ಮುಜರಾಯಿ ದೇಗುಲಗಳಿಗೆ ಹಣ ಬಿಡುಗಡೆಗೆ ಸರ್ಕಾರ ಅಸ್ತು; ಅನುದಾನಕ್ಕೆ ತಡೆ ನೀಡಿದ್ದ ಆದೇಶ ವಾಪಸ್‌

By Kannadaprabha NewsFirst Published Aug 19, 2023, 6:19 AM IST
Highlights

ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ವಿವಿಧ ಕಾರ್ಯಕ್ಕಾಗಿ ನಿಗದಿ ಮಾಡಲಾಗಿದ್ದ ಅನುದಾನ ಬಿಡುಗಡೆಗೆ ತಡೆ ನೀಡುವ ಕುರಿತಂತೆ ಕಳೆದ ಸೋಮವಾರ ತಾವೇ ನೀಡಿದ್ದ ಆದೇಶವನ್ನು ಮುಜರಾಯಿ ಇಲಾಖೆ ಆಯುಕ್ತರು ಶುಕ್ರವಾರ ಹಿಂಪಡೆದಿದ್ದಾರೆ.

ಬೆಂಗಳೂರು (ಆ.19): ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ವಿವಿಧ ಕಾರ್ಯಕ್ಕಾಗಿ ನಿಗದಿ ಮಾಡಲಾಗಿದ್ದ ಅನುದಾನ ಬಿಡುಗಡೆಗೆ ತಡೆ ನೀಡುವ ಕುರಿತಂತೆ ಕಳೆದ ಸೋಮವಾರ ತಾವೇ ನೀಡಿದ್ದ ಆದೇಶವನ್ನು ಮುಜರಾಯಿ ಇಲಾಖೆ ಆಯುಕ್ತರು ಶುಕ್ರವಾರ ಹಿಂಪಡೆದಿದ್ದಾರೆ.

ಬಿಜೆಪಿ ಅವಧಿಯಲ್ಲಿ ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಸರ್ಕಾರದಿಂದ 142 ಕೋಟಿ ರು. ಅನುದಾನ ಘೋಷಿಸಲಾಗಿತ್ತು. ಆ ಅನುದಾನದಲ್ಲಿ 50ಕ್ಕೂ ಹೆಚ್ಚಿನ ದೇವಸ್ಥಾನಗಳು ಮತ್ತು 150ಕ್ಕೂ ಹೆಚ್ಚಿನ ಮಠಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅನುದಾನ ಘೋಷಣೆಯಾಗಿರುವ ದೇವಸ್ಥಾನಗಳಲ್ಲಿ ಇನ್ನೂ ಅಭಿವೃದ್ಧಿ ಕಾರ್ಯ ಆರಂಭವಾಗದಿದ್ದರೆ ಅನುದಾನ ಬಿಡುಗಡೆ ಮಾಡದೆ ತಡೆ ಹಿಡಿಯುವಂತೆ ಮುಜರಾಯಿ ಇಲಾಖೆ ಆಯುಕ್ತರು ಆಗಸ್ಟ್‌ 14ರಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆದೇಶಿಸಿದ್ದರು. ಈ ಕ್ರಮದ ಬಗ್ಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಹಿಂದಿನ ಆದೇಶವನ್ನು ಮುಜರಾಯಿ ಇಲಾಖೆ ಆಯುಕ್ತರು ಹಿಂಪಡೆದಿದ್ದಾರೆ.

Latest Videos

 

ಮುಜುರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಇನ್ಮುಂದೆ ಜೀನ್ಸ್, ಶಾಟ್ಸ್, ಟೀ ಶರ್ಟ್ ಧರಿಸುವುದು ನಿಷೇಧ

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮುಜರಾಯಿ ಇಲಾಖೆ ಆಯುಕ್ತರ ಆದೇಶ ಗೊಂದಲಕ್ಕೆ ಕಾರಣವಾಗಿದೆಯಷ್ಟೆ. ಸರ್ಕಾರಕ್ಕೆ ದೇವಸ್ಥಾನಗಳಿಗೆ ಮತ್ತು ಮಠಗಳಿಗೆ ಅನುದಾನ ನೀಡಬಾರದು ಎಂಬ ಉದ್ದೇಶವಿಲ್ಲ. ಅನುದಾನ ಕೊಟ್ಟೇ ಕೊಡುತ್ತೇವೆ. ಹೀಗಾಗಿ ಕೂಡಲೆ ಆದೇಶ ಹಿಂಪಡೆಯುವಂತೆ ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚಿಸಿ, ಹಿಂದಿನ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ತಿಳಿಸಿದರು.

click me!