ಕೇವಲ 5 ನಿಮಿಷದ ವಿಡಿಯೋಗೆ 4.5 ಕೋಟಿ ತೆತ್ತ ಕರ್ನಾಟಕ ಸರ್ಕಾರ..!

Published : Jan 28, 2023, 02:48 PM IST
ಕೇವಲ 5 ನಿಮಿಷದ ವಿಡಿಯೋಗೆ 4.5 ಕೋಟಿ ತೆತ್ತ ಕರ್ನಾಟಕ ಸರ್ಕಾರ..!

ಸಾರಾಂಶ

ಗುತ್ತಿಗೆ ರದ್ದುಗೊಳಿಸಿದ್ದರೂ ಒಪ್ಪಂದದಂತೆ ಹಣ ನೀಡಲು ಹೈಕೋರ್ಟ್‌ನಿಂದ ಆದೇಶ, ಹೂಡಿಕೆ ಸಮಾವೇಶಕ್ಕೆ ಸಿದ್ಧಪಡಿಸಿದ್ದ 3ಡಿ ವಿಡಿಯೋ, ಬಳಸದಿದ್ದರೂ ಹಣ ಕಟ್ಟಬೇಕು. 

ಬೆಂಗಳೂರು(ಜ.28):  ಕಳೆದ ವರ್ಷ ಹಮ್ಮಿಕೊಳ್ಳಲಾಗಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ (ಜಿಮ್‌) ಪ್ರಚಾರಕ್ಕಾಗಿ ಐದು ನಿಮಿಷದ ‘3ಡಿ’ ವಿಡಿಯೋ ಚಿತ್ರೀಕರಿಸಲು ಬಿಬಿಪಿ ಸ್ಟುಡಿಯೋ ಕಂಪನಿಗೆ ನೀಡಿದ್ದ ಗುತ್ತಿಗೆ ಹಿಂಪಡೆದಿದ್ದ ಸರ್ಕಾರದ ಕ್ರಮವನ್ನು ರದ್ದುಪಡಿಸಿರುವ ಹೈಕೋರ್ಟ್‌, ಒಪ್ಪಂದದಂತೆ ಕಂಪನಿಗೆ 4.5 ಕೋಟಿ ರು. ಪಾವತಿಸಬೇಕು ಎಂದು ನಿರ್ದೇಶಿಸಿದೆ. ಸರ್ಕಾರದ ಕ್ರಮ ಪ್ರಶ್ನಿಸಿ ಮುಂಬೈ ಮೂಲದ ಬಿಬಿಪಿ ಸ್ಟುಡಿಯೋ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರ ಕಂಪನಿ ಗುತ್ತಿಗೆ ಒಪ್ಪಂದದಂತೆ ವಿಡಿಯೋ ಚಿತ್ರೀಕರಣ ಪೂರ್ಣಗೊಳಿಸಿತ್ತು. ಅಂತಿಮ ವಿಡಿಯೋ ನೀಡುವುದಷ್ಟೇ ಬಾಕಿಯಿತ್ತು. ಅದಕ್ಕೂ ಮುನ್ನವೇ ಗುತ್ತಿಗೆ ಕಾರ್ಯಾದೇಶ ಹಿಂಪಡೆದ ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ. ಪ್ರಚಾರ ವಿಡಿಯೋದ ಗುಣಮಟ್ಟ ಪರಿಶೀಲಿಸದೆ ಕೇವಲ ರಾಜಕೀಯ ಹಸ್ತಕ್ಷೇಪದಿಂದ ಗುತ್ತಿಗೆ ಕಾರ್ಯಾದೇಶ ರದ್ದು ಮಾಡಿರುವುದು ನಿರಂಕುಶತ್ವಕ್ಕೆ ದೊಡ್ಡ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಈಗಾಗಲೇ ಮುಂಗಡವಾಗಿ 1.5 ಕೋಟಿ ರು. ನೀಡಿರುವುದರಿಂದ ಉಳಿದ ಬಾಕಿ ಮೊತ್ತವನ್ನು ಅರ್ಜಿದಾರ ಕಂಪನಿಗೆ ಪಾವತಿ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.

ನಾನು ಬಿಎಸ್‌ವೈ ವಿರುದ್ಧ ಮಾತನಾಡಲ್ಲ ಎಂದ ಯತ್ನಾಳ್‌: ನಸು ನಕ್ಕು ಕೈ ಮುಗಿದ ಯಡಿಯೂರಪ್ಪ..!

ಪ್ರಕರಣವೇನು?:

ಜಿಮ್‌ ಪ್ರಚಾರಕ್ಕಾಗಿ 5 ನಿಮಿಷದ ವಿಡಿಯೋ ಚಿತ್ರೀಕರಿಸಲು ಬಿಬಿಪಿ ಸ್ಟುಡಿಯೋ ಕಂಪನಿಗೆ ಸರ್ಕಾರದ ಅಧೀನದ ಮಾರ್ಕೆಟಿಂಗ್‌ ಕಮ್ಯೂನಿಕೇಷನ್ಸ್‌ ಅಂಡ್‌ ಅಡ್ವರ್ಟೈಸಿಂಗ್‌ ಲಿಮಿಟೆಡ್‌ (ಎಂಸಿಎಲ್‌ಎ) 2022ರ ಆ.11ರಂದು ಗುತ್ತಿಗೆ ನೀಡಿ ಕಾರ್ಯಾದೇಶ ಹೊರಡಿಸಿತ್ತು. 2022ರ ಅ.1ರಂದು ಮುಂಗಡವಾಗಿ ಕಂಪನಿಗೆ 1.5 ಕೋಟಿ ರು. ಪಾವತಿಸಿತ್ತು.

ಈ ಮಧ್ಯೆ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಅವರು ಎಂಸಿಎಲ್‌ಎಗೆ ಪತ್ರ ಬರೆದು 5 ನಿಮಿಷದ ಪ್ರಚಾರದ ವಿಡಿಯೋಗೆ 4.5 ಕೋಟಿ ಹಣ ನೀಡುವುದು ತುಂಬಾ ಜಾಸ್ತಿ ಎಂದು ತಿಳಿಸಿದ್ದರು. ಇದರಿಂದ ಅ.25ರಂದು ಗುತ್ತಿಗೆ ಕಾರ್ಯಾದೇಶವನ್ನು ರದ್ದುಪಡಿಸಿದ್ದ ಎಂಸಿಎಲ್‌ಎ, ಆ ಕುರಿತು ಬಿಬಿಪಿ ಸ್ಟುಡಿಯೋಗೆ ಇ-ಮೇಲ್‌ ಸಂದೇಶ ಕಹಿಸಿತ್ತು. ಅದನ್ನು ಪ್ರಶ್ನಿಸಿ ಬಿಬಿಪಿ ಸ್ಟುಡಿಯೋ ಹೈಕೋರ್ಟ್‌ ಮೆಟ್ಟಿಲೇರಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಹುಲ್‌ ಜೊತೆ ಮೈಸೂರಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಭೇಟಿ
ತೆರಿಗೆ ಹೊರೆಯಿಂದ ಸಂಕ್ರಾಂತಿ ಹಿಗ್ಗು ಮಾಯ : ರವಿಕುಮಾರ್