
ಬೆಂಗಳೂರು (ಆ.20) : ಎಂಜಿನಿಯರಿಂಗ್ ಸೇರಿ ಇತರೆ ಕ್ಷೇತ್ರದಲ್ಲಿರುವ ಯುವಕರಲ್ಲಿರುವ ಕನ್ನಡತನವನ್ನು, ಅವರ ಅಭಿವ್ಯಕ್ತಿ ಕ್ರಮವನ್ನು ಗುರುತಿಸಿ ಅದಕ್ಕೆ ಸ್ಪಷ್ಟರೂಪ ನೀಡುವ ಕೆಲಸ ಆಗಬೇಕಿದೆ ಎಂದು ಖ್ಯಾತ ನಟ ರಮೇಶ್ ಅರವಿಂದ್ ಅಭಿಪ್ರಾಯಪಟ್ಟರು.
ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆರಂಭವಾದ ‘ಕನ್ನಡದ ಧ್ರುವತಾರೆ- ಸಾಧಕರೊಂದಿಗೆ ಮಾತು-ಕತೆ’ ಕಾರ್ಯಕ್ರಮದಲ್ಲಿ ಮೊದಲ ಅತಿಥಿಯಾಗಿ ಸಂವಾದದಲ್ಲಿ ಪಾಲ್ಗೊಂಡ ಅವರು ಸಭಿಕರ ಪ್ರಶ್ನೆಗೆ ಉತ್ತರಿಸಿದರು. ಪ್ರಸ್ತುತ ಬೇರೆ ಕ್ಷೇತ್ರದಲ್ಲಿ ಯುವಕರು ತೊಡಗಿದ್ದರೂ ಕನ್ನಡ ಉಳಿಸಿಕೊಂಡಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಅದನ್ನು ಬೆಳೆಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಕನ್ನಡತನ ನಮ್ಮಲ್ಲಿ ಇದ್ದೇ ಇದೆ. ಅದಕ್ಕೆ ರೂಪ ನೀಡುವ ಕೆಲಸ ಆಗಬೇಕಿದೆ ಎಂದರು.
ಯಕ್ಷಗಾನ ವೇಷದಲ್ಲಿ ಮಿಂಚಿದ ರಮೇಶ್ ಅರವಿಂದ್!
ಕಲಾವಿದನಾಗಿದ್ದು ನನ್ನ ಅದೃಷ್ಟ. ಬೇರೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿದ್ದರೂ ಇಂತಹ ಜನ ಪ್ರೀತಿ ದೊರಕುತ್ತಿರಲಿಲ್ಲ. ಚಿತ್ರರಂಗ ತಾಂತ್ರಿಕವಾಗಿ ಬೆಳೆದಿದೆ. ಆದರೆ, ಕ್ರಿಯಾಶೀಲತೆ ನೆಪದಲ್ಲಿ ಅಶಿಸ್ತು, ವಿಳಂಬ ಕಾಣುತ್ತಿದ್ದೇವೆ. ಈ ತಪ್ಪು ನಿವಾರಿಸಿಕೊಳ್ಳುವ ಅಗತ್ಯವಿದೆ. ಪೌರಾಣಿಕ, ಐತಿಹಾಸಿಕ ಪಾತ್ರ ಮಾಡುವ ಬಯಕೆ ಇದೆ. ಎಲ್ಲರ ಗಡಿಯಾರದಲ್ಲಿಯೂ ಸಮಯ ಒಂದೇ. ಅದನ್ನು ನಾವು ಹೇಗೆ ಸದುಪಯೋಗಪಡಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ ಎಂದು ಹೇಳಿದರು.
ಪುಟ್ಟ ಗಾಯಕಿ ದಿಯಾ ಹೆಗ್ಡೆ ಆಟೋಗ್ರಾಫ್ ಪಡೆದ ಸ್ಟಾರ್ ನಟ ರಮೇಶ್ ಅರವಿಂದ್
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಸಿ.ಎನ್.ಮಂಜುನಾಥ, ಸಾಧನೆ ಇಲ್ಲದೇ ಸತ್ತರೆ ಅಂತಹ ಸಾವಿಗೆ ಅರ್ಥವಿಲ್ಲ. ತಾಳ್ಮೆಯಿಂದ ನಿರಂತರ ಪ್ರಯತ್ನದಲ್ಲಿ ಇದ್ದಾಗ ಸಾರ್ಥಕ ಸಾಧಕರಾಗಲು ಸಾಧ್ಯ. ತಕ್ಷಣ ಸಾಧನೆಯ ಉತ್ತುಂಗಕ್ಕೆ ಏರಬೇಕು ಎನ್ನುವವರು ಅಷ್ಟೇ ಬೇಗನೆ ಕೆಳಗೆ ಬಿದ್ದು ಬೀಳುತ್ತಾರೆ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ, ಡಾ ಮಹೇಶ್ ಜೋಶಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ ಬಿ.ಎಂ.ಪಟೇಲ್ ಪಾಂಡು, ಪ್ರೊ. ಎನ್.ಎಸ್.ಶ್ರೀಧರ್ ಮೂರ್ತಿ ಇದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ