
ಬೆಂಗಳೂರು (ಜು.07): ಕಳೆದು ಹೋಗಿರುವ ಪಾಸ್ಪೋರ್ಟ್ನ ಮರು ವಿತರಣೆಗೆ ಕೋರಿ ಸಲ್ಲಿಸುವ ಅರ್ಜಿಯೊಂದಿಗೆ ಪೊಲೀಸರು ದಾಖಲಿಸಿದ ಪ್ರಥಮ ವರ್ತಮಾನ ವರದಿಯನ್ನು (ಎಫ್ಐಆರ್) ಲಗತ್ತಿಸುವುದು ಕಡ್ಡಾಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೆಂಗಳೂರಿನ ಇಟ್ಟಮಡು ನಿವಾಸಿ ಎ.ಶ್ರೀಧರ್ ಕುಲಕರ್ಣಿ ಎಂಬುವವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಸ್ಪಷ್ಟಪಡಿಸಿದೆ. ಅರ್ಜಿದಾರರ ವಿರುದ್ಧ ಅವರ ಪತ್ನಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ನ್ಯಾಯಾಲಯದಲ್ಲಿ ಬಾಕಿಯಿದೆ. 2023ರ ಜೂ.14ರಂದು ಮ್ಯಾಜಿಸ್ಪ್ರೇಟ್ ಕೋರ್ಟ್ ಅರ್ಜಿದಾರರ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿತ್ತು.
ಈ ಮಧ್ಯೆ ಅರ್ಜಿದಾರರ ಪಾಸ್ಪೋರ್ಟ್ ಕಳೆದು ಹೋಗಿತ್ತು. ಇದರಿಂದ ಕಳೆದು ಹೋಗಿರುವ ಪಾಸ್ಪೋರ್ಟ್ ಮರು ವಿತರಿಸಲು ಕೋರಿ ಅರ್ಜಿದಾರರು ಬೆಂಗಳೂರಿನ ಕೋರಮಂಗಲದ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿಗೆ 2023ರ ಏ.13ರಂದು ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಆರ್ಪಿಒ ಪರಿಗಣಿಸಿರಲಿಲ್ಲ. ಇದರಿಂದ ಕುಲಕರ್ಣಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಪಾಸ್ಪೋರ್ಟ್ ವಿತರಿಸಲು ಆರ್ಪಿಒಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರು ಪ್ರಕರಣ ಹೊಸ ಪಾಸ್ಪೋರ್ಟ್ ವಿತರಣೆಗೆ ಸಂಬಂಧಿಸಿದ ಪ್ರಕರಣವಲ್ಲ.
ಹಫ್ತಾ ವಸೂಲಿಗೆ ಒತ್ತಡ: ಕಲಬುರಗಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಕಾನ್ಸ್ಟೇಬಲ್ಗಳು
ಈಗಾಗಲೇ ವಿತರಿಸಿದ್ದ ಪಾಸ್ಪೋರ್ಟ್ ಕಳೆದುಕೊಂಡು ಮರು ವಿತರಣೆಗೆ ಕೋರಿದ ಪ್ರಕರಣವಾಗಿದೆ. ಪಾಸ್ಪೋರ್ಟ್ ಅಧಿನಿಯಮ-1980ರಲ್ಲಿ ನವೀಕರಿಸಿದ ಪಾಸ್ ಪೋರ್ಟ್ ವಿತರಣೆಗೆ ಸಲ್ಲಿಸುವ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳ ಬಗ್ಗೆ ಉಲ್ಲೇಖವಾಗಿದೆ ಎಂದು ತಿಳಿಸಿದೆ. ಅಧಿನಿಯಮ ಪ್ರಕಾರ ಕಳೆದು ಹೋದ ಪಾಸ್ಪೋರ್ಟ್ ಮರು ವಿತರಣೆಗೆ ಪೊಲೀಸ್ ಎಫ್ಐಆರ್ ಒದಗಿಸುವುದು ಪೂರ್ವ ಷರತ್ತಿನಲ್ಲಿ ಒಂದಾಗಿದೆ. ಅರ್ಜಿದಾರರು ಅರ್ಜಿಯೊಂದಿಗೆ ಎಫ್ಐಆರ್ ಸೇರಿ ಅಗತ್ಯ ದಾಖಲೆ ಸಲ್ಲಿಸಿಲ್ಲ. ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ವಿದೇಶ ಪ್ರಯಾಣ ಎನ್ನುವುದು ಮೂಲಭೂತ ಹಕ್ಕು.
ರೈತರನ್ನು ವಿಶ್ವಾಸಕ್ಕೆ ಪಡೆದು ಪೆರಿಫೆರಲ್ ರಸ್ತೆಗೆ ಭೂ ಪರಿಹಾರ ನಿರ್ಧಾರ: ಡಿಕೆಶಿ
ಆದರೆ, ಪಾಸ್ಪೋರ್ಟ್ ಕಾಯ್ದೆ-1967 ಹಾಗೂ ಪಾಸ್ ಪೋರ್ಟ್ ಅಧಿನಿಯಮ-1980ರಿಂದ ನಿಯಂತ್ರಿಸಲ್ಪಡುತ್ತದೆ. ನಿಯಮಗಳು ನಿಗದಿಪಡಿಸಿದ ನಿರ್ದಿಷ್ಟ ಪ್ರಕ್ರಿಯೆಯನ್ನು ಪ್ರತಿಯೊಬ್ಬರೂ ಅನುಸರಿಸಬೇಕಾಗುತ್ತದೆ. ಪಾಸ್ಪೋರ್ಟ್ ಮರು ವಿತರಣೆ ಸಲ್ಲಿಸುವ ಅರ್ಜಿಯೊಂದಿಗೆ ಸೂಕ್ತ ದಾಖಲೆ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದ ಹೈಕೋರ್ಟ್ ಅರ್ಜಿದಾರರ ಮನವಿ ತಿರಸ್ಕರಿಸಿದೆ. ಒಂದು ವೇಳೆ ಅರ್ಜಿದಾರರು ಅಗತ್ಯವಾದ ದಾಖಲೆಗಳು ಹಾಗೂ ಶುಲ್ಕದೊಂದಿಗೆ ಸೂಕ್ತ ಅರ್ಜಿ ಸಲ್ಲಿಸಿದರೆ, ಅದನ್ನು ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಶೀಘ್ರ ಕಾನೂನು ಪ್ರಕಾರ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ