
ದಕ್ಷಿಣ ಕನ್ನಡ (ಆ.02): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ದೂರು ನೀಡಿದ ಅನಾಮಿಕ ವ್ಯಕ್ತಿ ತೋರಿಸಿದ 13 ಸ್ಥಳಗಳ ಪೈಕಿ 9ನೇ ಸಮಾಧಿ ಸ್ಥಳಗಳದ ಉತ್ಖನನದಲ್ಲಿಯೂ ಯಾವುದೇ ಮೂಳೆಗಳು ಸಿಕಿಲ್ಲ. ಇದೀಗ ಎಸ್ಐಟಿ ತನಿಖಾಧಿಕಾರಿಗಳ ಮುಂದೆ 10ನೇ ಸಮಾಧಿಯಲ್ಲಿ 3 ಶವಗಳನ್ನು ಹೂಳಿದ್ದಾಗಿ ಅನಾಮಿಕ ವ್ಯಕ್ತಿ ಹೇಳಿದ್ದಾನೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅನಾಮಿಕ ದೂರುದಾರ ವ್ಯಕ್ತಿ ಹೇಳಿದಂತೆ ಧರ್ಮಸ್ಥಳ ಗ್ರಾಮದ ಕಾಡಿನಲ್ಲಿ ಶವ ಹೂಳಿದ 13 ಸ್ಥಳಗಳ ಗುರುತು ಹಾಗೂ ಉತ್ಖನನ ಕಾರ್ಯವನ್ನು ಎಸ್ಐಟಿ ತಂಡ ಮಾಡುತ್ತಿದೆ. ಈವರೆಗೆ 9 ಸಮಾಧಿಗಳನ್ನು ಉತ್ಖನನ ಮಾಡಲಾಗಿದ್ದು, ಈ ಪೈಕಿ 6ನೇ ಸಮಾಧಿ ಸ್ಥಳದಲ್ಲಿ ಮಾತ್ರ ಒಬ್ಬ ವ್ಯಕ್ತಿಯ ಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ. ಉಳಿದ 8 ಸಮಾಧಿ ಸ್ಥಳಗಳಲ್ಲಿ ಯಾವುದೇ ಮಾನವನ ದೇಹದ ಕುರುಹುಗಳು ಪತ್ತೆಯಾಗಿಲ್ಲ. ಇದೀಗ 1ಒನೇ ಸಮಾಧಿ ಸ್ಥಳವನ್ನು ಅಗೆಯಲು ಮುಂದಾಗಿದ್ದಾರೆ.
ಶನಿವಾರ ಬೆಳಗ್ಗೆ 9ನೇ ಸಮಾಧಿ ಉತ್ಖನನ ಮಾಡಿದ ಎಸ್ಐಟಿ ತಂಡಕ್ಕೆ ಸಮಾಧಿ ಸ್ಥಳದಲ್ಲಿ ಸಣ್ಣ ಬಂಡೆಯೊಂದು ಸಿಕ್ಕಿದ್ದರಿಂದ ಅಲ್ಲಿ ಅಗೆಯಲು ಸಣ್ಣ ಇಟಾಚಿಯನ್ನು ಬಳಕೆ ಮಾಡಲಾಗಿತ್ತು. ಸುಮಾರು 6 ರಿಂದ 7 ಅಡಿ ಅಗೆದರೂ ಇಲ್ಲಿ ಯಾವುದೇ ಮೂಳೆಗಳು ಸಿಗಲಿಲ್ಲ. ಹೀಗಾಗಿ, ಪಾಯಿಂಟ್ ನಂಬರ್ 9ರಲ್ಲಿ ಕಾರ್ಯಾಚರಣೆ ಮಾಡುವುದನ್ನು ಎಸ್ಐಟಿ ಅಧಿಕಾರಿಗಳು ಅಂತ್ಯಗೊಳಿಸಿದ್ದಾರೆ. ಯಾವುದೇ ಅವಶೇಷ ಸಿಗದ ಗುಂಡಿಯನ್ನು ಇಟ್ಟುಕೊಂಡು ಉಪಯೋಗವೇನೂ ಇಲ್ಲವೆಂದು ಪುನಃ ಎಸ್ಐಟಿ ಅಧಿಕಾರಿಗಳು ಈ ಗುಂಡಿಯನ್ನು ಮುಚ್ಚಿದ್ದಾರೆ. ಇದಕ್ಕೂ ಮೊದಲು 5 ಮಂದಿ ಅಧಿಕಾರಿಗಳು ಹಾಜರಿದ್ದು ಫೋಟೋ ದಾಖಲೀಕರಣ ಮಾಡಿಕೊಂಡಿದ್ದಾರೆ. ನಂತರ ತೆಗೆದ ಮಣ್ಣನ್ನು ವಾಪಾಸು ಗುಂಡಿಗೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಗುಂಡಿ ಮುಚ್ಚುವ ಕಾರ್ಯಕ್ಕೆ ಮಿನಿ ಅರ್ಥ್ ಮೂವರ್ ಅವನ್ನು ಬಳಕೆ ಮಾಡಲಾಯಿತು.
ನೇತ್ರಾವತಿ ಸ್ನಾನ ಘಟ್ಟದಿಂದ 500 ಮೀ. ದೂರದಲ್ಲಿರುವ 10ನೇ ಸಮಾಧಿ ಸ್ಥಳ ಉತ್ಖನನ:
ದೂರುದಾರ ಅನಾಮಿಕ ವ್ಯಕ್ತಿಯನ್ನು 9ನೇ ಸ್ಥಳದ ಉತ್ಖನನ ಕಾರ್ಯ ಮುಗಿದ ಬಳಿಕ ಆತನನ್ನು ಊಟಕ್ಕೆ ಭದ್ರತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇದಾದ ನಂತರ ಎಸ್ಐಟಿ ಅಧಿಕಾರಿಗಳು ಆತ ತೋರಿಸಿದ 10ನೇ ಸ್ಥಳ ಉತ್ಖನನ ಮಾಡುವುದಕ್ಕೆ ವಾಪಸ್ ಕರೆದುಕೊಂಡು ಬರುತ್ತಾರೆ. 9ನೇ ಸ್ಥಳದಿಂದ 300 ಮೀ. ದೂರದಲ್ಲಿರುವ ಅಂದರೆ ನೇತ್ರಾವತಿ ನದಿ ಸ್ನಾನಘಟ್ಟದಿಂದ 500 ಮೀಟರ್ ದೂರದಲ್ಲಿರುವ 10ನೇ ಸಮಾಧಿ ಸ್ಥಳಕ್ಕೆ ಹೋಗಿ ಉತ್ಖನನ ಕಾರ್ಯವನ್ನು ಆರಂಭಿಸಲು ಮುಂದಾಗಿದ್ದಾರೆ. ಈ ಸ್ಥಳಕ್ಕೆ ದೂರುದಾರನನ್ನು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕರೆದೊಯ್ಯಲಾಯಿತು.
10ನೇ ಸಮಾಧಿ ಸ್ಥಳದಲ್ಲಿ 3 ಶವ ಹೂತಿದ್ದಾಗಿ ಹೇಳಿಕೆ:
ಈಗಾಗಲೇ ಅನಾಮಿಕ ತೋರಿಸಿದ 13 ಸಮಾಧಿ ಸ್ಥಳಗಳ ಪೈಕಿ 9 ಗುಂಡಿ ಅಗೆದರೂ ಒಂದರಲ್ಲಿ (6ರಲ್ಲಿ) ಮಾತ್ರ ಮಾನವನ ಮೂಳೆಗಳು ಸಿಕ್ಕಿವೆ. ಇದೀಗ 10ನೇ ಗುಂಡಿ ಉತ್ಖನನ ಕಾರ್ಯಕ್ಕೂ ಮುನ್ನ ಅನಾಮಿಕ ವ್ಯಕ್ತಿ ಈ ಒಂದೇ ಸ್ಥಳದಲ್ಲಿ ಬರೋಬ್ಬರಿ 3 ಶವಗಳನ್ನು ಹೂತು ಹಾಕಿದ್ದಾಗಿ ಹೇಳಿದ್ದಾನೆ. ಎಸ್ಐಟಿ ವಿಚಾರಣೆ ವೇಳೆ ಈ ಸ್ಥಳದಲ್ಲಿ 3 ಶವಗಳಿವೆ ಎಂದು ಹೇಳಿಕೆ ನೀಡಿದ್ದನು. ಹೀಗಾಗಿ, 10ನೇ ಸಮಾಧಿ ಸ್ಥಳದ ಅಗೆಯುವ ಕಾರ್ಯವನ್ನು ಇಂದೇ ಆರಂಭ ಮಾಡಿದ್ದು, ಸಂಜೆ ತಡವಾದರೂ ಸರಿ, ಹೆಚ್ಚು ಜಾಗ್ರತೆಯಿಂದ ಉತ್ಖನನ ಕಾರ್ಯಕ್ಕೆ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ