
ಬೆಂಗಳೂರು (ಸೆ.4): ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯಾ, ಹಿಮಾಚಲ ಪ್ರದೇಶದಂಥ ಪರಿಸ್ಥಿತಿ ರಾಜ್ಯಕ್ಕೂ ಬರಲಿದ್ಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಅದಕ್ಕೆ ಕಾರಣ ಸರ್ಕಾರದ ಧೋರಣೆ. ಗ್ಯಾರಂಟಿಗಳಿಂದ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲ ಎಂದು ಸರ್ಕಾರದ ಸಚಿವರುಗಳೇ ಹೇಳಿರುವ ನಡುವೆಯೇ SC/ST ಉದ್ದಿಮೆದಾರರ ಬಡ್ಡಿ ಸಬ್ಸಿಡಿಗೆ ಸರ್ಕಾರ ಕತ್ತರಿ ಹಾಕಿದೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ (ಕೆಎಸ್ ಎಫ್ಸಿ) ಎಸ್ಸಿ/ಎಸ್ಟಿ ಉದ್ದಿಮೆದಾರರ ಬಡ್ಡಿ ಸಬ್ಸಿಡಿಗೆ ಕತ್ತರಿ ಹಾಕಲಾಗಿದೆ. ಎಸ್ ಸಿ / ಎಸ್ ಟಿ ಉದ್ದಿಮೆದಾರರ ಅವಧಿ ಸಾಲಕ್ಕೆ ಬಡ್ಡಿ ಸಬ್ಸಿಡಿಯನ್ನು ಸರ್ಕಾರ ಕಡಿತ ಮಾಡಿದೆ ಎಂದು ವರದಿಯಾಗಿದೆ. ಈ ಉದ್ದಿಮೆದಾರರಿಗೆ ಸರ್ಕಾರ ನೀಡುತ್ತಿದ್ದ ಬಡ್ಡಿ ಸಬ್ಸಿಡಿಯನ್ನು ಕೆಎಸ್ಎಫ್ಸಿ ಕಡಿತ ಮಾಡಿದೆ.
ಉದ್ದಿಮೆ ಸ್ಥಾಪನೆಗಾಗಿ ಕೆಎಸ್ಎಫ್ಸಿ ನೀಡುವ ಸಾಲಕ್ಕೆ ಶೇ. 11ರಷ್ಟು ಬಡ್ಡಿ ದರ ನಿಗದಿಯಾಗಿದೆ. ಇದರಲ್ಲಿ ಶೇ. 4ರಷ್ಟು ಬಡ್ಡಿಯನ್ನು ಉದ್ದಿಮೆದಾರರು ಪಾವತಿ ಮಾಡಬೇಕಿದೆ. ಉಳಿದ ಶೇ. 7ರಷ್ಟು ಬಡ್ಡಿ ಮೊತ್ತವನ್ನು ಸರಕಾರವೇ ಕೆಎಸ್ಎಫ್ಸಿಗೆ ನೀಡುತ್ತದೆ. ಆದರೆ ಸರ್ಕಾರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದಿಂದ ಬಡ್ಡಿ ಸಬ್ಸಿಡಿಯ ಅನುದಾನ ಕೆಎಸ್ಎಫ್ಸಿಗೆ ಈವರೆಗೂ ಪಾವತಿಯಾಗಿಲ್ಲ. ಬಡ್ಡಿ ಸಬ್ಸಿಡಿ ಪಾವತಿಯಾಗದ ಕಾರಣ ಉದ್ಯಮಿದಾರರಿಗೆ ಸಮಸ್ಯೆ ಎದುರಾಗಿದೆ.
ಪೂರ್ಣ ಬಡ್ಡಿಯನ್ನು ಪಾವತಿ ಮಾಡುವಂತೆ ಉದ್ದಿಮೆದಾರರಿಗೆ ಕೆಎಸ್ಎಫ್ಸಿ ಡಿಮಾಂಡ್ ನೋಟಿಸ್ ಜಾರಿ ಮಾಡಿದೆ. ಸಾಮಾನ್ಯ ವರ್ಗದ ಮಹಿಳಾ ಉದ್ದಿಮೆದಾರರಿಗೆ ಶೇ. 4ರಷ್ಟು ಬಡ್ಡಿ ಸಬ್ಸಿಡಿ ಕಡಿತ ಮಾಡಲಾಗಿಲ್ಲ. ಕೇವಲ ಪರಿಶಿಷ್ಟ ವರ್ಗದ ಉದ್ದಿಮೆದಾರರಿಗೆ ನೀಡುತ್ತಿದ್ದ ಬಡ್ಡಿ ಸಬ್ಸಿಡಿಗೆ ಕೊಕ್ ನೀಡಲಾಗಿದೆ. ಬಡ್ಡಿ ಸಬ್ಸಿಡಿ ಕಡಿತಕ್ಕೆ ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆರ್ಥಿಕ ಇಲಾಖೆಯ ACS ಎಲ್.ಕೆ. ಅತೀಕ್, ಮಣಿವಣ್ಣನ್ ಹಾಗೂ ಎನ್. ಮಂಜುನಾಥ ಪ್ರಸಾದ್ ಅವರನ್ನು ಸಂಘದ ಪದಾಧಿಕಾರಿಗಳು ಭೇಟಿ ಮಾಡಿದ್ದಾರೆ. ಈ ವೇಳೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳಿಗೆ ಹಣ ಒದಗಿಸಲು ಹಿಂದುಳಿದ ವರ್ಗಗಳ ಇಲಾಖೆ ಹಣಕ್ಕೂ ಕೈ ಹಾಕಿದ ಸರ್ಕಾರ?
ಈ ಹಿಂದೆ ಎಸ್ಸಿ/ಎಸ್ಟಿಗೆ ಮೀಸಲಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದ ಕಾರಣಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ವಾಲ್ಮೀಕಿ ನಿಗಮದಲ್ಲಿನ ಅವ್ಯವಹಾರವಾಗಿರುವ ಬಗ್ಗೆಯೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆ ಎಸ್ಸಿ/ಎಸ್ಟಿ ಉದ್ದಿಮೆದಾರರಿಗೆ ಬಡ್ಡಿ ಸಬ್ಸಿಡಿಯನ್ನು ಸರ್ಕಾರ ಕಡಿತ ಮಾಡಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ವಾಲ್ಮೀಕಿ ಹಗರಣವನ್ನು ಸಿಎಂ ಸಿದ್ದರಾಮಯ್ಯ ಏಕೆ ತಡೆಯಲಿಲ್ಲ: ಸಚಿವೆ ನಿರ್ಮಲಾ ಸೀತಾರಾಮನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ