
ಬೆಂಗಳೂರು (ಆ.8) : ಬರ ಘೋಷಣೆಯ ಮಾರ್ಗಸೂಚಿ ಸಡಿಲಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಸಮ್ಮತಿ ಸೂಚಿಸದಿದ್ದರೆ ಹಳೆಯ ಮಾರ್ಗಸೂಚಿಯಂತೆ ಒಂದು ವಾರದಲ್ಲಿ ಬರಗಾಲದ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಸಡಿಲಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಒಪ್ಪಿದರೆ ಅದರಂತೆ ಬರಪೀಡಿತ ಪ್ರದೇಶಗಳನ್ನು ಘೋಷಿಸಲಾಗುವುದು. ಇಲ್ಲದಿದ್ದರೆ ಹಳೆಯ ಮಾರ್ಗಸೂಚಿಯಂತೆ ವಾರದಲ್ಲಿ ಬರ ಘೋಷಣೆ ಮಾಡಲಾಗುವುದು ಎಂದು ವಿವರಿಸಿದರು.
ಶಾಸಕರ ಅತೃಪ್ತಿ ಶಮನಕ್ಕೆ ಸಿಎಂ ಯತ್ನ; 145 ಕೋಟಿ ರೂ. ಅನುದಾನ ಬಿಡುಗಡೆ
ಬರ ಪರಿಸ್ಥಿತಿ ಘೋಷಣೆಗೆ ಕೇಂದ್ರದ ವಿಪತ್ತು ನಿರ್ವಹಣಾ ನಿಯಮ (ಎನ್ಡಿಆರ್ಎಫ್) ಅಡ್ಡಿಯಾಗುತ್ತಿದೆ. ಶೇ.60 ರಷ್ಟುಮಳೆ ಕೊರತೆ ಇದ್ದು ಮೂರು ವಾರ ಒಣ ಹವೆ ಮುಂದುವರೆದರೆ ಕೇಂದ್ರದ ಮಾರ್ಗಸೂಚಿ ಪ್ರಕಾರ ಬರಗಾಲವಾಗಿದೆ. ಇದನ್ನು ಶೇ.30 ಕ್ಕೆ ಇಳಿಸುವಂತೆ ಕೇಂದ್ರಕ್ಕೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಅಲ್ಲಿಂದ ಬರುವ ಪ್ರತಿಕ್ರಿಯೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಕರ್ನಾಟಕದ ತೊಗರಿ ಕಣಜ ಎಂದು ಕರೆಯಲಾಗುವ ಕಲಬುರಗಿ ಜಿಲ್ಲೆಯ ಭೌಗೋಳಿಕ ಸೂಚ್ಯಂಕ ಹೊಂದಿರುವ ‘ಭೀಮಾ ಪಲ್ಸ್’ ಹೆಸರಿನ ಹೊಸ ವಿನ್ಯಾಸದ ಎರಡು ಮಾದರಿಯ ತೊಗರಿ ಪ್ಯಾಕೇಟ್ಗಳನ್ನು ಚಲುವರಾಯಸ್ವಾಮಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಸ್ವಕ್ಷೇತ್ರ ನಾಗಮಂಗಲದಿಂದ ಒಂದು ದಿನದ ಪ್ರವಾಸಕ್ಕೆ ನಗರಕ್ಕೆ ಬಂದಿದ್ದ ಸರ್ಕಾರಿ ಶಾಲೆಗಳ ಮಕ್ಕಳು ಕೃಷಿ ಇಲಾಖೆಗೆ ಆಗಮಿಸಿದಾಗ ಅವರೊಂದಿಗೆ ಕೆಲಹೊತ್ತು ಕಳೆದ ಸಚಿವರು, ಬಳಿಕ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಿದರು.
ಪಾಪದ ಹಣದಲ್ಲಿ ವಿದೇಶ ಪ್ರವಾಸ ಅಗತ್ಯವಿಲ್ಲ: ಚಲುವರಾಯಸ್ವಾಮಿಗೆ ಎಚ್ಡಿಕೆ ತಿರುಗೇಟು
ಶೇ.22 ಮಳೆ ಕೊರತೆ
ಕಳೆದ ಎರಡೂವರೆ ತಿಂಗಳಲ್ಲಿ ಶೇ.22 ರಷ್ಟುಮಳೆ ಕೊರತೆ ಕಂಡುಬಂದಿದೆ. ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತಾದರೂ 61.72 ಲಕ್ಷ ಹೆಕ್ಟೇರ್ನಲ್ಲಿ (ಶೇ.75) ಬಿತ್ತನೆಯಾಗಿದೆ. 5.54 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆಯಿದ್ದು 3.22 ಲಕ್ಷ ಕ್ವಿಂಟಾಲ್ ವಿತರಿಸಿದ್ದು ಇನ್ನೂ ದಾಸ್ತಾನಿದೆ. 31.18 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು 17.44 ಲಕ್ಷ ಮೆಟ್ರಿಕ್ ಟನ್ ಮಾರಾಟವಾಗಿ ಇನ್ನುಳಿದ ಗೊಬ್ಬರದ ದಾಸ್ತಾನಿದೆ ಎಂದು ಚಲುವರಾಯಸ್ವಾಮಿ ಅಂಕಿ ಅಂಶ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ