
ಧರ್ಮಸ್ಥಳ(ಜು.19): ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದು ದಶಕಗಳೇ ಉರುಳಿದರೂ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಕುಟುಂಬಸ್ಥರು ಸತತ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಮತ್ತೆ ಭಾರಿ ಗದ್ದಲ ಶುರುವಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸತತ ಆರೋಪ ಮಾಡಲಾಗುತ್ತಿದೆ. ಆರೋಪ-ಪ್ರತ್ಯಾರೋಪ , ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಗಳು ಜೋರಾಗಿದೆ. ಆದರೆ ಸಿಬಿಐ ತೀರ್ಪಿನ ಬಳಿಕ ಸತತ ಆರೋಪ ಎದುರಿಸಿದರೂ ಮೌನವಾಗಿದ್ದ ಡಾ.ಡಿ ವಿರೇಂದ್ರ ಹೆಗ್ಗಡೆ ಕೊನೆಗೂ ಮೌನ ಮುರಿದಿದ್ದಾರೆ. ಸೌಜನ್ಯ ಪ್ರಕರಣದ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.
ಧರ್ಮಸ್ಥಳದ ವಿಭಾಗೀಯ ಮುಖ್ಯಸ್ಥರ ಸಭೆ ನಡೆಸಿದ ವೀರೇಂದ್ರ ಹೆಗ್ಗಡೆ, ಪ್ರಸ್ತುತ ವಿದ್ಯಾಮಾನಗಳ ಕುರಿತು ಮಾತನಾಡಿದ್ದಾರೆ. ಧರ್ಮಸ್ಥಳ ಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ. ಕ್ಷೇತ್ರದ ವತಿಯಿಂದ ಹಲವು ಸೇವೆ ಮಾಡಿಕೊಂಡು ಬಂದಿದ್ದೇವೆ. ಸಮಾಜದಲಲ್ಲಿ ಒಳ್ಳೆಯ ಕೆಲಸ ಅನ್ನೋದು ಎರಡು ಬದಿಯ ಕತ್ತಿ ಇದ್ದ ಹಾಗೆ. ಎರಡೂ ಕಡೆಯಿಂದಲೂ ಕೊಯ್ಯುತ್ತದೆ. ಪ್ರಚಾರದ ದೃಷ್ಟಿಯಿಂದ ಒಳ್ಳೆಯದು. ಆದರೆ ದ್ವೇಷ ಸೃಷ್ಟಿಸುತ್ತದೆ. ಈ ಪ್ರಕರಣದ ಹಿಂದೆ ದ್ವೇಷ,ಅಸೂಯೆ ಕಾರಣ. ಧರ್ಮಸ್ಥಳ ಹೆಸರಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿದೆ. ಇದು ಹಲವರಲ್ಲಿ ದ್ವೇಷದ ವಿಷ ಬೀಜ ಬಿತ್ತಿದೆ ಎಂದು ಹೆಗ್ಗಡೆ ಹೇಳಿದ್ದಾರೆ.
ಮುರುಘಾಶ್ರೀ ಪ್ರಕರಣ ಬಯಲು ಮಾಡಿದ್ದ 'ಒಡನಾಡಿ' ಇದೀಗ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಎಂಟ್ರಿ!
ಧರ್ಮಸ್ಥಳದ ಸಂಪತನ್ನು ಹೇಗೆ ಬಳುಸ್ತಿದ್ದೇವೆ ಅನ್ನೋದರ ಮೇಲೆ ಪರಿಣಾಮ ಇದೆ. ನಮ್ಮ ಮೇಲೆ ಮಾಡುತ್ತಿರುವ ಆರೋಪಗಳಿಗೂ ನಮಗೂ ಸಂಬಂಧವಿಲ್ಲ. ಸೌಜನ್ಯ ಪ್ರಕರಣವನ್ನು ತನಿಖೆ ಮಾಡಲು ಮೊದಲು ಸರ್ಕಾರಕ್ಕೆ ಪತ್ರ ಬರೆದಿದ್ದು ನಾನು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಈ ಪ್ರಕರಣದ ಕುರಿತು ಮತ್ತಷ್ಟು ತನಿಖೆ, ಸಂಶೋಧನೆ ನಡೆಯಲಿ. ಇದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೆಗ್ಗಡೆ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಕ್ಷೇತ್ರದ ವಿಚಾರವನ್ನು ಯಾಕೆ ಎಳೆದು ತರುತ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ. ಇದು ಕೇವಲ ಅಮಾಯಕ ಹುಡುಗಿಯ ಸಾವಿನ ವಿಚಾರವಲ್ಲ. ಇದರ ಹಿಂದೆ ಕ್ಷೇತ್ರದ ವಿಚಾರವಿದೆ. ನನಗೆ ಯಾವುದೇ ಭಯ, ಸಂಕೋಚ, ಸಂದೇಹ ಇಲ್ಲ. ನಮ್ಮ ವಿರುದ್ಧ ಶತುೃತ್ವಕ್ಕೆ ಕಾರಣ ಏನು? ನಮ್ಮ ಸಿಬ್ಬಂದಿಗಳಿಗೆ ಕ್ಷೇತ್ರದ ಕುರಿತ ವಿಚಾರಗಳು ತಿಳಿದಿದೆ. ಆದರೆ ನಮ್ಮ ಮೇಲೆ ಸತತ ಆರೋಪ ಮಾಡುತ್ತಿದ್ದರೂ ನಾವು ಸುಮ್ಮನಿದ್ದೇವೆ ಎಂದು ಮತ್ತಷ್ಟು ಆರೋಪ ಮಾಡಲಾಗುತ್ತದೆ. ನಾವು ಸುಮ್ಮನಿದ್ದೇವೆ ಅನ್ನೋದೇ ಒಂದು ಸಂಭಾಷಣೆ ಆಗಬಾರದು ಅನ್ನೋ ಕಾರಣಕ್ಕೆ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಸೌಜನ್ಯ ಅತ್ಯಾಚಾರ ಹತ್ಯೆ ಪ್ರಕರಣ: ನ್ಯಾಯಬದ್ಧ ತನಿಖೆಗೆ ಸೌಜನ್ಯ ತಾಯಿ ಆಗ್ರಹ
ಒಳ್ಳೆಯ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಇದರ ನಡುವೆ ಬಂದ ಮೋಡ ಇದು. ಈ ಪರದೆ ತೆಗೆಯಬೇಕು. ಅದನ್ನು ದೇವರು ತೆಗೆಯುತ್ತಾನೆ. ನಿಮ್ಮ ಶಿಸ್ತು, ನಿಯಮ ಮೀರಬೇಡಿ. ನನಗೆ ಯಾವ ಭಯವೂ ಇಲ್ಲ. ವೈಯುಕ್ತಿಕ ಅವಮಾನ, ವೈಯುಕ್ತಿಕ ಸಂಭಾಷಣೆ ಸರಿಯಲ್ಲ. ಇದನ್ನು ನಿಲ್ಲಿಸಬೇಕು. ನಮ್ಮ ಅಭಮಾನಿಗಳು ಏನು ಮಾಡಲು ರೆಡಿ ಇದ್ದಾರೆ. ಆದರೆ ನಾನು ಅವರಿಗೆ ಏನೂ ಮಾಡದಂತೆ ಸಂಯಮ ಪಾಲಿಸಲು ಮನವಿ ಮಾಡಿದ್ದೇನೆ. ನೈತಿಕ ಶಕ್ತಿ ದೊಡ್ಡು ಎಂದು ಅವರಿಗೆ ಹೇಳಿದ್ದೇನೆ ಎಂದು ಹೆಗ್ಗಡೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ