
ಉಡುಪಿ (ಅ.11): ಉಡುಪಿಗೆ ಶನಿವಾರ ಭೇಟಿ ನೀಡಿದ್ದ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಂಸಹಾರ ಸೇವಿಸಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ ಮತ್ತು ಪರ್ಯಾಯ ಶ್ರೀಗಳಿಂದ ಪ್ರಸಾದ್ ಸ್ವೀಕರಿಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆರೋಪಿಸುವ ಮೂಲದ ವಿವಾದ ಹುಟ್ಟು ಹಾಕಿದ್ದಾರೆ. ಆರೋಪಕ್ಕೆ ಸಾಕ್ಷಿ ನೀಡುವಂತೆ ಶಾಸಕ ರಘುಪತಿ ಭಟ್ ಸವಾಲು ಹಾಕಿದ್ದಾರೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಬಿಜೆಪಿಯವರು ಗುಲ್ಲೆಬ್ಬಿಸಿದ್ದರು. ಈಗ ಗೋವಾದ ಮುಖ್ಯಮಂತ್ರಿ ಮಾಂಸಹಾರ ಸೇವಿಸಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದು ಬಿಜೆಪಿಯವರಿಗೆ ಕಾಣಲಿಲ್ಲವೇ? ಅವರನ್ನು ಯಾಕೆ ಪ್ರಶ್ನಿಸಲಿಲ್ಲ? ಈಗ ಕೃಷ್ಣಮಠ ಅಪವಿತ್ರವಾಗಿಲ್ಲವೇ? ಸಿದ್ದರಾಮಯ್ಯ ಅವರ ವಿರುದ್ಧ ಅಪಪ್ರಚಾರ ಮಾಡಿದ ಬಿಜೆಪಿಯವರು ಈಗ ಜನರಿಗೆ ಏನೆಂದು ಉತ್ತರಿಸುತ್ತಾರೆ? ಎಂದು ಕಾಂಚನ್ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಮುಂಗಾರು ಮಳೆ..!
ಕಾಂಗ್ರೆಸ್ ನಾಯಕರು ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಅವರು ಮಾಂಸಾಹಾರ ತಿಂದು ಹೋದರು ಎಂದು ಗುಲ್ಲೆಬ್ಬಿಸಿ ಮುಗ್ಧ ಜನರನ್ನು ದಾರಿ ತಪ್ಪಿಸುವುದು, ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂದು ಬಿಂಬಿಸುವುದಕ್ಕಾಗಿ ಬಿಜೆಪಿ ಸಿದ್ಧಪಡಿಸಿರುವ ಟೂಲ್ ಕಿಟ್ ಭಾಗ ಎಂದು ಒಪ್ಪಿಕೊಳ್ಳಲಿ ಎಂದು ಕಾಂಚನ್ ಆಗ್ರಹಿಸಿದ್ದಾರೆ.
‘ಆರೋಪ ಸುಳ್ಳು’: ಗೋವಾ ಮುಖ್ಯಮಂತ್ರಿ ಮಾಂಸಾಹಾರ ಸೇವಿಸಿ ಕೃಷ್ಣಮಠಕ್ಕೆ ಭೇಟಿನೀಡಿದ್ದರು ಎಂಬ ಕಾಂಗ್ರೆಸ್ ಆರೋಪವನ್ನು ನಗರದ ಹಿರಿಯ ವೈದ್ಯ ಡಾ.ಕೃಷ್ಣಪ್ರಸಾದ್ ನಿರಾಕರಿಸಿದ್ದಾರೆ. ಡಾ.ಕೃಷ್ಣಪ್ರಸಾದ್ ಅವರ ಕಣ್ಣಿನ ಆಸ್ಪತ್ರೆಯ ಅಧುನಿಕ ಸೌಲಭ್ಯಗಳನ್ನು ಉದ್ಘಾಟಿಸಲು ಗೋವಾ ಮುಖ್ಯಮಂತ್ರಿ ಸಾವಂತ್ ಆಗಮಿಸಿದ್ದರು. ಈ ಸಂದರ್ಭ ಅವರು ನಿರೀಕ್ಷಣಾ ಮಂದಿರದಲ್ಲಿ ಸಸ್ಯಾಹಾರ ಮಾತ್ರ ಸೇವಿಸಿದ್ದರು. ಆಗ ಉಡುಪಿ ಶಾಸಕ ರಘುಪತಿ ಭಟ್ ಮತ್ತು ತಾನು ಅವರ ಜೊತೆಗಿದ್ದೆವು ಎಂದು ಡಾ.ಕೃಷ್ಣಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಸಾಕ್ಷಿ ಕೊಡಲಿ-ಭಟ್: ಗೋವಾದ ಸಿಎಂ ಪ್ರಮೋದ್ ಸಾವಂತ್ ಕೃಷ್ಣಮಠಕ್ಕೆ ತೆರಳುವ ಮುನ್ನ ಮಾಂಸಹಾರ ಸೇವಿಸಿದ್ದಾರೆ ಎಂದು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಅದಕ್ಕೆ ಸಾಕ್ಷಿ ನೀಡಬೇಕು ಎಂದು ಶಾಸಕ ರಘುಪತಿ ಭಟ್ ಸವಾಲು ಹಾಕಿದ್ದಾರೆ. ಗೋವಾ ಸಿಎಂ ಜೊತೆ 40-50 ಅಧಿಕಾರಿಗಳು ಬಂದಿದ್ದರು, ಅವರಿಗೆ ಮಾಂಸಹಾರದ ಊಟವನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಾವಂತ್ ಮಾಂಸಹಾರ ಸೇವಿಸಿಲ್ಲ, ಅವರ ಜೊತೆ ನಾನು ಒಟ್ಟಿಗೆ ಊಟ ಮಾಡಿದ್ದೇನೆ.
ಪ್ರವಾಸಿಗರ ಸ್ವರ್ಗ ಸೈಂಟ್ ಮೇರಿಸ್ ದ್ವೀಪ ಟೂರಿಸ್ಟ್ಗಳಿಗೆ ಮುಕ್ತ
ಅವರು ಶುದ್ಧ ಸಸ್ಯಹಾರ ಸೇವಿಸಿ ಮಠಕ್ಕೆ ಹೋಗಿದ್ದಾರೆ ಎಂದು ಶಾಸಕರು ಹೇಳಿದ್ದಾರೆ. ಸಿದ್ದರಾಮಯ್ಯನವರು ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿರುವುದನ್ನು ವಿಡಿಯೋ, ಪೋಟೊ ಸಹಿತ ಸಾಕ್ಷಿಯೊಂದಿಗೆ ಬಿಜೆಪಿ ಸಾಬೀತು ಮಾಡಿತ್ತು. ಕಾಂಗ್ರೆಸ್, ಸಾವಂತ್ ಅವರು ಮಾಂಸಹಾರ ಸೇವಿಸಿರುವ ಪೋಟೋ, ವಿಡಿಯೋ ನೀಡಿ ಮಾತನಾಡಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ