದು ದನಗಾಹಿ ಮಹಿಳೆ !

ಸಾರಾಂಶ

ಬೆಂಗಳೂರಿನಲ್ಲಿ ನಡೆದ ನಕ್ಸಲ್ ಶರಣಾಗತಿಯ ಹಿಂದೆ 72 ದಿನಗಳ ಸುದೀರ್ಘ ಪಯಣವಿದ್ದು, ಆದಿವಾಸಿ ಮಹಿಳೆ ಗೌರಮ್ಮ ಸರ್ಕಾರ ಮತ್ತು ನಕ್ಸಲರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದಾರೆ. ವಿಕ್ರಂ ಗೌಡ ಎನ್‌ಕೌಂಟರ್‌ಗೂ ಮುನ್ನವೇ ಶರಣಾಗತಿ ಪ್ರಕ್ರಿಯೆ ಆರಂಭವಾಗಿತ್ತು.

ಆರ್‌. ತಾರಾನಾಥ್‌ ಅಟೋಕರ್‌

 ಚಿಕ್ಕಮಗಳೂರು (ಜ.13) :ಬೆಂಗಳೂರಲ್ಲಿ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಎದುರು 6 ಮಂದಿ ನಕ್ಸಲರು ಶರಣಾಗತಿಯ ಹಿಂದೆ ಸುಮಾರು 72 ದಿನಗಳ ಸುದೀರ್ಘ ಪಯಣವಿದೆ. ದನ ಕಾಯುವ ಆದಿವಾಸಿ ಮಹಿಳೆ ಗೌರಮ್ಮ ಎಂಬುವರು ಸರ್ಕಾರ ಮತ್ತು ನಕ್ಸಲರ ಮಧ್ಯೆ ಕೊಂಡಿಯಾಗಿ ಸುದ್ದಿ ಮುಟ್ಟಿಸುವ ಕೆಲಸ ಮಾಡಿ ನಕ್ಸಲ್‌ ಶರಣಾಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಕುತೂಹಲದ ಅಂಶ ಈಗ ಬೆಳಕಿಗೆ ಬಂದಿದೆ.

ದನ ಕಾಯುವ ವೇಳೆ ಗೌರಮ್ಮ ಅವರು ನಕ್ಸಲರ ಸಂಪರ್ಕಕ್ಕೆ ಬಂದಿದ್ದರು. ಆಗ ನಕ್ಸಲರು ತಮ್ಮ ಸಂಪರ್ಕಕ್ಕೆ ಬಂದ ಗೌರಮ್ಮ ಅವರನ್ನು ಸಂಪೂರ್ಣವಾಗಿ ನಂಬಿದ್ದರು. ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರುವ ಸಂಬಂಧ ಒಲವು ತೋರಿ ಪತ್ರವೊಂದನ್ನು ಗೌರಮ್ಮ ಮೂಲಕ ಸರ್ಕಾರದೊಂದಿಗೆ ಸಂಧಾನಕ್ಕೆ ಸಮರ್ಥರಾದ ವ್ಯಕ್ತಿಯೊಬ್ಬರಿಗೆ ತಲುಪಿಸಿದ್ದರು. ಬಳಿಕ ಗೌರಮ್ಮ ಅವರು ಸರ್ಕಾರದ ನಕ್ಸಲ್‌ ಪುನರ್ವಸತಿ ಸಮಿತಿ ಪ್ರತಿನಿಧಿಗಳಿಗೆ ವಿಷಯ ಮುಟ್ಟಿಸಿದ್ದರು. ಅಂದಿನಿಂದಲೇ ಸಂಧಾನ ಪ್ರಕ್ರಿಯೆ ಆರಂಭವಾಗಿ, ಹಲವು ಸುತ್ತಿನ ಪತ್ರ ವ್ಯವಹಾರ ನಡೆದಿತ್ತು. ಕೆಲ ಬಾರಿ ಸಂಧಾನ ಸಮಿತಿಯ ಪತ್ರಗಳನ್ನೂ ಗೌರಮ್ಮ ಅವರು ನಕ್ಸಲರಿಗೆ ತಲುಪಿಸಿದ್ದರು. ಎಂದು ಗೊತ್ತಾಗಿದೆ.

ಎನ್‌ಕೌಂಟರ್‌ಗಿಂತ ಮೊದಲೇ ಸಂಧಾನ ಪ್ರಕ್ರಿಯೆ: ‘ನಕ್ಸಲೀಯರು ಕಾಡಿನಲ್ಲಿ ಇರಲಾಗದೆ, ವಿಕ್ರಂಗೌಡನ ಎನ್‌ಕೌಂಟರ್‌ನಿಂದ ಹೆದರಿ ಶರಣಾಗತಿಗೆ ಬಂದವರಲ್ಲ. ಅದಕ್ಕಿಂತ ಮೊದಲೇ ಪತ್ರ ವ್ಯವಹಾರ ಆರಂಭವಾಗಿತ್ತು. ಎನ್‌ಕೌಂಟರ್‌ಗೂ ಮೊದಲು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಅ.17ರಂದು ಮುಂಡಗಾರು ಲತಾ ಅವರನ್ನು ಆಕಸ್ಮಿಕವಾಗಿ ಭೇಟಿ ಮಾಡಿದ್ದರು. ‘ಆ ಸಂದರ್ಭದಲ್ಲಿ ಸಮಾಜದ ಮುಖ್ಯವಾಹಿನಿಗೆ ಬನ್ನಿ. ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡೋಣ’ ಎಂದು ಕರೆಕೊಟ್ಟಿದ್ದರು. ಅದಕ್ಕೆ ಲತಾ ಅವರಿಂದ ನೋಡೋಣ... ಎಂಬ ಉತ್ತರ ಬಂದಿತ್ತು. ಆಗಿನಿಂದ ಸಂಧಾನದ ಬಾಗಿಲು ತೆರೆಯಿತು. ಮುಂದೆ ಪತ್ರ ವ್ಯವಹಾರವು ಗೌರಮ್ಮನ ಮೂಲಕ ನಡೆಯಿತು ಎಂದು ತಿಳಿದುಬಂದಿದೆ.

ಬಿಜೆಪಿ ಆಡಳಿತವಿರುವ ಛತ್ತಿಸಗಢದಲ್ಲೂ 9 ನಕ್ಸಲರು ಶರಣು, ಸಿದ್ದು ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು ಈಗೇನು ಹೇಳ್ತಾರೆ?

ಹೀಗಾಗಿ ನಕ್ಸಲೀಯರು ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕಿತ್ತಲೆಮನೆ ಗ್ರಾಮದ ಗೌರಮ್ಮ (ಮೂಲತಃ ಕಡುಗುಂಡಿ ಗ್ರಾಮದವರು) ಅವರ ಮೂಲಕ ಪತ್ರವೊಂದನ್ನು ಕಳೆದ 2024ರ ಅ.17ರಂದು ಭೇಟಿ ಮಾಡಿದ್ದ ವ್ಯಕ್ತಿಗೆ ತಲುಪಿಸಿದರು ಹಾಗೂ ಆ ವ್ಯಕ್ತಿಯು ಉತ್ತರಿಸಿದ ಪತ್ರವೊಂದನ್ನು ತರಬೇಕು ಎಂದು ಹೇಳಿ ಕಳುಹಿಸಿದರು.

 ಗೌರಮ್ಮ ಕಿತ್ತಲೆಮನೆ ಗ್ರಾಮದಿಂದ ಸುಮಾರು 20-25 ಕಿ.ಮೀ. ದೂರದಲ್ಲಿರುವ ಆ ವ್ಯಕ್ತಿ ಮನೆಗೆ ಬಂದು ಪತ್ರ ಕೊಟ್ಟರು. ಅವರಿಂದ ನಕ್ಸಲೀಯರಿಗೆ ಪತ್ರ ಕೇಳಿದಾಗ, ‘ಹಾಗೆ ಮಾಡಿದರೆ ಸಮಸ್ಯೆಯಾಗುತ್ತದೆ. ಮುಂದೆ ನೋಡೋಣ’ ಎಂದು ಗೌರಮ್ಮ ಅವರನ್ನು ಕಳುಹಿಸಿದರು. ನಂತರ ನಕ್ಸಲರು ಪತ್ರ ಬರೆದ ವಿಷಯ ಶಾಂತಿಗಾಗಿ ನಾಗರಿಕ ವೇದಿಕೆ ಕೆಲವು ಮುಖಂಡರಿಗೆ ಮುಟ್ಟಿಸಿದರು.

ಇತ್ತ ಮಾತುಕತೆ ನಡೆಯುತ್ತಿರುವ ವೇಳೆಯೇ ಉಡುಪಿ ಜಿಲ್ಲೆ ಹೆಬ್ಬಿಯ ಕಬ್ಬಿನಾಲೆ ಪೀತಬೈಲು ಗ್ರಾಮದಲ್ಲಿ ನವೆಂಬರ್‌ 19 ರಂದು ವಿಕ್ರಂಗೌಡ ಎನ್‌ಕೌಂಟರ್‌ ನಡೆಯಿತು. ಇದರಿಂದ ಮಾತುಕತೆಗೆ ಕೊಂಚ ಹಿನ್ನಡೆಯಾಯಿತು.ಡಿಸೆಂಬರ್‌ 3ರ ನಂತರ ಸಂಧಾನ ಸಮಿತಿಯ ಕೆಲ ಪತ್ರಗಳು ಗೌರಮ್ಮ ಅವರ ಮೂಲಕ ನಕ್ಸಲರಿಗೆ ಹೋದವು. ನಕ್ಸಲೀಯರೊಂದಿಗೆ ಮತ್ತೆ ಮಾತುಕತೆ ಆರಂಭವಾಯಿತು. ನಕ್ಸಲರ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಯಿತು. ಹೀಗೆ 4-5 ಬಾರಿ ಸಭೆ ನಡೆಸಿದ ನಂತರ ಅಂತಿಮ ನಿರ್ಧಾರಕ್ಕೆ ಬರಲಾಯಿತು.

 ಜನವರಿ 3ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಿರಂತರವಾಗಿ ಸಭೆ ನಡೆಸಿ ಶರಣಾಗತಿ ಸಾಧಕ- ಬಾಧಕ, ಸರ್ಕಾರದ ಭರವಸೆ ಹಾಗೂ ಕಾಡಿನಿಂದ ಹೊರಗೆ ತೆರಳುವ ವಿಧಾನದ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ. ಜನವರಿ 6ರಂದು ಶಾಂತಿಗಾಗಿ ನಾಗರಿಕ ವೇದಿಕೆ ಹಾಗೂ ಸ್ಥಳೀಯರು ಒಂದೆಡೆ ಸೇರಿ ಜನವರಿ 8ರಂದು ಬೆಳಗ್ಗೆ ಸ್ಥಳದಿಂದ ಹೊರಟು ಮೊದಲು ಚಿಕ್ಕಮಗಳೂರು ತಲುಪಿದರು. ನಂತರ ಶರಣಾಗತಿ ಸ್ಥಳ ಬದಲಾದ ಕಾರಣ ಸಂಜೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಸಮ್ಮುಖದಲ್ಲಿ 6 ಮಂದಿ ನಕ್ಸಲೀಯರು ಶರಣಾದರು. 

ನಕ್ಸಲರನ್ನು ವಿಧಾನಸೌಧಕ್ಕೆ ಕರೆತರದಿರುವುದೇ ಪುಣ್ಯ: ಜೆಡಿಎಸ್‌ ನಾಯಕ ಜ್ಯೋತಿ ಪ್ರಕಾಶ ಮಿರ್ಜಿ

ಇದರೊಂದಿಗೆ ನಕ್ಸಲ್‌ ಚಳವಳಿ ಅಂತ್ಯ ಕಂಡಂತಾಗಿದೆ.ಸುಮಾರು 15 ವರ್ಷಗಳ ಬಳಿಕ ಮುಂಡಗಾರು ಲತಾ ಅವರನ್ನು ನೋಡಿದೆ. ಹೊರಗೆ ಬನ್ನಿ ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡೋಣ ಎಂದು ಕರೆದೆ. ಅದಕ್ಕೆ ಸ್ಪಂದಿಸಿದರು. ಈ ಪ್ರಕ್ರಿಯೆ ನಡೆಸುವಾಗ ತುಂಬಾ ಆತಂಕ ಇತ್ತು. ಯಾವ ಸಂದರ್ಭದಲ್ಲಿ ಏನಾದರೂ ಆದ್ರೆ ಎಂಬ ಭಯ ಕಾಡುತ್ತಿತ್ತು. ಆದರೆ, ಎಲ್ಲಾ ಕಾರ್ಯವೂ ನಿರೀಕ್ಷಿತ ಮಟ್ಟದಲ್ಲಿ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ