Hijab ಬಗ್ಗೆ ಹಟ ಬೇಡ, ಮಕ್ಕಳನ್ನು ಪರೀಕ್ಷೆಗೆ ಕಳಿಸಿ: ಡಿ.ಕೆ.ಶಿವಕುಮಾರ್‌

By Kannadaprabha NewsFirst Published Mar 27, 2022, 3:20 AM IST
Highlights

ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು, ಈ ಸಮಯದಲ್ಲಿ ಯಾವುದೇ ವಿದ್ಯಾರ್ಥಿಗಳು ಹಿಜಾಬ್‌ ವಿಚಾರದಲ್ಲಿ ಹಟ ಮಾಡಬಾರದು. ಒಂದು ವೇಳೆ ಮಕ್ಕಳು ಹಟ ಹಿಡಿದರೂ ಅವರ ಪೋಷಕರು, ಧರ್ಮಗುರುಗಳು, ಶಿಕ್ಷಕರು ತಿಳಿ ಹೇಳಿ ಪರೀಕ್ಷೆಗೆ ಕಳುಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕರೆ ನೀಡಿದ್ದಾರೆ.

ಬೆಂಗಳೂರು (ಮಾ.27): ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು (SSLC Exam) ಆರಂಭವಾಗುತ್ತಿದ್ದು, ಈ ಸಮಯದಲ್ಲಿ ಯಾವುದೇ ವಿದ್ಯಾರ್ಥಿಗಳು (Students) ಹಿಜಾಬ್‌ (Hijab) ವಿಚಾರದಲ್ಲಿ ಹಟ ಮಾಡಬಾರದು. ಒಂದು ವೇಳೆ ಮಕ್ಕಳು ಹಟ ಹಿಡಿದರೂ ಅವರ ಪೋಷಕರು, ಧರ್ಮಗುರುಗಳು, ಶಿಕ್ಷಕರು ತಿಳಿ ಹೇಳಿ ಪರೀಕ್ಷೆಗೆ ಕಳುಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಕರೆ ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಗೆ ಸಮವಸ್ತ್ರ ಮಾತ್ರ ಧರಿಸಿ ಬರುವಂತೆ ಶಿಕ್ಷಣ ಇಲಾಖೆ ಆದೇಶಿಸಿರುವ ಬಗ್ಗೆ ಪ್ರಸ್ತಾಪಿಸಿದಾಗ, ಪರೀಕ್ಷೆ ಹತ್ತಿರವಾಗಿರುವುದರಿಂದ ಇದು ಹಟ ಮಾಡುವ ಕಾಲವಲ್ಲ. 

ಯಾರೂ ಕೂಡ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವಂತೆ ಉತ್ತೇಜನ ನೀಡಬಾರದು. ಹಟ ಮಾಡುವ ಮಕ್ಕಳ ಮನವೊಲಿಸಲು ಪೋಷಕರು, ಧರ್ಮಗುರುಗಳು, ಶಿಕ್ಷಕರು ಯಾರಾರ‍ಯರು ಏನು ಮಾಡಬೇಕೋ ಅದನ್ನು ಮಾಡಬೇಕು.  ಪರೀಕ್ಷೆಯಿಂದ ವಂಚಿತರಾದರೆ ಭವಿಷ್ಯದ ಮೇಲಾಗುವ ಪರಿಣಾಮವನ್ನು ಮನದಟ್ಟು ಮಾಡಿಕೊಟ್ಟು ಪರೀಕ್ಷೆಗೆ ಕಳುಹಿಸುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ಇಡೀ ವರ್ಷ ಮಕ್ಕಳು ಮಾಡಿದ ವಿದ್ಯಾಭ್ಯಾಸ ವ್ಯರ್ಥವಾಗಲಿದೆ. ಜತೆಗೆ ಸರ್ಕಾರವೂ ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಸಹಕರಿಸಬೇಕು ಎಂದು ಹೇಳಿದರು. ಹಿಜಾಬ್‌ ವಿಚಾರವಾಗಿ ಕೋರ್ಟ್‌ ತೀರ್ಪು ಕೊಟ್ಟಿದೆ. ಕೆಲವರು ಅದನ್ನು ಒಪ್ಪುತ್ತಾರೆ, ಕೆಲವರು ಒಪ್ಪುವುದಿಲ್ಲ. ನ್ಯಾಯಾಲಯದ ತೀರ್ಪು ಸರಿ ಇಲ್ಲ ಅಂತ ಹೇಳೋಕೆ ನಾನು ಸಿದ್ಧವಿಲ್ಲ. 

Latest Videos

Ballari: ಕಲ್ಯಾಣ ಕರ್ನಾಟಕದ ಮೇಲೆ ಡಿಕೆಶಿ ಕಣ್ಣು: ಅಧಿಕಾರಕ್ಕೆ ಬರಲು ಮಾಸ್ಟರ್‌ ಪ್ಲಾನ್‌..!

ತೀರ್ಪು ತೀರ್ಪೇ. ಈ ವಿಚಾರ ಸುಪ್ರೀಂಕೋರ್ಟ್‌ಗೂ ಹೋಗಬಹುದು. ಇವತ್ತಲ್ಲ ನಾಳೆ ತೀರ್ಪು ಬಂದು ಎಲ್ಲ ಸರಿ ಹೋಗುತ್ತದೆ ಎಂದರು. ಹಿಜಾಬ್‌ ಬದಲು ಮಕ್ಕಳು ದುಪಟ್ಟಾಹಾಕಿಕೊಂಡು ಪರೀಕ್ಷೆಗೆ ಬರಲು ಅವಕಾಶ ನೀಡುವಂತೆ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ, ಸಂವಿಧಾನ ಏನೆಲ್ಲಾ ಹೇಳುತ್ತದೆ, ಯಾವೆಲ್ಲಾ ಅಧಿಕಾರ, ಅವಕಾಶ ನೀಡಿದೆಯೋ ಅದರ ಪರವಾಗಿ ಕಾಂಗ್ರೆಸ್‌ ಇರುತ್ತದೆ. ನಮಗೆ ಅದೇ ಬೈಬಲ್‌, ಅದೇ ಕುರಾನ್‌, ಅದೇ ಭಗವದ್ಗೀತೆ. ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ ಎಂದರು.

ಭಗವದ್ಗೀತೆಗೆ ಕಾಂಗ್ರೆಸ್‌ ವಿರೋಧವಿಲ್ಲ: ಶಾಲಾ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವುದರಿಂದ ನಮಗೆ ಹೊಟ್ಟೆ ಉರಿಯುತ್ತದೆ ಎಂದು ಹೇಳಿದವರು ಯಾರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸುವ ಮೂಲಕ ಬಿಜೆಪಿಗೆ ಟಾಂಗ್‌ ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜೀವ್‌ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಇಡೀ ದೇಶಕ್ಕೆ ಚಿಕ್ಕಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ವರ್ಷಾನುಗಟ್ಟಲೆ ರಾಮಾಯಣ, ಮಹಾಭಾರತವನ್ನು ತೋರಿಸಿ, ದೇಶದ ಸಂಸ್ಕೃತಿ, ಇತಿಹಾಸ, ಗ್ರಂಥ, ಪರಂಪರೆಯನ್ನು ಪರಿಚಯಿಸಿದ್ದರು ಎಂದರು.

ಕೆಂಗಲ್‌ ಹನುಮಂತಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2 ರು.ಗೆ ಭಗವದ್ಗೀತೆ ಪುಸ್ತಕವನ್ನು ಮನೆ ಮನೆಗೂ ಹಂಚಿದ್ದರು. ಇದೆಲ್ಲವನ್ನು ಮಾಡಿದ್ದು ನಾವು. ನಾವ್ಯಾಕೆ ಇದನ್ನು ವಿರೋಧಿಸೋಣ? ನನಗೆ ಭಗವದ್ಗೀತೆ ಶ್ಲೋಕ ಗೊತ್ತಿದೆ. ಅದನ್ನು ಬಿಜೆಪಿಯವರು ಬಂದು ಹೇಳಿಕೊಟ್ಟಿದ್ದಾರಾ? ನಾನು ಶಾಲೆಯಲ್ಲಿರುವಾಗಲೇ ಕಲಿತಿದ್ದೆ. ಈ ವಿಚಾರದ ಬಗ್ಗೆ ಬಿಜೆಪಿಯವರು ಸದನದಲ್ಲಿ ಚರ್ಚೆಗೆ ಬರಲಿ. ಅವರು ಶ್ಲೋಕ ಹೇಳಲಿ. ಹಿಂದುತ್ವ ಇವರ ಮನೆ ಆಸ್ತಿನಾ? ದೇಶದ ಜನರಿಗೆ ಈ ಗ್ರಂಥಗಳ ಪ್ರಚಾರ ಮೊದಲು ಆರಂಭಿಸಿದ್ದು ಕಾಂಗ್ರೆಸ್‌, ಆಮೇಲೆ ಇವರು ರಾಮ ಮಂದಿರ ಕಟ್ಟುತ್ತೇವೆ ಎಂದು ಮುಂದೆ ಬಂದರು ಎಂದರು.

Karnataka Politics: ನಿಜವಾಗ್ಲೂ ಡಿಕೆಶಿ, ಸಿದ್ದು ಮಧ್ಯೆ ಭಿನ್ನಾಭಿಪ್ರಾಯ ಇದ್ಯಾ?: ಜಾರಕಿಹೊಳಿ ಹೇಳಿದ್ದಿಷ್ಟು

ಧರ್ಮದಲ್ಲಿರುವ ಒಳ್ಳೆಯ ವಿಚಾರವನ್ನು ಮಕ್ಕಳಿಗೆ ಹೇಳಿಕೊಡಿ. ಕ್ರೈಸ್ತ, ಬೌದ್ಧ, ಜೈನ ಧರ್ಮಗಳಲ್ಲೂ ಉತ್ತಮ ವಿಚಾರಗಳಿವೆ. ಅವುಗಳನ್ನು ಹೇಳಿಕೊಡಿ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ಇದಕ್ಕೆ ನಾವು ಒಪ್ಪಿಗೆ ಕೊಡುವುದೇನು? ಇದನ್ನು ಆರಂಭಿಸಿದ್ದೆ ನಾವು. ನಾವು ಮಾಡಿರುವುದನ್ನು ಅವರು ಕಾಪಿ ಮಾಡುತ್ತಿದ್ದಾರೆ. ಈಗಾಗಲೇ ಶ್ರೀಕೃಷ್ಣ ಸೇರಿದಂತೆ ಹಿಂದೂ ಧರ್ಮದ ಅಂಶಗಳು ಇಲ್ಲವೇ? ಭಗವದ್ಗೀತೆ ಪೂರ್ಣ ಪಟ್ಟಿಇಲ್ಲದಿದ್ದರೂ ಅಂಶಗಳು ಇಲ್ಲವೇ?’ ಎಂದರು.

click me!