ಹಳ್ಳಿ-ಹಳ್ಳಿಗೂ ಟೆಲಿಮೆಡಿಸನ್‌ ಸೌಲಭ್ಯ: ಸ್ಕ್ಯಾನ್ ರೇ ಗೆ ಸರ್ಕಾರದ ನೆರವು

Published : Oct 19, 2020, 09:35 PM IST
ಹಳ್ಳಿ-ಹಳ್ಳಿಗೂ ಟೆಲಿಮೆಡಿಸನ್‌ ಸೌಲಭ್ಯ: ಸ್ಕ್ಯಾನ್ ರೇ ಗೆ ಸರ್ಕಾರದ ನೆರವು

ಸಾರಾಂಶ

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಇಂದು (ಸೋಮವಾರ) ಮೈಸೂರಿನ ಸ್ಕ್ಯಾನ್ ರೇ ಟೆಕ್ನಾಲಜಿಸ್ ಸಂಸ್ಥೆಗೆ ಭೇಟಿ ನೀಡಿದರು.

ಮೈಸೂರು, (19): ಕೋವಿಡ್‌ ಸಂಕಷ್ಟದ ಕಾಲದಲ್ಲಿ ಹಳ್ಳಿಗಳಿಗೂ ಟೆಲಿಮೆಡಿಸನ್‌ ವ್ಯವಸ್ಥೆ ಒದಗಿಸುವ ತಂತ್ರಜ್ಞಾನ ಆಧಾರಿತ ತಜ್ಞವೈದ್ಯ ಸೇವೆಗೆ ಬೆಂಬಲ ನೀಡುವಂತೆ ಮೈಸೂರಿನ ಸ್ಕ್ಯಾನ್ ರೇ ಸಂಸ್ಥೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು, ಅದಕ್ಕೆ ಸರಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಸೋಮವಾರ ಈ ಸಂಸ್ಥೆಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಅಲ್ಲಿನ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರಲ್ಲದೆ, ತಂತ್ರಜ್ಞಾನ ಆಧಾರಿತ ಟೆಲಿ ಮೆಡಿಸನ್‌ ಸೇವೆಯನ್ನು ಜನಸಾಮಾನ್ಯರಿಗೂ ಒದಗಿಸುವ ನಿಟ್ಟಿನಲ್ಲಿ ಸರಕಾರವೂ ಉತ್ಸುಕವಾಗಿದೆ. ಐಟಿ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಜಾರಿ ಮಾಡಲಾಗುವುದು ಎಂದರು.

ಸಿದ್ದುಗೆ ವಾರ್ನಿಂಗ್ ನೀಡಿದ ಹೆಚ್‌ಡಿಕೆ, ರಾಜಕೀಯದಲ್ಲಿ 'ಅಮೂಲ್ಯ' ನಡಿಗೆ; ಅ.19ರ ಟಾಪ್ 10 ಸುದ್ದಿ!

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ ಅವರು, ಕೋವಿಡ್‌ ಈಗ ಎಲ್ಲ ವ್ಯವಸ್ಥೆಗಳನ್ನೂ ಅಸ್ತವ್ಯಸ್ತವಾಗಿಸಿದೆ. ಅದು ಆರೋಗ್ಯ ಕ್ಷೇತ್ರದಲ್ಲೂ ಹೆಚ್ಚು ಪ್ರಮಾಣದಲ್ಲೇ ಆಗಿದೆ. ಕಿಯೋನಿಕ್ಸ್‌ (KEONICS ) ಸಹಭಾಗಿತ್ವದಲ್ಲಿ ತಂತ್ರಜ್ಞಾನಯುಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಟೆಲಿ ಕಮಾಂಡ್‌ ಕೇಂದ್ರವನ್ನು (Tele-command Centre) ತೆರೆಯುವ ಯೋಜನೆಗೆ ಸಂಸ್ಥೆಯು ಸರಕಾರದ ಬೆಂಬಲವನ್ನು ಕೇಳಿದೆ. ಸರಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ನಾನು ಭರವಸೆ ನೀಡಿದ್ದೇನೆ. ರಾಜ್ಯದ ಪ್ರತಿಹಳ್ಳಿಗೂ ಟೆಲಿ ಮೆಡಿಸನ್‌ ವ್ಯವಸ್ಥೆಯನ್ನು ತಲುಪಿಸಲು ಈ ಸಂಸ್ಥೆ ಮುಂದೆ ಬಂದಿರುವುದು ಸಂತೋಷ ತಂದಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಪ್ರಸಕ್ತ ದಿನಗಳಲ್ಲಿ ವೈದ್ಯಕೀಯ ನಿಪುಣತೆಯ ಜತೆಗೆ, ಅದಕ್ಕೆ ಪೂರಕವಾಗಿ ತಂತ್ರಜ್ಞಾನವನ್ನೂ ಬಳಕೆ ಮಾಡಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಸ್ಕ್ಯಾನ್ ರೇ ಕೆಲಸ ಮಾಡುತ್ತಿದೆ. ನೆರೆ ಸೇರಿದಂತೆ ಯಾವುದೇ ರೀತಿಯ ಪ್ರಕೃತಿ ವಿಕೋಪ, ಕೋವಿಡ್‌ನಂಥ ಸೋಂಕು ಬಂದಾಗಲೂ ಇಂಥ ಟೆಲಿ ಮೆಡಿಸನ್‌ ವ್ಯವಸ್ಥೆ ಪರಿಣಾಮಕಾರಿಯಾಗಿ ನೆರವಿಗೆ ಬರುತ್ತದೆ ಎಂದು ಡಿಸಿಎಂ ಹೇಳಿದರು.

ಆತ್ಮನಿರ್ಭರತೆಯ ಸ್ಫೂರ್ತಿ:
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್‌ ಮಾರಿಯನ್ನು ಇವತ್ತು ರಾಜ್ಯವು ಸಮರ್ಥವಾಗಿ ಎದುರಿಸುತ್ತಿದೆ. ಯಾವುದೇ ಕೊರತೆಯೂ ನಮ್ಮಲ್ಲಿ ಇಲ್ಲ. ಮಾಸ್ಕ್‌, ಸ್ಯಾನಿಟೈಸರ್‌, ವೆಂಟಿಲೇಟರ್‌, ಪರೀಕ್ಷಾ ಕಿಟ್‌, ಪಿಪಿಇ ಕಿಟ್‌ ಸೇರಿದಂತೆ ಯಾವುದೂ ಕೊರತೆ ಇಲ್ಲ. ಪ್ರಧಾನಮಂತ್ರಿಗಳ ಆತ್ಮನಿರ್ಭರ ಕಾರ್ಯಕ್ರಮದಡಿ ಎಲ್ಲವನ್ನೂ ನಾವೇ ತಯಾರು ಮಾಡಿಕೊಳ್ಳುತ್ತಿದ್ದೇವೆ ಎಂದರು.

ಸ್ಕ್ಯಾನ್ ರೇ ಸಂಸ್ಥೆಯು ಹೆಲ್ತ್‌ ಟೆಕ್ನಾಲಜಿಯಲ್ಲಿ ಮುಂಚೂಣಿ ಸಂಸ್ಥೆಯಾಗಿದ್ದು, ಉತ್ತಮ ಗುಣಮಟ್ಟದ ವೆಂಟಿಲೇಟರ್‌ಗಳನ್ನು ತಯಾರು ಮಾಡುವ ಬಹುಮುಖ್ಯ ಸಂಸ್ಥೆಯಾಗಿದೆ. ಈ ಮೊದಲು ಒಂದು ಲಕ್ಷ ವೆಂಟಿಲೇಟರ್‌ಗಳ ಬೇಡಿಕೆಯನ್ನು ಈ ಸಂಸ್ಥೆಗೆ ಸಲ್ಲಿಸಲಾಗಿತ್ತು. ಆದರೆ, ನಿಗದಿತ ದಿನಕ್ಕಿಂತ ಮೊದಲೇ  30,000 ವೆಂಟಿಲೇಟರ್‌ಗಳನ್ನು ಸಂಸ್ಥೆ ಪೂರೈಕೆ ಮಾಡಿದೆ. ಉಳಿದ ವೆಂಟಿಲೇಟರ್‌ಗಳನ್ನು ಶೀಘ್ರವೇ ಪೂರೈಕೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಇಷ್ಟು ಅಲ್ಪಾವಧಿಯಲ್ಲಿ  30,000 ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡುವುದು ಸುಲಭದ ಮಾತಲ್ಲ. ಅಮರಿಕ ಚೀನಾದಂಥ ದೇಶಗಳಿಗೆ ಇದು ಸಾಧ್ಯವಾಗಿಲ್ಲ. ಅಂತಹ ಸವಾಲನ್ನು ಸ್ವೀಕರಿಸಿ ಸ್ಕ್ಯಾನ್ ರೇ ಕೆಲಸ ಮಾಡಿದೆ. ಅದಕ್ಕಾಗಿ ನನ್ನ ಮೆಚ್ಚುಗೆ ಇದೆ. ಜತೆಗೆ, ಇತರೆ ಅನೇಕ ದೇಶಗಳಿಗೆ ಕೋವಿಡ್‌ ಪರಿಹಾರೋಪಾಯಗಳಲ್ಲಿ ಎಂಟು ತಿಂಗಳಾದರೂ ಸ್ವಾವಲಂಭನೆ ಸಾಧಿಸಲು ಸಾಧ್ಯವಾಗಿಲ್ಲ. ಆದರೆ, ಭಾರತಕ್ಕೆ ಇದು ಸಾಧ್ಯವಾಗಿದೆ. ಆತ್ಮನಿರ್ಭರ ಅಭಿಯಾನಕ್ಕೆ ಪೂರಕವಾಗಿ ಇಲ್ಲಿ ಉತ್ಪನ್ನವಾಗುವ ದೇಶೀಯ ಉತ್ಪನ್ನಗಳು ವಿದೇಶಿ ಮಾರುಕಟ್ಟೆಗೆ ಕೂಡಾ ತಲುಪುತ್ತಿವೆ ಎಂಬುದು ನಮ್ಮ ಹೆಮ್ಮೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಕ್ಯಾನ್ ರೇ ತಯಾರಿಸಿರುವ 50ಕ್ಕೂ ಹೆಚ್ಚು ವೈದ್ಯಕೀಯ ಉತ್ಪನ್ನಗಳನ್ನು ಡಿಸಿಎಂ ವೀಕ್ಷಿಸಿದರು. ಜತೆಗೆ ʼಸ್ಕ್ಯಾನ್ ಲೈಫ್‌ʼ ಎಂಬ ನೂತನ ಉಪಕರಣವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಒಂದೇ ಯಂತ್ರದ ಮೂಲಕ ಒಬ್ಬ ವ್ಯಕ್ತಿಯು ಎಲ್ಲ ರೀತಿಯ ಪರೀಕ್ಷೆಗಳನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದೆ. ಅದನ್ನು ಮನೆಯಲ್ಲೇ ಇಟ್ಟುಕೊಳ್ಳುವಷ್ಟು ಸರಳ ಮತ್ತು ಸುಲಭವಾಗಿದೆ. ಆ ಉಪಕರಣ ಇನ್ನಷ್ಟೇ ಮಾರುಕಟ್ಟೆಗೆ ಬರಬೇಕಿದೆ.

ಈ ಸಂದರ್ಭದಲ್ಲಿ ಸ್ಕ್ಯಾನ್‌ ರೇ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್‌ ಆಳ್ವ ಮತ್ತಿತರೆ ತಜ್ಞರು, ಅಧಿಕಾರಿಗಳು ಜತೆಗೆ ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಸಿದ್ದರಾಮಪ್ಪ ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!