
ಹುಬ್ಬಳ್ಳಿ (ಜು.19): ಮಹದಾಯಿ ಸಮಸ್ಯೆ ಪರಿಹರಿಸಿ ನೀರು ನೀಡುವವರೆಗೂ ಬ್ಯಾಂಕ್ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡದಿರುವಂತಹ ಅಭಿಯಾನ ಹಮ್ಮಿಕೊಳ್ಳುವುದಾಗಿ ಕಳಸಾ-ಬಂಡೂರಿ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏಳು ವರ್ಷಗಳಿಂದ ಮಹದಾಯಿಗಾಗಿ ನಿರಂತರ ಹೋರಾಟ ನಡೆದಿದೆ. ನ್ಯಾಯಾಧಿಕರಣ ತೀರ್ಪು ಬಂದು ಮೂರು ವರ್ಷ ಕಳೆದರೂ ರಾಜ್ಯ ಸರ್ಕಾರ ನೀರು ಪೂರೈಕೆಗೆ ಅಗತ್ಯ ಕ್ರಮಕೈಗೊಂಡಿಲ್ಲ. ಕೇಂದ್ರಕ್ಕೆ ಡಿಪಿಆರ್ ಸಲ್ಲಿಕೆಯನ್ನೇ ಮಾಡಿಲ್ಲ. ತಾಂತ್ರಿಕ ಪ್ರಕ್ರಿಯೆಗಳನ್ನು ನಡೆಸದೆ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರಗುಂದ ಬಂಡಾಯದ ಹೋರಾಟ ಜುಲೈ 21ಕ್ಕೆ 41 ವರ್ಷ ಪೂರೈಸಲಿದೆ. ಹೋರಾಟ ಈ ವರೆಗೂ ತಾರ್ಕಿಕ ಅಂತ್ಯ ಕಾಣದಿರಲು ಕಾರಣವೇನು? ಎಲ್ಲಿ ತಪ್ಪಾಗಿದೆ ಎಂಬುದು ಸೇರಿ ಹಲವು ವಿಚಾರಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಾಗುವುದು. ಇದೇ ವೇಳೆ 1981ರಲ್ಲಿ ಬೆಟರ್ಮೆಂಟ್ ಲೆವಿ ಆ್ಯಂಡ್ ವಾಟರ್ ರೇಟ್ (ಸಮರ್ಪಕವಾಗಿ ನೀರು ಒದಗಿಸದೆ ಕರ ವಿಧಿಸಿದ ಪ್ರಕರಣ) ವಿರುದ್ಧ ನಡೆದಿದ್ದ ನರಗುಂದ ಬಂಡಾಯದ ಮಾದರಿಯಲ್ಲಿ ಹೋರಾಟ ಮಾಡಲಾಗುವುದು. ಮಹದಾಯಿ ನೀರು ಕೊಡುವವರೆಗೆ ಸಾಲ ಮರುಪಾವತಿ ಮಾಡದಿರಲು ತೀರ್ಮಾನ ಕೈಗೊಳ್ಳಲಾಗುವುದು. ಅದೇ ರೀತಿ ರೈತರಿಗೆ ಕರೆ ನೀಡುತ್ತೇವೆ ಎಂದರು.
Chikkamagaluru: ಕಸ್ತೂರಿ ರಂಗನ್ ವರದಿ ವಿರೋಧಿಸಿ ಬಂದ್ ಮಾಡುವ ನಿರ್ಧಾರ
ಮಹದಾಯಿ ವ್ಯಾಪ್ತಿಯ ಜಿಲ್ಲೆಯ 4ಜಿಲ್ಲೆ 9ತಾಲೂಕುಗಳಲ್ಲಿ ಎಲ್ಲ ರೈತ ಮುಖಂಡರ ಜೊತೆಗೆ ಸಾಲ ಮರುಪಾವತಿ ಮಾಡದಂತೆ ಜಾಗೃತಿ ಮೂಡಿಸುತ್ತೇವೆ. ಪ್ರತಿಭಟನೆ ಮಾಡುವುದು, ಟೈರ್ ಸುಡುವ ಹೋರಾಟಕ್ಕೆ ಹೋಗುವುದು ಬೇಡ ಎಂಬುದು ನಮ್ಮ ಉದ್ದೇಶ. ಡಿಸೆಂಬರ್ವರೆಗೆ ಹೋರಾಟ ನಡೆಸದಂತೆ ಜನಪ್ರತಿನಿಧಿಗಳು ಹೇಳಿದ್ದಾರೆ. ಆದರೆ ಅವರ ಮಾತಿನ ಬಗ್ಗೆ ನಮಗೆ ವಿಶ್ವಾಸವಿಲ್ಲ. ಎಲ್ಲ ಪಕ್ಷದವರೂ ನಮ್ಮವರೆ. ಅವರು ಈ ಹೋರಾಟವನ್ನು ರಾಜಕೀಯ ಅಸ್ತ್ರವಾಗಿ ಮಾಡಿಕೊಂಡಿದ್ದಾರೆ. ರೈತರೆಂದರೆ ಬೆಂಕಿ ಹಚ್ಚುವುದು, ಕಲ್ಲು ಹೊಡೆಯುವುದು ಎಂಬ ಕಲ್ಪನೆ ಜನರಲ್ಲಿದೆ. ಹೀಗಾಗಿ ಹೊಸ ಬಗೆಯ ಸುಧಾರಿತ ಹೋರಾಟಕ್ಕೆ ಅಣಿಯಾಗುತ್ತೇವೆ.
Kolar Muduvadi Lake: ಆಯಾ ತಪ್ಪಿ ಬಿದ್ರೇ ಶಿವನ ಪಾದ ಸೇರೊದು ಗ್ಯಾರಂಟಿ!
ರೈತರಿಂದ ಅಸಭ್ಯ ವರ್ತನೆ ಎಂಬ ಆರೋಪ ಬಾರದಂತೆ ಹೋರಾಟ ಮಾಡುವ ವಿಧಾನವಾಗಿ ಸಾಲ ಮರುಪಾವತಿ ಮಾಡದಂತ ಅಭಿಯಾನಕ್ಕೆ ಸಿದ್ಧರಾಗುತ್ತಿದ್ದೇವೆ. ಜು.21ರಂದು ಈ ಬಗ್ಗೆ ಅಧಿಕೃತ ಘೋಷಣೆ ಮಾಡುತ್ತೇವೆ ಎಂದು ವಿಜಯ ಕುಲಕರ್ಣಿ ತಿಳಿಸಿದರು. ವಿಕಾಸ ಸೊಪ್ಪಿನ ಮಾತನಾಡಿ, ಜು. 21ರಂದು ರೈತ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲ ರೈತ ಮುಖಂಡರು ಸೇರಿ ಚಿಕ್ಕನರಗುಂದದ ಬಳಿ ಈರಪ್ಪ ಕಡ್ಲಿಕೊಪ್ಪ ಸ್ಮಾರಕದ ಬಳಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಒಂದಾಗಿ ಹೋರಾಟಕ್ಕೆ ಅಣಿಯಾಗಿದ್ದೇವೆ. ಹುಬ್ಬಳ್ಳಿ ಧಾರವಾಡ ಎಲ್ಲಾ ಸಂಘಟನೆಗಳ ಜತೆಗೆ ಸೇರಿಕೊಂಡು ಹೋರಾಟ ಮಾಡಲಾಗುವುದು ಎಂದರು. ಸಂಜೀವ ಧುಮಕನಾಳ ಮಾತನಾಡಿ, ಆನಂದ ದಲಬಂಜನ, ಬಸವರಾಜ ತೇರದಾಳ, ಕುಬೇರ ಪವಾರ್ ಸೇರಿ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ