ಬೆಂಗಳೂರು ಗಲಭೆ ಪ್ರಕರಣ: ಅಮಾಯಕರನ್ನು ಬಿಡುಗಡೆ ಮಾಡಿಸಿ, ಸಿದ್ದುಗೆ ಮನವಿ

By Kannadaprabha NewsFirst Published Sep 12, 2020, 8:57 AM IST
Highlights

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ ಮುಸ್ಲಿಂ ಧಾರ್ಮಿಕ ಮುಖಂಡರ ನಿಯೋಗ| ದುಡಿಯುವ ಮಕ್ಕಳನ್ನು ಇಷ್ಟು ಸುದೀರ್ಘ ಸಮಯ ಬಂಧನದಲ್ಲಿಟ್ಟಿರುವುದರಿಂದ ಅವರ ಕುಟುಂಬದಲ್ಲಿ ತೀವ್ರ ಸಮಸ್ಯೆಗಳು ಸೃಷ್ಟಿ| 
 

ಬೆಂಗಳೂರು(ಸೆ.12): ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಅಮಾಯಕರನ್ನು ಬಿಡುಗಡೆ ಮಾಡುವಂತೆ ಸರ್ಕಾರದ ಗಮನ ಸೆಳೆಯಬೇಕು ಎಂದು ಮುಸ್ಲಿಂ ಧಾರ್ಮಿಕ ಮುಖಂಡರ ನಿಯೋಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.

ಶುಕ್ರವಾರ ಸಂಜೆ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಲ್ಲಿ ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮದ್‌ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗವು ಅಮಾಯಕರ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಕೆಜೆ, ಡಿಜೆ ಹಳ್ಳಿ ಗಲಭೆ 2 ಕೇಸ್‌ ಎನ್‌ಐಎಗೆ ವಹಿಸಲು ನಿರ್ಧಾರ

ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಕ್ಕೆ ನಮ್ಮ ಬೆಂಬಲವಿದೆ. ಆದರೆ ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಹೊರಗೆ ಬಂದವರನ್ನು ಹಾಗೂ ಅಮಾಯಕರನ್ನೂ ಸಹ ಪೊಲೀಸರು ಬಂಧಿಸಿದ್ದಾರೆ. ದುಡಿಯುವ ಮಕ್ಕಳನ್ನು ಇಷ್ಟು ಸುದೀರ್ಘ ಸಮಯ ಬಂಧನದಲ್ಲಿಟ್ಟಿರುವುದರಿಂದ ಅವರ ಕುಟುಂಬದಲ್ಲಿ ತೀವ್ರ ಸಮಸ್ಯೆಗಳು ಸೃಷ್ಟಿಯಾಗಿವೆ. ಹೀಗಾಗಿ ಸೂಕ್ತ ಪರಿಶೀಲನೆ ನಡೆಸಿ ಸಾಕ್ಷ್ಯಾಧಾರಗಳಿಲ್ಲದ ಅಮಾಯಕರನ್ನು ಬಿಡುಗಡೆ ಮಾಡಲು ಸರ್ಕಾರದ ಗಮನ ಸೆಳೆಯಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು ಎಂದು ತಿಳಿದು ಬಂದಿದೆ. ಈ ವೇಳೆ ಹೆಬ್ಬಾಳ ಶಾಸಕ ಬೈರತಿ ಸುರೇಶ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

click me!