ಕಸ ವಿಲೇಗೆ ಅಡ್ಡಿಯಾದ್ರೆ ಎಸ್ಮಾ ಅಡಿ ಕ್ರಮ: ಅಶೋಕ್, ವಿಜಯೇಂದ್ರ ಮನೆ ಮುಂದೆ ಸುರಿಬೇಕಾ? - ಡಿಕೆ ಶಿವಕುಮಾರ್

Kannadaprabha News, Ravi Janekal |   | Kannada Prabha
Published : Feb 19, 2026, 07:47 AM IST
DK Shivakumar On ballari banner fights

ಸಾರಾಂಶ

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸುವ ಶಾಸಕರು ಸೇರಿದಂತೆ ಯಾರೇ ಆದರೂ ಎಸ್ಮಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ. ವಿರೋಧ ಮುಂದುವರೆದರೆ ಬಿಜೆಪಿ ಕಚೇರಿ ಅಥವಾ ಶಾಸಕರ ಮನೆ ಮುಂದೆ ಕಸ ಸುರಿಯಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಫೆ.19) ಕಸ ವಿಲೇವಾರಿಗೆ ಅಡ್ಡಿಪಡಿಸುವವರ ವಿರುದ್ಧ ಎಸ್ಮಾ ಕಾಯ್ದೆ ಅಡಿ ಕರುಣೆ ಇಲ್ಲದೇ ಕ್ರಮ ಕೈಗೊಳ್ಳಲಾಗುವುದು. ಅದು ಶಾಸಕರಾದರೂ ಸರಿ, ಬೇರೆ ಯಾರೇ ಆಗಿದ್ದರೂ ಸರಿ. ಶಾಸಕರು ವಿರೋಧಿಸಿದರೆ ಅವರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಎದುರು ಕಸವನ್ನು ವಿಲೇವಾರಿ ಮಾಡಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದರು.

ಮಹದೇವಪುರ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಶಾಸಕರು ಅಡ್ಡಿಪಡಿಸಿರುವ ಕುರಿತು ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಅಲ್ಲಿನ ಶಾಸಕರು ಕಸ ಹಾಕಬಾರದು ಹಾಗೂ ನಮಗೆ ಅನುದಾನ ಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ. ಮಂಗಳವಾರ ಮಾಜಿ ಶಾಸಕ ಅರವಿಂದ ಲಿಂಬಾವಳಿ ಬೆದರಿಕೆ ಹಾಕಿದರೆ, ಈಗ ದೊಡ್ಡಬಳ್ಳಾಪುರ ಶಾಸಕರು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ. ಹೀಗೆ ಮಾಡಿದರೆ ಕಸ ಎಲ್ಲಿಗೆ ಹೋಗಬೇಕು. ಕಸವು ಆರ್‌. ಅಶೋಕ್‌, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿಗೆ ಹೋಗಬೇಕಾಗುತ್ತದೆ. ಇವರೆಲ್ಲ ಯಾರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದರು.

ಯಾವ ಉದ್ದೇಶಕ್ಕೆ ಶಾಸಕರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕು. ಈ ಹಿಂದಿನಿಂದಲೂ ಏನು ಕೆಲಸ ಮಾಡಿಕೊಂಡು ಬರಲಾಗುತ್ತಿತ್ತೋ ಅದೇ ಕೆಲಸವನ್ನು ಈಗಲೂ ಮಾಡಿಕೊಂಡು ಬರಲಾಗುತ್ತಿದೆ. ಅವರ ಕ್ಷೇತ್ರಗಳಿಗೆ ಅನುದಾನ ಬೇಕು ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸದ ಲಾರಿಯಿಂದ ಅಪಘಾತವಾಗಿದೆ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಅಪಘಾತ ಆಗಬಾರದಿತ್ತು ಆಗಿದೆ. ಅದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಸ ವಿಲೇವಾರಿ ನಿಲ್ಲಿಸಿರುವುದು ಸರಿಯಲ್ಲ. ಎಸ್‌.ಟಿ. ಸೋಮಶೇಖರ್‌, ಶಿವಣ್ಣ, ಕೃಷ್ಣ ಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿದೆ. ಈಗ ಹೊಸದಾಗಿ ಎರಡು ಜಾಗಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್‌ ಕರೆಯಲಾಗಿದೆ. ಒಂದಷ್ಟು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಅನುದಾನ ಅಲಭ್ಯತೆಗೆ ಬಿಜೆಪಿ ಕಾರಣ:

ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್‌ ಹೆಚ್ಚಿದೆ ಎಂದು ಗುತ್ತಿಗೆದಾರರ ಸಂಘದ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಅದರ ಬಗ್ಗೆ ಗುತ್ತಿಗೆದಾರರು ದೂರು ನೀಡಲಿ. ಅವರು ಮೊದಲು ಕಾಮಗಾರಿ ನಿಲ್ಲಿಸಲಿ. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಅನುದಾನವಿಲ್ಲ, ಕೆಲಸ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೀವಲ್ಲ. ಆದರೂ ಅವರು ಏಕೆ ಕೆಲಸಗಳನ್ನು ತೆಗೆದುಕೊಂಡರು. ಅನುದಾನ ಲಭ್ಯತೆ ಇಲ್ಲದಿದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ಕೆಲಸಗಳನ್ನು ತೆಗೆದುಕೊಳ್ಳಲಾಯಿತು. ಬೆಂಗಳೂರು ನಗರದಲ್ಲಿ ಎಷ್ಟು ಹೊಂದಿಸಬೇಕೋ ಆ ಕೆಲಸವನ್ನು ನಾನು ಮಾಡಿದ್ದೇನೆ ಎಂದರು.

ಉದಾಹರಣೆಗೆ 10 ಸಾವಿರ ಕೋಟಿ ರು. ಅನುದಾನವಿದ್ದರೆ 30ರಿಂದ 40 ಸಾವಿರ ಕೋಟಿ ರು. ಟೆಂಡರ್‌ ಕರೆದಿದ್ದಾರೆ. ಇದೆಲ್ಲದಕ್ಕೂ ಬಿಜೆಪಿ ಸರ್ಕಾರವೇ ಕಾರಣ. ಈಗ ಬಿಲ್‌, ಬಿಲ್‌ ಎಂದರೆ ಏನು ಮಾಡುವುದು. ನಾವು ಹೇಳಿದಾಗ ಕೇಳದೆ ಕೆಲಸಗಳನ್ನು ಏತಕ್ಕಾಗಿ ತೆಗೆದುಕೊಂಡರು. ನನ್ನ ಇಲಾಖೆಯ ದಾಖಲೆಗಳನ್ನೇ ನೀಡುತ್ತೇನೆ. ಹಣ ಇಲ್ಲ ಎಂದು ಗೊತ್ತಿದ್ದರೂ ಕೆಲಸಗಳನ್ನು ಪ್ರಾರಂಭಿಸಿದ್ದಾದರೂ ಏಕೆ ಎಂದು ಪ್ರಶ್ನಿಸಿದರು.

ಕೆಲಸ ನಿಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಕೆಲಸ ನಿಲ್ಲಿಸಬೇಕೆಂದವರು ನಿಲ್ಲಿಸಲಿ. ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಸರ್ಕಾರ ಬಜೆಟ್‌ ಪ್ರಕಾರ ಹಣ ನೀಡುತ್ತದೆ. ಎಷ್ಟು ಆಗುತ್ತದೋ ಅಷ್ಟು ಹಣವನ್ನು ಕೊಡುತ್ತೇವೆ. ಬಜೆಟ್‌ ಆದ ನಂತರ ಏನಾದರೂ ಮಾಡೋಣ. ನಮಗೂ ಮಾನವೀಯತೆಯಿದೆ. ಬ್ಲ್ಯಾಕ್‌ಮೇಲ್‌ ಮಾಡುತ್ತೇವೆ ಎನ್ನುವವರೆಲ್ಲಾ ಮಾಡಿಕೊಳ್ಳಲಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Tejasvi Surya metro protest case: ಅನುಮತಿ ಇಲ್ಲದೆ ಪ್ರತಿಭಟನೆ; ಸಂಸದ ತೇಜಸ್ವಿ ಸೂರ್ಯ ಸೇರಿ 9 ಮಂದಿಗೆ ನೋಟಿಸ್‌!
Karnataka Congress MLAs foreign tour: 'ನಮ್ಮನ್ನು ಯಾರೂ ಕರೆದಿಲ್ಲ, ಅವರದ್ದೇ ಒಂದು ಟೀಂ, ಮಜಾ ಮಾಡಿಕೊಂಡು ಬರ್ಲಿ ಬಿಡಿ ಎಂದ ಮಾಗಡಿ ಶಾಸಕ!