ಉಡುಪಿಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಬೇಡಿಕೆ: ಮಾಹಿತಿ ಇಲ್ಲ ಎಂದ ಸಚಿವ ಗುಂಡೂರಾವ್‌

By Kannadaprabha NewsFirst Published Feb 12, 2024, 12:24 PM IST
Highlights

ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಡಿಕೆ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಆದ್ಯತೆಯ ಮೇರೆಗೆ ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳಿದ್ದು, ಅವಿಭಜಿತ ಕರಾವಳಿ ಜಿಲ್ಲೆಗಳಲ್ಲಿ ಸಾಕಷ್ಟು ಖಾಸಗಿ ಮೆಡಿಕಲ್ ಕಾಲೇಜುಗಳಿವೆ.

ಕುಂದಾಪುರ (ಫೆ.12): ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಡಿಕೆ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಆದ್ಯತೆಯ ಮೇರೆಗೆ ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳಿದ್ದು, ಅವಿಭಜಿತ ಕರಾವಳಿ ಜಿಲ್ಲೆಗಳಲ್ಲಿ ಸಾಕಷ್ಟು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಈಗ ಇರುವಂತಹ ಮೆಡಿಕಲ್ ಕಾಲೇಜುಗಳನ್ನು ಸಮರ್ಪಕವಾಗಿ ನಡೆಸಲು ಪ್ರಥಮ ಪ್ರಾಶಸ್ತ್ಯ ಕೊಟ್ಟು ಆ ಬಳಿಕ ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು. 

ಕುಂದಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರ ಅವರು, ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಸಹಿತ ಸಿಬ್ಬಂದಿ ಭರ್ತಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಎಂಬಿಬಿಎಸ್ ಆದ ವೈದ್ಯರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಗುತ್ತಿಗೆ ಆಧಾರದಲ್ಲಿಯೂ ಭರ್ತಿಗೆ ಸೂಚನೆ ನೀಡಲಾಗಿದೆ. 800 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೊಲ್ಲೂರು ಸೇರಿದಂತೆ ಕೆಲ ಪಿಎಚ್‍ಸಿಗಳಲ್ಲಿ 24 ಗಂಟೆ ಸೇವೆಗೆ ಎಲ್ಲ ಅಗತ್ಯ ಸೌಕರ್ಯ ಒದಗಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು. 

ಅಯೋಧ್ಯೆ, ಕಾಶಿ, ಮಥುರಾ ದೇಶದ ಬಹುಸಂಖ್ಯಾತರ ಅಸ್ಮಿತೆ: ಕೇಂದ್ರ ಸಚಿವ ನಾರಾಯಣಸ್ವಾಮಿ

ಆರೋಗ್ಯ ಇಲಾಖೆ ಭ್ರಷ್ಟಾಚಾರ ಆರೋಪದ ಕುರಿತಂತೆ ನ್ಯಾ. ಮೈಕಲ್ ಡಿಕುನ್ಹಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವರದಿ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. 25 ವರ್ಷಗಳ ಹಿಂದೆ ಆದ ತಾಲೂಕುಗಳ ಆಸ್ಪತ್ರೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಆ ಬಳಿಕ ಬೈಂದೂರು, ಬ್ರಹ್ಮಾವರದಂತಹ ಹೊಸ ತಾಲೂಕುಗಳ ಸಮುದಾಯ ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡಲಾಗುವುದು. ಕಾರ್ಕಳ ಹೆರಿಗೆ ತಜ್ಞರಿಲ್ಲದ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಈಶ್ವರಪ್ಪ ಸಾಮಾಜಿಕ ವ್ಯವಸ್ಥೆಗೇ ಧಕ್ಕೆ: ಬಿಜೆಪಿ ನಾಯಕ ಈಶ್ವರಪ್ಪ ಅವರು ನಮ್ಮ ಸಾಮಾಜಿಕ ವ್ಯವಸ್ಥೆಗೇ ಧಕ್ಕೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಸದಾ ಕೊಲ್ಲುವ ಕೊಚ್ಚುವ ಮುಗಿಸುವ ಮಾತುಗಳನ್ನಾಡುತ್ತಾರೆ. ಬಿಜೆಪಿಯ ನಾಯಕನಾದವನಿಗೆ ಇದು ಶೋಭೆಯೇ? ಬಾಯಿಗೆ ಬಂದಂತೆ ಮಾತನಾಡುವ ಈಶ್ವರಪ್ಪ ಕೂಡ ಬಿಜೆಪಿಯ ನಾಯಕನೇ? ಎಂದವರು ತೀವ್ರವಾಗಿ ಪ್ರಶ್ನಿಸಿದರು. ಸಮಾಜವನ್ನು ಸದಾ ಆತಂಕದಲ್ಲಿ ಇಡುವುದೇ ಈಶ್ವರಪ್ಪನ ಕೆಲಸ. ಕೋಮು ಪ್ರಚೋದನೆ ಮಾಡಿ ಮತ ಗಳಿಸುವುದೇ ಇವರ ಕಾಯಕ, ಬಿಜೆಪಿಗೆ ಇದರಿಂದಲೇ ಲಾಭ ಎಂದವರು ಆರೋಪಿಸಿದರು.

ಕನ್ನಡಿಗರ ಸೇವೆಗೆ ಅವಕಾಶ ಸಿಕ್ಕಿದ್ದು ಭಾಗ್ಯ: ರಾಜೀವ್‌ ಚಂದ್ರಶೇಖರ್‌ ವಿಶೇಷ ಸಂದರ್ಶನ

ಇವರೆಲ್ಲಾ ಜೈ ಶ್ರೀರಾಮ್ ಹೇಳುತ್ತಾರೆ, ಆದರೆ ಎಷ್ಟರಮಟ್ಟಿಗೆ ಅದನ್ನು ಅವರು ಜೀವನದಲ್ಲಿ ಅಳವಡಿಸಿದ್ದಾರೆ? ಹೇಳುವುದು ಸುಲಭ, ಆದರೆ ಎಷ್ಟರ ಮಟ್ಟಿಗೆ ನೈತಿಕ ಜೀವನ ನಡೆಸುತ್ತಿದ್ದಾರೆ ಎಂದೂ ಸಚಿವರು ಪ್ರಶ್ನಿಸಿದರು. ಖರ್ಗೆ ಹೊಟ್ಟೆಯಲ್ಲಿ ಹುಳ ಹುಟ್ಟಿದೆ ಎಂದ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಇಂತಹ ಹೇಳಿಕೆ ನೀಡುವ ಅನೇಕ ನಾಯಕರು ಬಿಜೆಪಿಯಲ್ಲಿದ್ದಾರೆ. ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಸುನಿಲ್ ಕುಮಾರ್, ಪ್ರತಾಪ್ ಸಿಂಹ, ಅನಂತಕುಮಾರ್ ಹೀಗೆ ದೊಡ್ಡ ಪಟ್ಟಿ ಇದೆ. ಪ್ರಚೋದನಕಾರಿ ಹೇಳಿಕೆ ನೀಡಿ ಜನರ ನಡುವೆ ವೈಷಮ್ಯ ಸೃಷ್ಟಿ ಮಾಡುವುದೇ ಇವರ ಕೆಲಸ ಎಂದರು.

click me!