
ವಿಧಾನಸಭೆ (ಮಾ.19) ರಾಜ್ಯದಲ್ಲಿ ನಡೆಸಲಾಗುವ ಜಯಂತಿ ಹಾಗೂ ಉತ್ಸವಗಳಲ್ಲಿ ಡಿಜೆ ಸೌಂಡ್, ಐಟಂ ಸಾಂಗ್ ಬ್ಯಾನ್ ಮಾಡುವ ಬಗ್ಗೆ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಕೆಲ ಸದಸ್ಯರಿಂದಲೇ ಒತ್ತಾಯ ಕೇಳಿ ಬಂದಿದೆ.
ಬಿಜೆಪಿಯವರು ಸಹಕರಿಸಿದರೆ ಡಿಜೆ ಬ್ಯಾನ್ ಮಾಡಿ ಆದೇಶಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದ ಪ್ರಸಂಗವೂ ಜರುಗಿತು.
ಬುಧವಾರ ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿ ಜಿಲ್ಲೆಯಲ್ಲಿ ಉತ್ಸವ ನಡೆಸುವ ಬಗ್ಗೆ ನಡೆದ ಚರ್ಚೆ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ವಿಚಾರ ಪ್ರಸ್ತಾಪಿಸಿ, ರಾಜ್ಯದಲ್ಲಿ ನಡೆಯುವ ವಿವಿಧ ಜಯಂತಿ, ಉತ್ಸವಗಳಲ್ಲಿ ಡಿಜೆ, ಐಟಂ ಸಾಂಗ್ಗಳಿಂದ ಸಮಸ್ಯೆಯಾಗಿದೆ. ಐಟಂ ಸಾಂಗ್ ಇಲ್ಲದೇ ದೇವರ ಮೆರವಣಿಗೆ ಇಲ್ಲ ಎನ್ನುವ ಸ್ಥಿತಿ ಇದೆ. ಇದು ನಿಜಕ್ಕೂ ಅಸಹ್ಯ. ಹೀಗಾಗಿ ಡಿಜೆ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ವಿವಿಧೆಡೆ ನಡೆಯುವ ಸಾಂಸ್ಕೃತಿಕ ಉತ್ಸವಗಳಿಗೆ ಕೋಟ್ಯಂತರ ರು. ಖರ್ಚು ಮಾಡಿ ಖ್ಯಾತ ಗಾಯಕರು, ಸೆಲೆಬ್ರಿಟಿಗಳನ್ನು ಕರೆಸುವ ಬದಲು ಸ್ಥಳೀಯ ಕಲೆಗಳು ಮತ್ತು ಕಲಾವಿದರಿಗೆ ಆದ್ಯತೆ ನೀಡಬೇಕು. ಅವಕಾಶ ಕೊಡುವುದರಿಂದ ಅವರ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸುವ ಅಗತ್ಯವಿದೆ ಎಂದರು. ಇದಕ್ಕೆ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಸಹಕರಿಸಿದರೆ, ಡಿಜೆ ಬ್ಯಾನ್ ಮಾಡುವುದಾಗಿ ತಿಳಿಸಿದರು.
\Bದುಷ್ಪರಿಣಾಮ ಬಗ್ಗೆ ಚಿಂತನೆ ಅಗತ್ಯ:\B
ಬಿಜೆಪಿ ಸದಸ್ಯ ಎಸ್. ಸುರೇಶ್ ಕುಮಾರ್ ಮಾತನಾಡಿ, ಡಿಜೆ ಶಬ್ಧಕ್ಕೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳುತ್ತಿರುವವರು ಬೆಚ್ಚುವಂತಾಗಿದೆ. ಸಣ್ಣ ಮಕ್ಕಳು ಬೆಚ್ಚಿ ಒದ್ದಾಡುತ್ತವೆ. ಈ ಡಿಜೆ ಶಬ್ಧದ ದುಷ್ಪರಿಣಾಮಗಳ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ ಎಂದರು.
ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಚನ್ನಬಸಪ್ಪ ಮಾತನಾಡಿ, ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ಶಿವಮೊಗ್ಗದಲ್ಲಿ ಸಹ್ಯಾದ್ರಿ ಉತ್ಸವ ಮತ್ತು ಮಲೆನಾಡು ಉತ್ಸವ ಆಚರಿಸಬೇಕು. ಜಿಲ್ಲೆಯ ಐತಿಹಾಸಿಕ ಪರಂಪರೆ ಗೌರವಿಸಲು 3 ದಿನಗಳ ಕಾಲ ಜಿಲ್ಲಾ ಉತ್ಸವ ಆಯೋಜಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ತಂಗಡಗಿ, ಬೇಡಿಕೆ ಬಂದ ಕಡೆಯಲ್ಲೆಲ್ಲ ಉತ್ಸವ ಮಾಡಲು ಆಗಲ್ಲ. ಅನುದಾನದ ಮಿತಿ ಇದೆ. ಶಿವಮೊಗ್ಗದಲ್ಲಿ ಸಹ್ಯಾದ್ರಿ ಉತ್ಸವದ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಪರಿಗಣಿಸುವುದಾಗಿ ಹೇಳಿದರು.
ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ಕರ್ನಾಟಕಕ್ಕೆ ವಿಶಿಷ್ಟ ಪರಂಪರೆ ಇದೆ. ಪ್ರತಿ ಜಿಲ್ಲೆಯಲ್ಲಿ ಉತ್ಸವ ಮಾಡಬಹುದು. ಯುವಜನತೆಗೆ ಸಂಸ್ಕೃತಿ, ಪರಂಪರೆ, ಇತಿಹಾಸ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಉತ್ಸವ ಮಾಡಿ. ಪ್ರತಿ ಜಿಲ್ಲೆಗೂ ಅನುದಾನ ಕೊಡಿ ಎಂದು ಸಲಹೆ ನೀಡಿದರು.
ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಮಾತನಾಡಿ, ಕರ್ನಾಟಕಕ್ಕೆ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಈ ಹಿಂದೆ ಪ್ರತಿ ಜಿಲ್ಲೆಯಲ್ಲಿ ಯುವಜನ ಮೇಳ ನಡೆಯುತ್ತಿದ್ದವು. ಈಗ ಅವು ನಡೆಯುತ್ತಿಲ್ಲ. ಹೀಗಾಗಿ ರಾಜ್ಯದ ಮಟ್ಟದಲ್ಲಿ ನಾಲ್ಕು ಸಾಂಸ್ಕೃತಿಕ ಉತ್ಸವ ಮಾಡಿ. ಜೊತೆಗೆ ಎಲ್ಲಾ ಜಿಲ್ಲೆಗಳಲ್ಲೂ ಉತ್ಸವ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ನೀತಿ ರೂಪಿಸಬೇಕು. ನಾನು ಸಚಿವನಾಗಿದ್ದಾಗ ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ