ಬೆಂಗ್ಳೂರಲ್ಲಿ ಡೆಲ್ಟಾ+ ಸೋಂಕಿತ ನಾಪತ್ತೆ: ಬಿಬಿಎಂಪಿಗೆ ಹೆಚ್ಚಿದ ಟೆನ್ಷನ್‌..!

By Kannadaprabha NewsFirst Published Aug 6, 2021, 2:35 PM IST
Highlights

*  ಬೊಮ್ಮನಹಳ್ಳಿಯಲ್ಲಿ ಮತ್ತೊಂದು ಡೆಲ್ಟಾ+ ಕೇಸ್‌ ಪತ್ತೆ
*  ಪದ್ಮನಾಭ ನಗರದ ಮಕ್ಕಳ ಕೋವಿಡ್ ಕೇರ್ ಸೆಂಟರ್ ರೆಡಿ
*  ಹೊರ ರಾಜ್ಯದ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ 
 

ಬೆಂಗಳೂರು(ಆ.06): ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಡೆಲ್ಟಾ+ ಕೇಸ್ ಪತ್ತೆಯಾಗಿದೆ. ಈ ಮೂಲಕ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಹೌದು, 29 ವರ್ಷದ ಯುವಕನಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದೆ. ಈತನಿಗೆ ಜು. 14 ರಂದು ಕೊರೋನಾ ಸೋಂಕು ದೃಢಪಟ್ಟಿತ್ತು. ಜ್ವರದ ಲಕ್ಷಣಗಳು ಕೂಡ ಕಾಣಿಸಿಕೊಂಡಿದ್ದವು. ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನ ಪತ್ತೆ ಮಾಡಿದ ಟೆಸ್ಟ್‌ಗೆ ಒಳಪಡಿಸಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಹೇಳಿದ್ದಾರೆ.

ಇಂದು(ಶುಕ್ರವಾರ) ಮಾಧ್ಯಮದವರಿಗೆ ಮಾಹಿತಿ ನೀಡಿದ ರಣದೀಪ್ ಅವರು, ಇಲ್ಲಿಯವರೆಗೆ ಒಟ್ಟು 7 ಪ್ರಾಥಮಿಕ ಸಂಪರ್ಕಿತರು ಹಾಗೂ ಒಟ್ಟು 14 ಸೆಕೆಂಡರಿ ಕಾಂಟ್ಯಾಕ್ಟ್ ಪತ್ತೆ ಮಾಡಿ ಟೆಸ್ಟ್‌ಗೆ ಒಳಪಡಿಸಲಾಗಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಲ್ಲಿ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. 

ಡೆಲ್ಟಾ ಪ್ಲಸ್ ಸೋಂಕಿತ ಸದ್ಯ ಫೋನ್ ಸ್ವಿಚ್ಡ್‌ ಆಫ್ ಮಾಡಿಕೊಂಡಿದ್ದಾನೆ. ಟೆಸ್ಟ್ ಕೊಡುವಾಗ ಸೋಂಕಿತ ಉತ್ತರಹಳ್ಳಿ ಎಂದು ಅಡ್ರೆಸ್ ಕೊಟ್ಟಿದ್ದ, ಡೆಲ್ಟಾ ಪ್ಲಸ್ ವೈರಸ್ ಸೋಂಕು ತಗುಲಿದೆ ಎಂಬ ಮಾಹಿತಿ ಬರುತ್ತಿದ್ದಂತೆ ಇದೀಗ ನಾಪತ್ತೆಯಾಗಿದ್ದಾನೆ. ಸೋಂಕಿತನ ಮೂಲ ವಿಳಾದ ಮಾಗಡಿ ರಸ್ತೆ ಎಂಬ ಮಾಹಿತಿಯನ್ನ ಬಿಬಿಎಂಪಿ ಕಲೆ ಹಾಕಿದೆ. ಟೆಸ್ಟಿಂಗ್ ವೇಳೆ ಸೋಂಕಿತ ತಪ್ಪು ವಿಳಾಸ ನೀಡಿದ್ದಾನೆ. ಸೋಂಕಿತನ ಪತ್ತೆಗಾಗಿ ಪೊಲೀಸರ ಸಹಕಾರ ಕೇಳಿದ್ದಾರೆ. ಆತನ ಮೊಬೈಲ್ ನಂಬರ್ ಆಧರಿಸಿ ಪೊಲೀಸರು ಟ್ರೇಸ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.  ಸೋಂಕಿತನ ಮನೆಯ 100 ಮೀ ಕಂಟೈನ್ಮೆಂಟ್ ಝೋನ್ ಮಾಡಬೇಕಿದೆ. ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಲ್ಲಿ ಕೋವಿಡ್ ಟೆಸ್ಟ್ ಕೂಡ ಮಾಡಬೇಕಿದೆ. ಆದರೆ ಸೋಂಕಿತ ಮಾತ್ರ ನಾಪತ್ತೆಯಾಗಿದ್ದಾನೆ.  ಹೀಗಾಗಿ ಬಿಬಿಎಂಪಿಗೆ ಡೆಲ್ಟಾ ಪ್ಲಸ್ ಸೋಂಕಿತನ ಟೆನ್ಶನ್ ಹೆಚ್ಚಾಗಿದೆ

ಡೆಲ್ಟಾ ಪ್ಲಸ್‌ ಆತಂಕ ಬೇಡ, ಅಪಯಕಾರಿ ವೈರಸ್‌ಗೆ ಕೋವಾಕ್ಸಿನ್ ಪರಿಣಾಮಕಾರಿ; ICMR!

ನಗರದಲ್ಲಿ ಮತ್ತೆ ಆತಂಕ ಮೂಡಿಸಿದ ಸೋಂಕು 

ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುವ ಮೂಲಕ ಮತ್ತೆ ಆತಂಕ ಮೂಡಿಸಿದೆ. ಹೌದು, ಪಕ್ಕದ ರಾಜ್ಯಗಳಲ್ಲಿ ಕೇಸ್‌ಗಳ‌ ಹೆಚ್ಚಳ‌ವಾದ ಬೆನ್ನಲ್ಲೇ ಬೆಂಗಳೂರಿನಲ್ಲೂ ಕೂಡ ನಿಧಾನಗತಿಯಲ್ಲಿ ಏರಿಕೆಯಾಗುತ್ತಿವೆ. ಕಳೆದ ಆರು ವಾರಗಳಿಂದ ನಿಧಾನಗತಿಯಲ್ಲಿ ಇಳಿಕೆಯಾಗಿದ್ದ ಕೇಸ್‌ಗಳ ಸಂಖ್ಯೆ ಇದೀಗ ಮತ್ತೆ ಏರಿಕೆಯಾಗುತ್ತಿವೆ. 

ವಾರದಿಂದ ವಾರಕ್ಕೆ ಪಾಸಿಟಿವ್ ಕೇಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳ

ವಾರದಿಂದ ವಾರಕ್ಕೆ ಬೆಂಗಳೂರಿನಲ್ಲಿ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ಕಳೆದ 3 ವಾರಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ, ಪಾಸಿಟಿವಿಟಿ ರೇಟ್ ಏರಿಕೆಯತ್ತ ಸಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮತ್ತೊಂದು ಟೆನ್ಷನ್‌ ಶುರುವಾಗಿದೆ. 

ಪಾಸಿಟಿವ್ ಕೇಸ್‌ ಏರಿಕೆ..! ಡಿಸ್ಚಾರ್ಜ್ ಸಂಖ್ಯೆ ಇಳಿಕೆ..!

ಪಾಸಿಟಿವ್ ಕೇಸ್, ಪಾಸಿಟಿವಿಟಿ ರೇಟ್, ಡಿಸ್ಚಾರ್ಜ್ ಆದವರ ಕಳೆದ 3 ವಾರಗಳ ಅಂಕಿ ಅಂಶ ಹೀಗಿದೆ.

ದಿನಾಂಕ - ಪಾಸಿಟಿವ್ ಕೇಸ್ - ಪಾಸಿಟಿವಿಟಿ ರೇಟ್ - ಡಿಸ್ಚಾರ್ಜ್ ಸಂಖ್ಯೆ

ಜುಲೈ 15 ರಿಂದ  ಜುಲೈ 21 - 2684 - 0.64% - 6414
ಜುಲೈ 22 ರಿಂದ ಜುಲೈ 28   - 2819 - 0.69% - 3116
ಜುಲೈ 29 ರಿಂದ ಆಗಸ್ಟ್ 4  -  2877 - 0.66% - 2684

ಕಳೆದ ಮೂರು ವಾರಗಳಿಂದ ಬೆಂಗಳೂರಿನಲ್ಲಿ ಕೋವಿಡ್‌ ಪಾಸಿಟಿವ್ ಕೇಸ್‌ಗಳಲ್ಲಿ ಹೆಚ್ಚಳವಾಗುತ್ತಿವೆ. 14 ದಿನಗಳು ಆಸ್ಪತ್ರೆಯಲ್ಲಿ ಇದ್ರೆ ಅದನ್ನು ಆ್ಯಕ್ಟೀವ್ ಕೇಸ್ ಅಂತ ಹೇಳಲಾಗುತ್ತದೆ. ಹೋಂ ಐಸೋಲೇಷನ್ ಇರುವಂತವರಿಗೆ 10 ದಿನದ ನಂತರ ಕಾಲ್ ಮಾಡಿ ಅವರು ಗುಣಮುಖರಾಗಿದ್ರೆ ಡಿರ್ಚಾರ್ಜ್‌ ಅಂತ ತೋರಿಸಲಾಗುತ್ತದೆ. 

ಸಿಎಂ ನೇತೃತ್ವದಲ್ಲಿ ನಡೆಯಲಿದೆ ಕೋವಿಡ್ ನಿಯಂತ್ರಣ ಸಭೆ : ಮತ್ತಷ್ಟು ಕಠಿಣ ನಿಯಮ?

ನಗರದಲ್ಲಿ ಪಾಸಿಟಿವ್ ರೇಟ್ ಸಹ ಹೆಚ್ಚಳವಾಗುತ್ತಿದೆ. 155 ಕ್ಲಸ್ಟರ್ 3+ ಕೇಸ್‌ಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, 78 ಅಪಾರ್ಟ್‌ಮೆಂಟ್‌ಗಳಲ್ಲಿ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಹೆಚ್ಚಾಗಿ ಅಪಾರ್ಟ್‌ಮೆಂಟ್‌ಗಳಲ್ಲೇ ಕ್ಲಸ್ಟರ್ ಕೇಸ್‌ಗಳು ಕಂಡು ಬಂದಿದೆ ಅಂತ ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಹೇಳಿದ್ದಾರೆ. 

ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದವರಿಗೆ ನಿನ್ನೆಯಿಂದ ಕ್ವಾರಂಟೈನ್ ಮಾಡಲಾಗುತ್ತಿದೆ. ನಿನ್ನೆ ಒಂದೇ ದಿನ 25 ಜನರನ್ನು ಕ್ವಾರಂಟೈನ್ ‌ಮಾಡಲಾಗಿದೆ. ಸಾಕಷ್ಟು ಪ್ರಯಾಣಿಕರು ನೆಗೆಟಿವ್ ರಿಪೋರ್ಟ್ ತರುತ್ತಿಲ್ಲ. ಒಟ್ಟು‌ 9 ತಂಡಗಳನ್ನು ರಚನೆ ಮಾಡಲಾಗಿದ್ದು ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಪ್ರತಿ ವ್ಯಕ್ತಿಗೆ 250 ರೂಪಾಯಿಗಳಂತೆ ಫಿಕ್ಸ್ ಮಾಡಿದ್ದು ಹೋಟೆಲ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

ಹೊರ ರಾಜ್ಯದ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ 

ಹೊರ ರಾಜ್ಯದ ಪ್ರಯಾಣಿಕರಿಗೆ ಕಡ್ಡಾಯವಾಗಿ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇವತ್ತಿನ ಸಭೆಯಲ್ಲಿ ಆದೇಶಿಸಿದ್ದಾರೆ. ಹೊರ ರಾಜ್ಯದ ಪ್ರಯಾಣಿಕರಲ್ಲಿ ಶೇ. 2 ರಷ್ಟು ಜನರಿಗೆ ಮಾತ್ರ ಪಾಸಿಟಿವ್ ಕಂಡು ಬಂದಿದೆ. ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್ ಹಾಗೂ ಟ್ರಾಯಾಜಿನ್ ಸೆಂಟರ್ ಹೆಚ್ಚಳ ಮಾಡಲಾಗುತ್ತಿದೆ. ನಗರದಲ್ಲಿ 27 ರಿಂದ 40 ಕೋವಿಡ್ ಕೇರ್ ಸೆಂಟರ್‌ಗಳನ್ನ ತೆರೆಯುವ ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊರೋನಾ ನಿಯಂತ್ರಣದ ವಿಚಾರವಾಗಿ ನಿರಂತರವಾಗಿ ನಿಗಾ ಇಡುವ ಕೆಲಸವಾಗುತ್ತಿದೆ. ಎರಡನೇ ಅಲೆಯಲ್ಲಿ‌ ಜಾಗೃತಿ ತಪ್ಪಿ ಹೆಚ್ಚಿನ ಸಾವು ನೋವು ಆಗಿತ್ತು ಅನ್ನೋ ವರದಿ ಇತ್ತು. ಅದು ಆಗದಂತೆ ಈ ಬಾರಿ ನಿರಂತರವಾಗಿ ಜಾಗೃತಿ ವಹಿಸಲಾಗುತ್ತಿದೆ. ಎಕ್ಸ್‌ಪರ್ಟ್ ಕಮಿಟಿಯೊಂದಿಗೆ ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ದೇಶದಲ್ಲಿ ರೀಪ್ರೊಡೆಕ್ಟಿವ್ ರೇಟ್ ಹೆಚ್ಚಾಗಿದೆ. ಕರ್ನಾಟಕದಲ್ಲಿಯೂ ಹೆಚ್ಚಳ ಆಗ್ತಾ ಇದೆ ಅನ್ನೋ ರಿಪೋರ್ಟ್ ಕೂಡ ಇದೆ. ಇದು ಎರಡನೇ ಅಲೆ ಮೂರನೇ ಅಲೆ ಅಂತ ಆಲೋಚನೆ ಮಾಡುವುದಕ್ಕಿಂತ ಕೊರೊನಾ  ನಿಯಂತ್ರಣಗೊಳಿಸುವ ವಿಚಾರವಾಗಿ ಹೆಚ್ಚು ಕಾರ್ಯನಿರತರಾಗಬೇಕಿದೆ. 

ಇನ್ನು ಬೊಮ್ಮನಹಳ್ಳಿಯಲ್ಲಿ ಮತ್ತೊಂದು ಡೆಲ್ಟಾ+ ಕೇಸ್‌ ಪತ್ತೆಯಾಗಿದೆ. ಸೋಂಕಿತನ ಪ್ರಾಥಮಿಕ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್‌ಗಳಿಗೆ ಕೋವಿಡ್‌ ಟೆಸ್ಟ್ ಮಾಡಲಾಗುತ್ತಿದೆ. ಮಕ್ಕಳ ತಜ್ಞರ ಸಮಿತಿಯ ಸಲಹೆಯಂತೆ ಪದ್ಮನಾಭ ನಗರದ ಮಕ್ಕಳ ಕೋವಿಡ್ ಕೇರ್ ಸೆಂಟರ್ ರೆಡಿ‌ಮಾಡಿಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳೊಂದಿಗೆ, ಮಕ್ಕಳ ತಜ್ಞರೊಂದಿಗೆ ಬಿಬಿಎಂಪಿ ನಿರಂತರವಾಗಿ ಸಂಪರ್ಕದಲ್ಲಿ ಇದೆ ಎಂದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಅಬರು ತಿಳಿಸಿದ್ದಾರೆ. 
 

click me!