Vijayapura: ದೇಶದ ಎರಡನೇ ವಿವೇಕಾನಂದ ಖ್ಯಾತಿಯ ಸಿದ್ದೇಶ್ವರ ಶ್ರೀಗಳ ಬಗ್ಗೆ ನಿಮಗೆಷ್ಟು ಗೊತ್ತು?

By Sathish Kumar KHFirst Published Jan 2, 2023, 6:45 PM IST
Highlights

ಸಿದ್ದೇಶ್ವರ ಶ್ರೀಗಳ ಪ್ರವಚನ ಕೇಳಿದರೆ ಜೀವನ ಪಾವನ ಆದಂತೆ
ಕಳೆದ ಹದಿನೈದು ದಿನಗಳಿಂದ ಹಾಸಿಗೆ ಹಿಡಿದ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ
ಭಕ್ತರಿಂದ ಬೇಗ ಹುಷಾರಾಗಿ ಬನ್ನಿ ಶ್ರೀಗಳೇ ಅಭಿಯಾನ ಆರಂಭವಾಗಿದೆ
ನಾಡಿನ ಗಣ್ಯಾತಿ ಗಣ್ಯರ ಭೇಟಿಯಿಂದ ಭಕ್ತರ ಮನದಲ್ಲಿ ಮನೆ ಮಾಡಿದ ಆತಂಕ

ವಿಜಯಪುರ (ಜ.02): ನಾಡಿನ ಪ್ರಸಿದ್ಧ ವಾಗ್ಮಿ, ಉಪನ್ಯಾಸಕಾರರು, ಅಂಕಣಕಾರರು, ಅಪರೂಪದ ಸಂತರು, ಅನನ್ಯ ಜ್ಞಾನಯೋಗಿ ಆಗಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶದ ಭಕ್ತರು ಶ್ರೀಗಳನ್ನು ನಡೆದಾಡುವ ದೇವರು, ಎರಡನೇ ವಿವೇಕಾನಂದ ಎಂದು ಕರೆಯುತ್ತಿದ್ದಾರೆ. ನಾಡಿನ ಭಕ್ತಗಣದಿಂದ 'ಬೇಗ ಹುಷಾರಾಗಿ ಶ್ರೀಗಳೇ' ಎಂಬ ಅಭಿಯಾನ ಆರಂಭವಾಗಿದೆ.

ಸಿದ್ದೇಶ್ವರರ ಮೂಲ ಹೆಸರು ಸಿದ್ದಗೊಂಡಪ್ಪ: ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದ್ದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು. ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದರು. 'ಬೆಳೆಯುವ ಪೈರು ಮೊಳಕೆಯಲ್ಲೇ' ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದ್ದಾರೆ.

ಸಿದ್ದೇಶ್ವರಶ್ರೀ ಆರೋಗ್ಯ ಸ್ಥಿರ: ಆಶ್ರಮದತ್ತ ಭಾರಿ ಜನಸಾಗರ

ಸಿದ್ದೇಶ್ವರರ ಬಾಲ್ಯವನ್ನು ಬಿಚ್ಚಿಟ್ಟ ಬಸಪ್ಪ: ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಿದ್ದೇಶ್ವರ ಸ್ವಾಮೀಜಿ ಅವರ ಸ್ನೇಹಿತ ಬಸಪ್ಪ.ಎಸ್.ಪಟ್ಟಣ ಅವರು ಮಾತನಾಡಿ, ಸಿದ್ದೇಶ್ವರ ಶ್ರೀ ಬಾಲ್ಯದಿಂದಲೇ ಸೌಮ್ಯ ಸ್ವಭಾವದವರಾಗಿದ್ದರು. ಯಾರಾದರೂ ಕೆಟ್ಟದ್ದು ಮಾತನಾಡಿದ್ದರೆ ಸೇರುತ್ತಿರಲಿಲ್ಲ, ಅಂತವರಿಂದ ದೂರ ಸರಿಯುತ್ತಿದ್ದರು ಎಂದರು. ಅವರ ಜೊತೆ ನಾನು ಬೆಳೆದವ,ಅವರ ಆತ್ಮೀಯ ಗೆಳೆಯನಾಗಿದ್ದೆ. ಬಾಲ್ಯದಲ್ಲಿ ಅವರು ಹಾಪ್ ಅಂಗಿ, ಹಾಪ್ ಚಡ್ಡಿ ಹಾಕುತ್ತಿದ್ದರು. ಯಾವಾಗಲೂ ಪೂಜ್ಯರು ನಗುಮುಖದಿಂದ ಇರುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಏಕಾಂತ ಬಯಸುತ್ತಿದ್ದರು. ಗುಡ್ಡದಲ್ಲಿ ಜ್ಞಾನ ಮಾಡಲು ತೆರಳುತ್ತಿದ್ದರು. ಶ್ರೀಗಳ ತಂದೆ ಓಗೆಪ್ಪ ಬಿರಾದಾರ, ತಾಯಿ ಸಂಗಮ್ಮ ಬಿರಾದಾರ. ಚಿಕ್ಕ ವಯಸ್ಸಿನಲ್ಲಿಯೇ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನ ಕೇಳಿ ಪ್ರಭಾವಿತರಾಗಿದ್ದರು. ಒಳ್ಳೆಯ ಸ್ನೇಹಿತರಾಗಿದ್ದರು, ನಾನು ನಿವೃತ್ತ ಸರ್ಕಾರಿ ನೌಕರನಾಗಿದ್ದೇನೆ. ಸದ್ಯ ಶ್ರೀಗಳ ಅನಾರೋಗ್ಯ ಹಿನ್ನೆಲೆ ಭೇಟಿಗಾಗಿ ಬಂದಿದ್ದೇನೆ. ಅವರು ಶೀಘ್ರ ಚೇತರಿಕೆಯಾಗಲೆಂದು ಹಾರೈಸುತ್ತೇನೆ ಎಂದರು.

ಗದಗಿನ ಮಲ್ಲಿಕಾರ್ಜುನ ಸ್ವಾಮೀಜಿ ಶಿಷ್ಯ: ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಅಪರೂಪದ ಮತ್ತು ಅನನ್ಯ ಸಂತ. 14 ನೇ ವಯಸ್ಸಿನಲ್ಲಿ ಗದಗಿನ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರ ಶಿಷ್ಯರಾಗಿ ಸೇರಿ ಆಧ್ಯಾತ್ಮಿಕತೆಯ ಕಡೆಗೆ ವಾಲಿದ್ದರು. ಗುರುಗಳ ಬಳಿಯೇ ಇದ್ದುಕೊಂಡು ತಮ್ಮ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿದರು. ಮೃದು ಸ್ವಭಾವದ ಮತ್ತು ಸರಳವಾದ ನೋಟವನ್ನು ಹೊಂದಿರುವ ಸ್ವಾಮೀಜಿ ತುಂಬಾ ನಿಗರ್ವಿಯಾಗಿದ್ದರು. ದೈವಿಕತೆ ಮತ್ತು ದೈವಿಕ ಬುದ್ಧಿವಂತಿಕೆಯು ಅವರ ಮಾತುಗಳಲ್ಲಿ ಮತ್ತು ಜೀವನದಲ್ಲಿ ನಿರಂತರವಾಗಿ ಕಾಣುತ್ತಿತ್ತು. ಅವರ ಆಧ್ಯಾತ್ಮಿಕ ಗುರುಗಳಂತೆ, ಸಾಧಕರು ಮತ್ತು ಎಲ್ಲರಲ್ಲಿ ದೈವಿಕ ಬುದ್ಧಿವಂತಿಕೆಯನ್ನು ಸಾರುವ ಕಾರ್ಯವನ್ನು ಮಾಡುತ್ತಿದ್ದರು. ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾದ ಶ್ರೀ ಸಿದ್ದೇಶ್ವರ ಸ್ವಾಮಿಜಿಯು ದೈವಭಕ್ತಿ ಎಂಬ ನೈಜ ಮತ್ತು ನೇರ ನುಡಿಗಳಿಗೆ ಸಾಕ್ಷಿಯಾಗಿದ್ದಾರೆ.

ಸಿದ್ದೇಶ್ವರ ಶ್ರೀಗಳು ಆರೋಗ್ಯವಾಗಿ ಬರುತ್ತಾರೆ: ಸಿಎಂ ಬೊಮ್ಮಾಯಿ

ಲಕ್ಷಾಂತರ ಜನರ ಜೀವನದಲ್ಲಿ ಪರಿವರ್ತನೆ: ಸಿದ್ದೇಶ್ವರ ಸ್ವಾಮೀಜಿ ಅವರ ಉಪನ್ಯಾಸ ಸರಣಿಯು ಸಾಮಾನ್ಯ ಮನುಷ್ಯರು 'ಬದುಕುವುದು ಹೇಗೆ?' ನಾವು ಹೇಗೆ ಬದುಕಬೇಕು, ಜೀವನಕ್ಕೆ ಹೇಗೆ ದಾರಿ ಮಾಡಿಕೊಳ್ಳಬೇಕು ಎಂದು ಮಾಡುತ್ತಿದ್ದ ಉಪನ್ಯಾಸಗಳು ಲಕ್ಷಾಂತರ ಜನರ ಜೀವನವನ್ನು ಬದಲಾಯಿಸಿದೆ. ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷದ ಬಗ್ಗೆ ಪ್ರಾಯೋಗಿಕ ಪಾಠಗಳನ್ನು ಜನರು ಮೆಚ್ಚಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಲಮ ಪ್ರಭುನ ವಚನಗಳ ಮೇಲೆ ಅಧಿಕೃತ ಭಾಷಣಕಾರರಾಗಿದ್ದಾರೆ. ಅವರು ವಚನಗಳ ಬಗ್ಗೆ ಹೊಸ ಬೆಳಕನ್ನು ಎಸೆದಿದ್ದಾರೆ. ವಿಶ್ವದ ತತ್ವಜ್ಞಾನಿಗಳ ಹೋಲಿಕೆಯು ಒಂದು ನಿರ್ದಿಷ್ಟ ವಿಷಯದ ದೃಷ್ಟಿಕೋನಕ್ಕೆ ಒಳಪಡಿಸಿದಾಗ ಅವರ ಉಪನ್ಯಾಸದ ಅತ್ಯುತ್ತಮ ಹೊರಬಂದಿದೆ. ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದಾರೆ.

ಶ್ರೀಗಳು ಪಂಚ ಭಾಷಾ ನಿಪುಣರು: ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ,ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರವಾಗಿದೆ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು. ನಂತರ ಸಿದ್ದೇಶ್ವರ ಶ್ರೀಗಳ ವಿಚಾರ ಮತ್ತು ಪ್ರವಚನದಿಂದ ಉತ್ತರ ಕರ್ನಾಟಕದ ಜನಮಾನಸದಲ್ಲಿ ಮತ್ತಷ್ಟು ಮಹತ್ವ ಪಡೆದುಕೊಂಡಿತು.

ವಿಜಯಪುರ: 'ಸಿದ್ದೇಶ್ವರ ಶ್ರೀ ಆರೋಗ್ಯ ಬಗ್ಗೆ ವದಂತಿ ಹರಡಬೇಡಿ, ಕೋವಿಡ್‌ ಹಿನ್ನೆಲೆ ದರ್ಶನ ಇಲ್ಲ'

ಕಾಡ್ಗಿಚ್ಚಿನಂತೆ ಹಬ್ಬಿದ ಪ್ರವಚನ ನುಡಿಗಳು: ನಿಸ್ವಾರ್ಥ ಸೇವೆ, ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಬೆಳೆಯಿತು. ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರು.

ಪ್ರಶಸ್ತಿ, ಪುರಸ್ಕಾರಗಳನ್ನ ತಿರಸ್ಕರಿಸಿದ್ದ ಶ್ರೀಗಳು: ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ, ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ಉದ್ದೇಶ ನನ್ನದು. ಹಾಗಾಗಿ ಪ್ರಶಸ್ತಿಗಳ ಅವಶ್ಯತೆಯು ನನಗಿಲ್ಲ. ಎಲ್ಲ ಗೌರವಾಧರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ ಎಂದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ತಮಗೆ ಸಂದ ಎಷ್ಟೋ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ವಿನಮ್ರವಾಗಿಯೇ ನಿರಾಕರಿಸಿದ್ದಾರೆ.

click me!