
ಯಾದಗಿರಿ (ಆ.20): ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯ ಪ್ರವಾಹ ಲೆಕ್ಕಿಸದೇ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾ ಮಸ್ಥರು ಭಕ್ತಿಭಾವದಿಂದ ಗೆದ್ದಮ್ಮ ದೇವಿಯ ತೆಪ್ಪೋತ್ಸವವನ್ನು ಆಚರಿಸಿದ್ದಾರೆ. ಶ್ರಾವಣ ಮಾಸದ ಕೊನೆಯ ಮಂಗಳವಾರದಂದು (ನಿನ್ನೆ) ನಡೆದ ಈ ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆ, ದೇವರಗಡ್ಡಿ ಗ್ರಾಮದ ಭಕ್ತರು ಗೆದ್ದಮ್ಮ ದೇವಿಯ ಮೂರ್ತಿಯನ್ನು ಹೊತ್ತು ಕೃಷ್ಣಾ ನದಿಯ ತೀರಕ್ಕೆ ಬಂದಿದ್ದರು. ಪ್ರವಾಹದ ಆತಂಕದ ನಡುವೆಯೂ, ಭಕ್ತರು ದೇವಿಯ ಮೂರ್ತಿಗೆ ವಿಶೇಷ ಪೂಜೆ-ಕೈಂಕರ್ಯ ನೆರವೇರಿಸಿದರು. ಹೂವಿನಿಂದ ಅಲಂಕರಿಸಲ್ಪಟ್ಟ ತೆಪ್ಪವನ್ನು ಭಕ್ತಿಪೂರ್ವಕವಾಗಿ ಪೂಜಿಸಿ, ಉತ್ಸವವನ್ನು ಆಚರಿಸಿದರು. ತೆಪ್ಪದಲ್ಲಿ ಹುಗ್ಗಿ, ಮಡಿಕೆ ಇತ್ಯಾದಿಗಳನ್ನು ಇಟ್ಟು, ಭಕ್ತರು ಕೃಷ್ಣಾ ನದಿಯ ಅರ್ಧಕ್ಕೆ ಸಾಗಿ ತೆಪ್ಪವನ್ನು ಅರ್ಪಿಸಿದರು.
ಈ ಧೈರ್ಯದಿಂದ ಕೂಡಿದ ಭಕ್ತಿಯ ಕಾರ್ಯವನ್ನು ವ್ಯಕ್ತಿಯೊಬ್ಬರು ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಹದ ಭೀತಿಯ ನಡುವೆಯೂ ತಮ್ಮ ಸಂಪ್ರದಾಯವನ್ನು ಉಳಿಸಿಕೊಂಡ ಗ್ರಾಮಸ್ಥರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು 'ನದಿ ರಭಸವಾಗಿ ಹರಿಯುವಾಗ ಪ್ರಾಣಾಪಾಯ ತರುವ ಈ ಆಚರಣೆ ಬೇಕಾ' ಎಂದು ಪ್ರಶ್ನಿಸಿದ್ದಾರೆ. ಅದೇನೆ ಇರಲಿ, ಗೆದ್ದಮ್ಮ ದೇವಿಯ ತೆಪ್ಪೋತ್ಸವವು ದೇವರಗಡ್ಡಿ ಗ್ರಾಮದ ಜನರ ಭಕ್ತಿಯ ಶಕ್ತಿ, ಸಂಪ್ರದಾಯದ ಮಹತ್ವ ತೋರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ