
ಮೈಸೂರು (ನ.4): ಹಸಿದ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನ ಉಚಿತವಾಗಿ ಬಿಸಿ ಊಟ ಒದಗಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ನಗರ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಅಕ್ಷಯ ಆಹಾರ ಪ್ರತಿಷ್ಠಾನ ಮತ್ತು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಂಯುಕ್ತವಾಗಿ ಕಾಲೇಜಿನ ಸುಮಾರು 200 ವಿದ್ಯಾರ್ಥಿನಿಯರಿಗೆ ದಿನನಿತ್ಯ ಮಧ್ಯಾಹ್ನದ ಬಿಸಿ ಊಟ ಕೊಡುವ ಯೋಜನೆಯನ್ನು ಆರಂಭಿಸಿದೆ.
ಈ ವೇಳೆ ಅಕ್ಷಯ ಆಹಾರ ಪ್ರತಿಷ್ಠಾನದ ರಾಜೇಂದ್ರ ಮಾತನಾಡಿ, ರೈತ ಬೆಳೆದ ಆಹಾರ ಪದಾರ್ಥಗಳು ಹಸಿದ ಹೊಟ್ಟೆ ಸೇರಬೇಕು, ಕಸದ ಬುಟ್ಟಿಯನಲ್ಲ. ರಾಷ್ಟ್ರೀಯ ಸಂಪತ್ತು ಹಾಳಾಗುವುದು ಸರಿಯಲ್ಲ. ಅಕ್ಷಯ ಆಹಾರ ಜೋಳಿಗೆಯ ಚಟುವಟಿಕೆಗಳು ನನ್ನ ಮನಸ್ಸಿಗೆ ಸಮಾಧಾನವನ್ನು ನೀಡಿದೆ. ವಿದ್ಯಾಭ್ಯಾಸದ ದಿನಗಳಲ್ಲಿ ನಾನು ಹಸಿವನ್ನು ಅನುಭವಿಸಿದವನು. ನಮಗೆ ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕಿಲ್ಲ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಲೇಜು ಶಿಕ್ಷಣ ಇಲಾಖೆ ಮೈಸೂರು ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕ ಎ.ಬಿ. ನಾಗೇಂದ್ರ ಪ್ರಸಾದ್ ಮಾತನಾಡಿ, ದಾಸೋಹ ನಮ್ಮ ಸಂಸ್ಕೃತಿಗೆ ಹೊಸದಲ್ಲ. ಹಸಿದವರಿಗೆ ಊಟ ನೀಡುವ ಪರಂಪರೆ ನಮ್ಮದು. ದೂರದ ಊರುಗಳಿಂದ ಶಿಕ್ಷಣಕ್ಕಾಗಿ ಇಲ್ಲಿ ಬಂದಿರುವ ಅನೇಕ ವಿದ್ಯಾರ್ಥಿನಿಯರು, ಹಸಿವಿನಿಂದ ಬಳಲುವುದನ್ನು ಈ ಕಾರ್ಯಕ್ರಮ ನೀಗಿಸಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಎಸ್. ಅನಿತಾ ಮಾತನಾಡಿ, ಈ ಕಾರ್ಯಕ್ರಮ ಆಯೋಜಿಸಲು ನನಗೆ ಪೆರೇರಣೆ ನನ್ನ ಕುಟುಂಬ. ಹಸಿದ ವಿದ್ಯಾರ್ಥಿಗಳನ್ನು ನನ್ನ ತಂದೆ ಮನೆಗೆ ಕರೆದು ಊಟ ನೀಡುತ್ತಿದ್ದರು. ನನ್ನ ತಾಯಿ ಪ್ರತಿದಿನ ಅನೇಕರಿಗೆ ಅಡುಗೆ ಮಾಡಿ ಊಟ ಬಡಿಸುತ್ತಿದ್ದು ನೋಡಿ ಬೆಳೆದವಳು. ಮಧ್ಯಾಹ್ನದ ನಂತರ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಉಳಿಯದೆ ಇರಲು ಹಸಿವು ಒಂದು ಪ್ರಮುಖ ಕಾರಣ ಎಂದರು.
ಐಕ್ಯೂಎಸಿ ಸಂಯೋಜಕಿ ಡಾ. ಪ್ರಿಯಾ ಉತ್ತಯ್ಯ, ಪತ್ರಾಂಕಿತ ವ್ಯವಸ್ಥಾಪಕ ಕೆ. ವೆಂಕಟೇಶ್ ಇದ್ದರು. ಕಾಲೇಜಿನ ಬಿಸಿ ಊಟ ಯೋಜನೆಯ ಸಂಚಾಲಕ ಡಾ. ಅಣ್ಣಯ್ಯ ತೈಲೂರ್ ಸ್ವಾಗತಿಸಿದರು. ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ. ಸರ್ವಮಂಗಳ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅಶ್ವಿನಿ ವಂದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ