ಕಾಂಗ್ರೆಸ್‌ನ ಉಚಿತ ಭಾಗ್ಯಗಳಿಂದ ಆರ್ಥಿಕ ಸ್ಥಿತಿ ಗಂಭೀರ: ನ್ಯಾ.ಸಂತೋಷ್‌ ಹೆಗ್ಡೆ

By Kannadaprabha NewsFirst Published Jul 3, 2023, 4:45 AM IST
Highlights

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಉಚಿತ ಭಾಗ್ಯಗಳಿಂದ ಆರ್ಥಿಕ ಪರಿಸ್ಥಿತಿ ಮೇಲೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಬೀರಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆತಂಕ ವ್ಯಕ್ತಪಡಿಸಿದರು. 

ಮಂಡ್ಯ (ಜು.03): ರಾಜ್ಯ ಸರ್ಕಾರ ಜಾರಿಗೊಳಿಸಿರುವ ಉಚಿತ ಭಾಗ್ಯಗಳಿಂದ ಆರ್ಥಿಕ ಪರಿಸ್ಥಿತಿ ಮೇಲೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಬೀರಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆತಂಕ ವ್ಯಕ್ತಪಡಿಸಿದರು. ಭಾನುವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಉಚಿತ ಭಾಗ್ಯಗಳ ಪರಿಣಾಮ ಮುಂದಿನ ಆರು ತಿಂಗಳಲ್ಲಿ ಎಲ್ಲರಿಗೂ ಗೊತ್ತಾಗಲಿದೆ. ಇವುಗಳಿಂದ ಜನರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ. ಬಿಟ್ಟಿ ಭಾಗ್ಯಗಳಿಂದ ಅತ್ತೆ-ಸೊಸೆ ನಡುವೆ ಜಗಳ ಆಗಬಹುದು. 

ಮಹಿಳೆಯರು ಹೀಗೆ ಬಸ್ಸಿನಲ್ಲಿ ಹೋಗುತ್ತಿದ್ದರೆ ಗಂಡಸರು ಬೇರೆ ಬಸ್‌ಗಳಲ್ಲಿ ಹೋಗಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಈಗಾಗಲೇ ವಿದ್ಯುತ್‌ ಬಿಲ್ಲನ್ನು ಹೆಚ್ಚಿಸಿದ್ದಾರೆ. ವಿದ್ಯುತ್‌ ಉತ್ಪಾದನೆ ಕಡಿಮೆಯಾಗಿದೆ. ಎಲ್ಲವನ್ನೂ ಮುಂದಿನ ದಿನಗಳಲ್ಲಿ ನಿರ್ವಹಣೆ ಮಾಡುವುದು ಕಷ್ಟವಾಗಲಿದೆ. ಉಚಿತವಾಗಿ ಯಾವುದನ್ನು ಜನರಿಗೆ ಕೊಡಬಾರದು. ದುಡಿದು ಬದುಕುವುದನ್ನು ಕಲಿಸಬೇಕು. ಜನರನ್ನು ಸೋಮಾರಿಗಳನ್ನಾಗಿ ಮಾಡದೆ ಶ್ರಮಜೀವಿಗಳನ್ನಾಗಿ ಸ್ವಾವಲಂಬಿಗಳಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು. ಯಾವುದೇ ವ್ಯಕ್ತಿ ಶ್ರಮದಿಂದ ಹಣವನ್ನು ಪಡೆಯಬೇಕೇ ಹೊರತು ದಾನದಿಂದ ಅಲ್ಲ. 

Latest Videos

ಕನ್ನಡಪರ ನಿಲುವು: ಮಲಯಾಳಿ ಶಿಕ್ಷಕಿ ಬದಲು ಮುಖ್ಯ ಶಿಕ್ಷಕನೇ ವರ್ಗ!

ಸರ್ಕಾರ ಉಚಿತವಾಗಿ ವಿದ್ಯೆ ಮತ್ತು ಆರೋಗ್ಯ ನೀಡಲಿ. ಆರೋಗ್ಯ ಮತ್ತು ಶಿಕ್ಷಣಕ್ಕೆ ಎಷ್ಟು ಹಣವನ್ನಾದರೂ ಖರ್ಚು ಮಾಡಲಿ. ಆದರೆ ಉಚಿತದ ಹೆಸರಲ್ಲಿ ಜನರಿಗೆ ಆಮಿಷ ನೀಡುವುದು ಸರಿಯಲ್ಲ ಎಂದರು. ಇವತ್ತಿನ ರಾಜಕೀಯ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗುವುದಿಲ್ಲ. ಇಂದಿನ ರಾಜಕಾರಣಿಗಳಲ್ಲಿ ಜನಸೇವೆ ಮಾಡಬೇಕೆಂಬ ಮನೋಭಾವವಿಲ್ಲ. ರಾಜಕೀಯ ಹುದ್ದೆಯನ್ನು ತಮ್ಮ ಲಾಭಕಷ್ಟೇ ಬಳಸುತ್ತಿದ್ದಾರೆ. ಅಧಿಕಾರ ಎನ್ನುವುದು ಜನಸೇವೆ ಮಾಡಲು ಇರುವ ಸಾಧನ ಎನ್ನುವುದು ರಾಜಕಾರಣಿಗಳ ಅರಿವಿಗೆ ಬರಬೇಕು. ಜಾತಿ ಧರ್ಮಗಳನ್ನು ಬಿಟ್ಟು ಜನ ಸೇವೆ ಮಾಡುವವರಿಗೆ ಮಾತ್ರ ಜನ ಮತ ಹಾಕಬೇಕು ಎಂದು ಸಲಹೆ ನೀಡಿದರು.

ಶ್ರೀಮಂತಿಕೆಯ ಗೀಳಿನಿಂದಾಗಿ ಭ್ರಷ್ಟಾಚಾರ ಹೆಚ್ಚಳ: ಆಧುನಿಕ ಕಾಲಘಟ್ಟದಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳಲ್ಲಿ ಬೇಗ ಶ್ರೀಮಂತರಾಗಬೇಕು ಎಂಬ ಅಭಿಲಾಷೆ ಹೆಚ್ಚಾದ ಪರಿಣಾಮ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಪ್ರಮಾಣ ಹೆಚ್ಚಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌, ತಾಲೂಕು ಶರಣ ಸಾಹಿತ್ಯ ಪರಿಷತ್‌ ಮತ್ತು ಗ್ರಾಮ ವಿದ್ಯೋದಯ ಸಂಘಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಎಂ.ಸಿ. ಶಿವಾನಂದ ಶರ್ಮ ಅವರ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕರು ದೇಶ ಕಟ್ಟುವ ಸತ್ಪ್ರಜೆಗಳನ್ನು ಸಮಾಜಕ್ಕೆ ನೀಡಿ: ಸಚಿವ ಕೆ.ಎನ್‌.ರಾಜಣ್ಣ

ನಾನು ಲೋಕಾಯುಕ್ತ ನ್ಯಾಯಮೂರ್ತಿ ಆಗುವವರೆವಿಗೂ ಜನರ ಕಷ್ಟಗಳ ಬಗ್ಗೆ ಸ್ಪಷ್ಟಅರಿವು ಇರಲಿಲ್ಲ. ನಾನು ಪ್ರಾಮಾಣಿಕವಾಗಿದ್ದು, ವ್ಯವಸ್ಥೆಯೂ ಪ್ರಾಮಾಣಿಕವಾಗಿ ಇದೆ ಎಂದು ಗ್ರಹಿಸಿದ್ದೆ. ಆದರೆ, ಅಧಿಕಾರಿಗಳ ಶ್ರೀಮಂತಿಕೆಯ ಗೀಳು ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದರು. ಪುರಾತನ ಕಾಲದಲ್ಲಿ ತಪ್ಪು ಮಾಡಿದವನಿಗೆ ಕಠಿಣ ಶಿಕ್ಷೆ ಇತ್ತು. ಸಾಮಾಜಿಕವಾಗಿಯೂ ಅಪರಾಧಿಗಳಿಗೆ ಶಿಕ್ಷೆ ಇತ್ತು. ಹಾಗಾಗಿ ಆಗಿನ ಕಾಲದ ಜನರು ತಪ್ಪು ಮಾಡಲು ಹೆದರುತ್ತಿದ್ದರು. ಇಂದು ತಪ್ಪು ಮಾಡಿದ ವ್ಯಕ್ತಿಯನ್ನು ವಿಜೃಂಭಿಸುತ್ತಿರುವುದು ರಾಜ್ಯ ಮತ್ತು ರಾಷ್ಟ್ರ ಅವನತಿ ಕಾರಣ ಆಗುತ್ತದೆ. ಜನರಲ್ಲಿ ಹಣ ಹೆಚ್ಚಾದಂತೆ ಹಣದ ಪ್ರಭಾವದಿಂದ ಅಧಿಕಾರವನ್ನು ಪಡೆಯಬಹುದು ಎಂದು ಈಗಿನ ಕಾಲದ ಜನತೆಯ ಮನಸ್ಥಿತಿ. ಹಿರಿಯರು ತಮ್ಮ ಮಕ್ಕಳಿಗೆ ಮಾರ್ಗದರ್ಶಕರಾಗಬೇಕು.ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡದಿದ್ದಲ್ಲಿ ದೇಶದ ಭವಿಷ್ಯ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ ಎಂದರು.

click me!