
ಕಲಬುರಗಿ (ಮೇ.13) ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ಘಟನೆ ನಡೆದಿದೆ. ಆಸ್ಪತ್ರೆಯ ಮೂರನೇ ಮಹಡಿಯ ಲಿಫ್ಟ್ನಲ್ಲಿ ತಾಂತ್ರಿಕ ದೋಷದಿಂದ 8 ಜನ ಸಿಬ್ಬಂದಿ ಸಿಲುಕಿ ಒಂದು ಗಂಟೆಗೂ ಹೆಚ್ಚು ಕಾಲ ತೀವ್ರ ಪರದಾಟ ಅನುಭವಿಸಿದ ಘಟನೆ ಬೆಳಕಿಗೆ ಬಂದಿದೆ.
ಘಟನೆ ಹೇಗಾಯ್ತು?
ಬೆಳಿಗ್ಗೆ 10 ಗಂಟೆ ಸುಮಾರಿಗೆ, ಗ್ರೌಂಡ್ ಫ್ಲೋರ್ನಿಂದ 6ನೇ ಮಹಡಿಗೆ ತೆರಳಲು ಲಿಫ್ಟ್ ಹತ್ತಿದ 8 ಜನ ಸಿಬ್ಬಂದಿ. ಆದರೆ ಕೊಂಡೊಯ್ಯುತ್ತಿದ್ದ ಲಿಫ್ಟ್, ಮೂರನೇ ಮಹಡಿಯಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ. ಈ ಲಿಫ್ಟ್ ಮೂರನೇ ಮಹಡಿಗೆ ಸಂಪರ್ಕವಿಲ್ಲದ ಕಾರಣ, ಆ ಮಹಡಿಯ ಬಾಗಿಲಿಗೆ ಗೋಡೆ ನಿರ್ಮಿಸಲಾಗಿತ್ತು. ಇದರಿಂದ ಲಿಫ್ಟ್ನ ದ್ವಾರ ತೆರೆಯಲು ಸಾಧ್ಯವಾಗದೆ, ಸಿಬ್ಬಂದಿ ಗಾಳಿ ಮತ್ತು ಬೆಳಕಿಲ್ಲದ ವಾತಾವರಣದಲ್ಲಿ ತಾಸುಗಟ್ಟಲೇ ನಿಂತಲ್ಲೇ ನಿಂತು ಆತಂಕಪಡುವಂತಾಯಿತು.
ಸಿಬ್ಬಂದಿ ಸಿಲುಕಿರುವ ಬಗ್ಗೆ ತಿಳಿದ ತಕ್ಷಣ ಆಸ್ಪತ್ರೆಯ ಅಧಿಕಾರಿಗಳು ಕಾರ್ಮಿಕರ ತಂಡವನ್ನು ಕರೆದು ರಕ್ಷಣಾ ಕಾರ್ಯ ಆರಂಭಿಸಿದರು. ಡ್ರಿಲ್ ಮಶೀನ್ ಬಳಸಿ ಮೂರನೇ ಮಹಡಿಯ ಗೋಡೆಯನ್ನು ಒಡೆದು, ಲಿಫ್ಟ್ನ ದ್ವಾರವನ್ನು ಅನ್ಲಾಕ್ ಮಾಡಲಾಯಿತು. ಸುಮಾರು 11 ಗಂಟೆಯ ಹೊತ್ತಿಗೆ, ಒಂದು ಗಂಟೆಯ ರಕ್ಷಣಾ ಕಾರ್ಯಾಚರಣೆಯ ಬಳಿಕ ಎಲ್ಲ 8 ಜನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು.
ಒಂದು ಗಂಟೆಗೂ ಹೆಚ್ಚು ಕಾಲ ಲಿಫ್ಟ್ನಲ್ಲಿ ಸಿಲುಕಿದ್ದರಿಂದ ಸಿಬ್ಬಂದಿ ಆತಂಕ ಮತ್ತು ಉಸಿರಾಟದ ತೊಂದರೆಯನ್ನು ಎದುರಿಸಿದ್ದರು. ಹೊರಬಂದ ಬಳಿಕ ಎಲ್ಲರಿಗೂ ತಕ್ಷಣವೇ ವೈದ್ಯಕೀಯ ಉಪಚಾರ ನೀಡಲಾಯಿತು. ಆರೋಗ್ಯ ತಪಾಸಣೆಯ ನಂತರ, ಸಿಬ್ಬಂದಿಯನ್ನು ಕರ್ತವ್ಯಕ್ಕೆ ಮರಳಿ ಕಳುಹಿಸಲಾಗಿದೆ ಎಂದು ಜಿಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕದನ ವಿರಾಮಕ್ಕೆ ಪ್ರಿಯಾಂಕ್ ಖರ್ಗೆ ಅಸಮಾಧಾನ, ಪ್ರಧಾನಿ ಮೋದಿಗೆ ಎರಡು ಪ್ರಶ್ನೆ
ಜಿಮ್ಸ್ ಆಸ್ಪತ್ರೆಯ ಯಡವಟ್ಟು:
ಈ ಘಟನೆಯಿಂದ ಜಿಮ್ಸ್ ಆಸ್ಪತ್ರೆಯ ಲಿಫ್ಟ್ ನಿರ್ವಹಣೆ ಮತ್ತು ತಾಂತ್ರಿಕ ಸೌಲಭ್ಯಗಳ ಕುರಿತು ಪ್ರಶ್ನೆಗಳು ಎದ್ದಿವೆ. ಮೂರನೇ ಮಹಡಿಗೆ ಲಿಫ್ಟ್ಗೆ ಅಗತ್ಯವಿಲ್ಲದಿದ್ದರೂ ಗೋಡೆ ನಿರ್ಮಾಣದ ನಿರ್ಧಾರ ಮತ್ತು ಲಿಫ್ಟ್ನ ತಾಂತ್ರಿಕ ದೋಷವು ಈ ಘಟನೆಗೆ ಕಾರಣವಾಗಿದೆ.
ಹೊರಬಂದ ಸಿಬ್ಬಂದಿ, 'ಗಾಳಿಯೂ ಇಲ್ಲದ, ಬೆಳಕೂ ಇಲ್ಲದ ಲಿಫ್ಟ್ನಲ್ಲಿ ಸಿಲುಕಿದ್ದು ಭಯ, ಆತಂಕಗೊಂಡಿದ್ದೆವು. ರಕ್ಷಣೆ ಬಳಿಕ ನಿಟ್ಟುಸಿರು ಬಿಟ್ಟೆವು' ಎಂದ ಸಿಬ್ಬಂದಿ. ಜಿಮ್ಸ್ ಆಸ್ಪತ್ರೆಯ ಅಧಿಕಾರಿಗಳು, ಇಂತಹ ಘಟನೆ ಮರುಕಳಿಸದಂತೆ ಎಲ್ಲ ಲಿಫ್ಟ್ಗಳ ತಪಾಸಣೆ ಮತ್ತು ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: 'ನಮಗೆ ಯುದ್ಧನೂ ಬೇಕು, ಬುದ್ದನೂ ಬೇಕು': ಮಲ್ಲಿಕಾರ್ಜುನ ಖರ್ಗೆ
ಒಟ್ಟಿನಲ್ಲಿ ಈ ಘಟನೆಯಿಂದ ಜಿಮ್ಸ್ ಆಸ್ಪತ್ರೆಯ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿದ್ದು, ಆಡಳಿತವು ತಕ್ಷಣದ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ