ನಾಡಗೀತೆಗೆ ಬೌದ್ಧ ಪದ ಸೇರ್ಪಡೆಗೆ ತಜ್ಞರ ಸಮಿತಿಯಿಂದ ಶಿಫಾರಸು; ಮಹತ್ವದ ಬದಲಾವಣೆ ಸಾಧ್ಯತೆ

Published : Jul 15, 2026, 08:40 AM IST
DK Shivakumar

ಸಾರಾಂಶ

ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯಲ್ಲಿ 'ಪಾರಸಿಕ ಜೈನರುದ್ಯಾನ' ಎಂಬ ಸಾಲಿಗೆ 'ಬೌದ್ಧ' ಪದವನ್ನು ಸೇರಿಸಲು ತಜ್ಞರ ಸಮಿತಿಯು ಸರ್ಕಾರಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿದೆ. ಕುವೆಂಪು ಅವರ ಮೂಲ ಕರಡಿನಲ್ಲಿ ಈ ಪದವಿದ್ದು, ಈ ಸೇರ್ಪಡೆಯಿಂದ ಗೀತೆಯ ಲಯಕ್ಕೆ ಧಕ್ಕೆಯಾಗುವುದಿಲ್ಲ ಎಂದು ಸಮಿತಿ ಖಚಿತಪಡಿಸಿದೆ.

ಬೆಂಗಳೂರು: ನಾಡಗೀತೆಯಲ್ಲಿ ಇರುವ ‘ಪಾರಸಿಕ ಜೈನರುದ್ಯಾನ’ ಎಂಬ ಸಾಲನ್ನು ಪರಿಷ್ಕರಿಸಿ ‘ಬೌದ್ಧ’ ಪದವನ್ನೂ ಒಳಗೊಂಡಂತೆ ‘ಪಾರಸಿಕ ಜೈನ ಬೌದ್ಧರುದ್ಯಾನ’ ಎಂದು ಮಾರ್ಪಾಡು ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಒಳಗೊಂಡ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿದೆ.

ಬೌದ್ಧರುದ್ಯಾನ ಮತ್ತು ಜೈನರುದ್ಯಾನ

ರಾಷ್ಟ್ರಕವಿ ಕುವೆಂಪು ಅವರು 1924ರಲ್ಲಿ ಬರೆದಿದ್ದ ನಾಡಗೀತೆಯ ಮೊದಲ ಕರಡು ಪ್ರತಿಯಲ್ಲಿ ‘ಬೌದ್ಧರುದ್ಯಾನ’ ಎಂಬ ಪದವಿತ್ತು. ಆದರೆ, 1930ರಲ್ಲಿ ಅವರ ‘ಕೊಳಲು’ ಕವನ ಸಂಕಲನದಲ್ಲಿ ಈ ಹಾಡು ಪ್ರಕಟವಾದಾಗ ಅದು ‘ಜೈನರುದ್ಯಾನ’ ಎಂದಾಗಿತ್ತು. ಬೌದ್ಧ ಧರ್ಮಕ್ಕೆ ಇರುವ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ, ನಾಡಗೀತೆಯಲ್ಲಿ ಮತ್ತೆ ಬೌದ್ಧ ಪದವನ್ನು ಸೇರಿಸಬೇಕು ಎಂದು ಕೋರಿ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರು 2025ರ ನವೆಂಬರ್‌ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.

ಈ ಪತ್ರದ ಹಿನ್ನೆಲೆಯಲ್ಲಿ ಅಂದಿನ ಸಿಎಂರ ಸೂಚನೆಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 8 ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇದರ ಪದನಿಮಿತ್ತ ಅಧ್ಯಕ್ಷರಾಗಿದ್ದು, ಸಾಹಿತಿಗಳಾದ ಹಂಪ ನಾಗರಾಜಯ್ಯ, ಕುವೆಂಪು ಅವರ ಅಳಿಯ ಡಾ. ಕೆ. ಚಿದಾನಂದ, ಎಸ್.ಜಿ. ಸಿದ್ದರಾಮಯ್ಯ, ಆಶಾ ದೇವಿ, ದ್ವಾರಕಾನಾಥ್ ಚೊಕ್ಕ, ಮೂಡ್ನಾಕೂಡು ಚಿನ್ನಸ್ವಾಮಿ, ಕಾಳೇಗೌಡ ನಾಗವಾರ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಸಮಿತಿಯ ಸದಸ್ಯರಾಗಿದ್ದರು.

ಬರಗೂರು ರಾಮಚಂದ್ರಪ್ಪ ಹೊರತುಪಡಿಸಿದಂತೆ ಉಳಿದ ಎಲ್ಲರೂ ಸಭೆ ಸೇರಿ ಸುದೀರ್ಘವಾಗಿ ಚರ್ಚೆ ನಡೆಸಿ ಬೌದ್ಧರುದ್ಯಾನ ಪದ ಸೇರ್ಪಡೆ ಶಿಫಾರಸು ಮಾಡುವ ತೀರ್ಮಾನ ಕೈಗೊಂಡಿದ್ದರು.

ಹೊಸ ಸೇರ್ಪಡೆಯಿಂದ ಲಯ ಬದಲಾಗುತ್ತಾ?

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕುವೆಂಪು ರಚಿತ ಗೀತೆಯ ಮೊದಲ ಕರಡಿನಲ್ಲಿ ಬೌದ್ಧ ಪದವನ್ನು ಬಳಸಿದ್ದರಿಂದ ಹಾಗೂ ತಮ್ಮ ಇತರೆ ಸಾಹಿತ್ಯದಲ್ಲಿ ಬುದ್ಧನ ಕುರಿತು ಗೌರವ ವ್ಯಕ್ತಪಡಿಸಿರುವುದರಿಂದ, ಈ ಪದ ಸೇರ್ಪಡೆಯು ಅವರ ಆಶಯಗಳಿಗೆ ವಿರುದ್ಧವಾಗಿಲ್ಲ. ಹೊಸ ಪದದ ಸೇರ್ಪಡೆಯಿಂದ ಹಾಡಿನ ಉದ್ದ ಹೆಚ್ಚಾಗುವುದಿಲ್ಲ ಎಂಬುದನ್ನು ಸಮಿತಿಯ ಸಭೆಯಲ್ಲಿ ಖಚಿತಪಡಿಸಿಕೊಳ್ಳಲಾಗಿದೆ ಎಂದರು.

‘ಬೌದ್ಧ’ ಪದವನ್ನು ಸೇರಿಸುವುದರಿಂದ ನಾಡಗೀತೆಯ ಮೂಲ ಲಯಕ್ಕೆ ಯಾವುದೇ ಭಂಗ ಬರುವುದಿಲ್ಲ ಎಂಬುದನ್ನು ಕೂಡ ಸಮಿತಿ ಮನಗಂಡಿದೆ. ಈ ಎಲ್ಲಾ ಅಂಶಗಳನ್ನು ಒಳಗೊಂಡ ಸಭೆಯ ನಡಾವಳಿಗಳನ್ನು ಸಿದ್ಧಪಡಿಸಿ, ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ. ಈ ಶಿಫಾರಸಿನ ಕುರಿತು ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫುಟ್ಪಾತ್ ಒತ್ತುವರಿ, ವಾಹನ ತೆರವು ಬಳಿಕ, ಈಗ ಮತ್ತೊಂದು ಮಹತ್ವದ ಅಭಿಯಾನ ಘೋಷಿಸಿದ ಸಚಿವ ಕೃಷ್ಣಬೈರೇಗೌಡ! ಆ.1ರಿಂದಲೇ ಶುರು!
ಬೆಂಗಳೂರಿನಲ್ಲಿದ್ದ ಚುಂಚನಗಿರಿ ಮಠದ 100 ಕೋಟಿ ಮೌಲ್ಯದ 6 ಎಕರೆ ಭೂಮಿ ಕಬಳಿಕೆ ಯತ್ನ