Latest Videos

ಘರ್ ವಾಪಸಿ ಚಟುವಟಿಕೆ ತೀವ್ರ; ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಬಾಂಬೆ ಬಾಯ್ಸ್!

By Kannadaprabha NewsFirst Published Aug 21, 2023, 4:31 AM IST
Highlights

 ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬಿಜೆಪಿಯ ಹಾಲಿ, ಮಾಜಿ ಶಾಸಕರ ‘ಕಾಂಗ್ರೆಸ್‌ ಘರ್‌ ವಾಪ್ಸಿ’ ಕುರಿತ ಚಟುವಟಿಕೆ ಭಾನುವಾರ ಮತ್ತಷ್ಟುಬಿರುಸುಗೊಂಡಿದೆ. ಒಂದು ಕಡೆ ಮಾಜಿ ಸಚಿವ ಹಾಗೂ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರೆ, ಇನ್ನೊಂದು ಕಡೆ ಕುಷ್ಟಗಿ ಶಾಸಕ ದೊಡ್ಡನಗೌಡರ್‌ ಅವರು ಕಾಂಗ್ರೆಸ್‌ಗೆ ವಾಪಸಾಗಲು ಸದ್ದಿಲ್ಲದೆ ಪ್ರಯತ್ನ ಆರಂಭಿಸಿದ್ದಾರೆ.

ಬೆಂಗಳೂರು (ಆ.21) :  ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬಿಜೆಪಿಯ ಹಾಲಿ, ಮಾಜಿ ಶಾಸಕರ ‘ಕಾಂಗ್ರೆಸ್‌ ಘರ್‌ ವಾಪ್ಸಿ’ ಕುರಿತ ಚಟುವಟಿಕೆ ಭಾನುವಾರ ಮತ್ತಷ್ಟುಬಿರುಸುಗೊಂಡಿದೆ. ಒಂದು ಕಡೆ ಮಾಜಿ ಸಚಿವ ಹಾಗೂ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರೆ, ಇನ್ನೊಂದು ಕಡೆ ಕುಷ್ಟಗಿ ಶಾಸಕ ದೊಡ್ಡನಗೌಡರ್‌ ಅವರು ಕಾಂಗ್ರೆಸ್‌ಗೆ ವಾಪಸಾಗಲು ಸದ್ದಿಲ್ಲದೆ ಪ್ರಯತ್ನ ಆರಂಭಿಸಿದ್ದಾರೆ.

ಏತನ್ಮಧ್ಯೆ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಬಿಜೆಪಿ ಹಾಗೂ ಜೆಡಿಎಸ್‌ನ 20 ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿ ಘರ್‌ ವಾಪ್ಸಿ ಪುಕಾರಿಗೆ ಮತ್ತಷ್ಟುತುಪ್ಪ ಸುರಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಇದೀಗ ತನ್ನ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆ ಹೆಣೆಯಲು ಸೋಮವಾರ ಪಕ್ಷದ ಕೋರ್‌ ಕಮಿಟಿ ಸಭೆ ಕರೆದಿದೆ.

 

Ghar wapsi: ಕಾಂಗ್ರೆಸ್‌ಗೆ ಸೋಮಶೇಖರ್‌ ಕರೆ ತರಲು ಶಾಸಕ ಶ್ರೀನಿವಾಸ್‌ಗೆ ಡಿಕೆ ಶಿವಕುಮಾರ್‌ ಟಾಸ್ಕ್

ಇಬ್ಬರ ಅಮಾನತು: ವಿಧಾನಸಭಾ ಚುನಾವಣೆ ಬಳಿಕ ಸ್ವಪಕ್ಷೀಯರ ವಿರುದ್ಧವೇ ಮುನಿಸಿಕೊಂಡಿರುವ ಎಸ್‌.ಟಿ.ಸೋಮಶೇಖರ್‌ ಅವರ ಮನವೊಲಿಕೆಗೆ ಶನಿವಾರವಷ್ಟೇ ಪಕ್ಷದ ಮುಖಂಡ ಸಿ.ಟಿ.ರವಿ ಮೂಲಕ ಬಿಜೆಪಿ ಪ್ರಯತ್ನ ಆರಂಭಿಸಿತ್ತು. ಇದರ ಬೆನ್ನಲ್ಲೇ ಸೋಮಶೇಖರ್‌ ಅವರ ಕೆಂಗಣ್ಣಿಗೆ ಗುರಿಯಾಗಿರುವ ಯಶವಂತಪುರ ಮಾಜಿ ಮಂಡಲ ಅಧ್ಯಕ್ಷ ಮಾರೇಗೌಡ ಮತ್ತು ಹಾಲಿ ಉಪಾಧ್ಯಕ್ಷ ಧನಂಜಯ ಅವರನ್ನು ಬಿಜೆಪಿಯಿಂದ ಭಾನುವಾರ ಉಚ್ಚಾಟಿಸಲಾಗಿದೆ. ಇಷ್ಟಾದರೂ ಸೋಮಶೇಖರ್‌ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಅನುದಾನ ಕೋರುವ ನೆಪದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

‘ಕೈ’ ಹಿಡೀತಾರಾ ಹಾಲಿ ಶಾಸಕ?:

ಸೋಮಶೇಖರ್‌, ಶಿವರಾಮ ಹೆಬ್ಬಾರ್‌ ರೀತಿಯಲ್ಲೇ ಬಿಜೆಪಿ ಹಾಲಿ ಶಾಸಕ ದೊಡ್ಡನಗೌಡರ್‌ ಹಾಗೂ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರೂ ಕಾಂಗ್ರೆಸ್‌ ಸೇರುವವರ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮುನೇನಕೊಪ್ಪ ಅವರಿಗೆ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರಿಂದ ಕಾಂಗ್ರೆಸ್‌ ಸೇರಲು ಬಹಿರಂಗ ಆಹ್ವಾನವೂ ಸಿಕ್ಕಿದೆ. ಆದರೆ, ಮುನೇನಕೊಪ್ಪ ಮಾತ್ರ ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆæ. ಇನ್ನು ದೊಡ್ಡನಗೌಡರ್‌ ಮಾತ್ರ ತೆರೆಮರೆಯಲ್ಲೇ ‘ಕೈ’ನಾಯಕರ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

Ghar vapasi: 'ಬೆಂಗಳೂರಿಗೆ ಹೋಗಿ ನಿರ್ಧರಿಸುತ್ತೇನೆ' ಬಿಜೆಪಿ ಶಾಸಕ ಹೆಬ್ಬಾರ್ ನಡೆ ಸಸ್ಪೆನ್ಸ್

ಡಿಕೆಶಿ-ಆಯನೂರು ಭೇಟಿ: ಈ ಹಿಂದೆ ಬಿಜೆಪಿಯಲ್ಲಿದ್ದು ಸದ್ಯ ಜೆಡಿಎಸ್‌ನಲ್ಲಿರುವ ಮಾಜಿ ಸಚಿವ ಆಯನೂರು ಮಂಜುನಾಥ್‌ ಕೂಡ ಕಾಂಗ್ರೆಸ್‌ ಸೇರ್ಪಡೆಗೆ ತುದಿಗಾಲಲ್ಲಿ ನಿಂತಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಮತ್ತೆ ಮಾತುಕತೆ ನಡೆಸಿದ್ದಾರೆ.

click me!