
ಬೆಂಗಳೂರು (ಸೆ.7): ರಾಹುಗ್ರಸ್ತ ಚಂದ್ರಗ್ರಹಣದ ಅಪರೂಪದ ಖಗೋಳ ದೃಶ್ಯವನ್ನು ಕಣ್ತುಂಬಿಕೊಳ್ಳಲು ನಗರದ ಜವಾಹರ್ ಲಾಲ್ ನೆಹರು ತಾರಾಲಯ ಸಂಪೂರ್ಣ ಸಿದ್ಧತೆಯಾಗಿದೆ. ನಗರದ ಚಾಲುಕ್ಯ ವೃತ್ತದ ಬಳಿ ಇರುವ ಈ ತಾರಾಲಯವು ಸಾರ್ವಜನಿಕರಿಗೆ ಇಂದು ಅದ್ಭುತ ಗ್ರಹಣವನ್ನು ವೀಕ್ಷಿಸಲು ವಿಶೇಷ ವ್ಯವಸ್ಥೆ ಕಲ್ಪಿಸಿದೆ.
ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಗ್ರಹಣ ವೀಕ್ಷಣೆಗೆ ಅವಕಾಶವಿದ್ದು, ಜನಸಾಮಾನ್ಯರಿಗೆ ಉಚಿತ ಪ್ರವೇಶವನ್ನು ಒದಗಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಿ ಪೊಲೀಸರ ನಿಯೋಜಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನವನ್ನು ಸಹ ನಿಯೋಜಿಸಲಾಗಿದೆ. ತಾರಾಲಯದ ಸಿಬ್ಬಂದಿಯು 6 ಟೆಲಿಸ್ಕೋಪ್ಗಳು ಮತ್ತು ಒಂದು LCD ಪರದೆಯನ್ನು ಸ್ಥಾಪಿಸಿದ್ದು, ಗ್ರಹಣದ ಸೂಕ್ಷ್ಮ ದೃಶ್ಯಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ಸಹಾಯ ಮಾಡಲಿದೆ.
ರಾತ್ರಿ 8:30 ರಿಂದ 9:30 ರವರೆಗೆ ಚಂದ್ರಗ್ರಹಣದ ಕುರಿತು ಒಂದು ಗಂಟೆಯ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಗ್ರಹಣದ ವೈಜ್ಞಾನಿಕ ಮಹತ್ವವನ್ನು ತಿಳಿಸಲಾಗುವುದು. ರಾತ್ರಿ 9:30 ರ ನಂತರ ಟೆಲಿಸ್ಕೋಪ್ ಮೂಲಕ ಗ್ರಹಣವನ್ನು ನೋಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ವೀಕ್ಷಿಸಬಹುದು ಎಂದು ತಾರಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಗ್ರಹಣವು ಪ್ರಪಂಚದ ಶೇಕಡಾ 88ರಷ್ಟು ಜನರಿಗೆ ಗೋಚರವಾಗಲಿದ್ದು, ಭಾರತದಿಂದ ಸಂಪೂರ್ಣವಾಗಿ ಕಾಣಬಹುದಾಗಿದೆ. ಮುಂದಿನ ಚಂದ್ರಗ್ರಹಣವು ಮಾರ್ಚ್ 3, 2026 ರಂದು ಕಾಣಲಿದ್ದು, ಈ ಖಗೋಳ ವಿದ್ಯಮಾನವು ಜನರಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ನೆಹರು ತಾರಾಲಯದ ಈ ಕಾರ್ಯವು ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲರಿಗೂ ಅಪರೂಪದ ಅವಕಾಶವನ್ನು ಒದಗಿಸಲಿದೆ. ಗ್ರಹಣದ ರೋಮಾಂಚಕ ಕ್ಷಣಗಳನ್ನು ಕಾಣಲು ತಾರಾಲಯಕ್ಕೆ ಭೇಟಿ ನೀಡಿ ಕಣ್ತುಂಬಿಕೊಳ್ಳಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ