
ವಿಧಾನ ಪರಿಷತ್ತು (ಡಿ.15): ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಲಯಗಳ ಆದೇಶ ಪಾಲಿಸುವಲ್ಲಿ ಚೂರು ವ್ಯತ್ಯಾಸವಾದರೂ ಡ್ಯಾಂಗಳ ಕೀಲಿಕೈ ರಾಜ್ಯದ ಕೈತಪ್ಪುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದಾಗ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಅದನ್ನೆಲ್ಲಾ ಬಹಿರಂಗವಾಗಿ ಹೇಳಬೇಡಪ್ಪಾ ಎಂದು ಬ್ರೇಕ್ ಹಾಕಿದ ಘಟನೆ ಮೇಲ್ಮನೆಯಲ್ಲಿ ನಡೆಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಅವರು, ರಾಜ್ಯವೇ ಸಂಕಷ್ಟದಲ್ಲಿದ್ದಾಗ ತಮಿಳುನಾಡಿಗೆ ನೀರು ಹರಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ್, ‘ಸಾಮಾನ್ಯ ಜಲ ವರ್ಷಗಳಲ್ಲಿ ತಮಿಳುನಾಡಿಗೆ ಆಗಸ್ಟ್ನಿಂದ ನವೆಂಬರ್ವರೆಗೆ 116 ಟಿಎಂಸಿ ನೀರು ಹರಿಸಬೇಕು. ಆದರೆ, ಈ ವರ್ಷ ಸಂಕಷ್ಟ ಇರುವುದರಿಂದ 57.082 ಟಿಎಂಸಿ ನೀರು ಮಾತ್ರ ಹರಿಸಿದ್ದೇವೆ.
ಕಾಂಗ್ರೆಸ್ ಔತಣ ಕೂಟಕ್ಕೆ ಬಿಜೆಪಿಗರು ಗಂಭೀರ ವಿಚಾರ: ಬಿ.ವೈ.ವಿಜಯೇಂದ್ರ
ಕೋರ್ಟ್ ಆದೇಶಗಳನ್ನೂ ಪಾಲಿಸಿ, ರೈತರಿಗೂ ಸಮಸ್ಯೆಯಾಗದಂತೆ ನೋಡಿಕೊಂಡಿದ್ದೇವೆ. ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿ ದ್ದೇವೆ. ಕೊಂಚ ವ್ಯತ್ಯಾಸವಾದರೂ ರಾಜ್ಯದ ಕೈಲಿರುವ ಡ್ಯಾಂಗಳ ಕೀಲಿ ಕೈ ಕೇಂದ್ರದ ಪಾಲಾಗಲಿದೆ’ ಎಂದರು. ಆಗ ಮಧ್ಯಪ್ರವೇಶಿಸಿದ ಸಿಎಂ, ‘ಅದನ್ನೆಲ್ಲಾ ಇಲ್ಲಿ ಬಹಿರಂಗವಾಗಿ ಹೇಳ ಬೇಡಪ್ಪಾ? ಏ ರವಿಕುಮಾರ್ ಕೆಲ ವಿಚಾರಗಳನ್ನು ಇಲ್ಲಿ ಬಹಿರಂಗವಾಗಿ ಹೇಳಲು ಆಗಲ್ಲ. ಸಚಿವರ ಕಚೇರಿಗೆ ಹೋಗಿ ತಿಳಿದುಕೊ’ ಎಂದರು.
ಸದನಕ್ಕೆ ಬಂದು ಮಾತಾಡಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸದನದ ಹೊರಗೆ ಸರ್ಕಾರದ ವಿರುದ್ಧ ಹೋರಾಟ ಮಾಡುವ ಬದಲು, ಯಾವುದಾದರೂ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ಸದನಕ್ಕೆ ಬಂದು ಮಾತನಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ 65 ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿರುವುದು ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕಾಗಿ.
ಆದರೆ ಇವರು ಸದನದಲ್ಲಿ ಚರ್ಚೆ ಮಾಡದೇ ಹೊರಗೆ ಹೋರಾಟ ಮಾಡಿದರೆ ಏನು ಪ್ರಯೋಜನ. ಯಡಿಯೂರಪ್ಪ ಅವರು ಸಹ ಯಾವುದಾದರೂ ಕ್ಷೇತ್ರ ಆಯ್ಕೆಮಾಡಿಕೊಂಡು ಸದನಕ್ಕೆ ಬಂದು ಮಾತನಾಡಲಿ. ನಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು. ಬಿಜೆಪಿಯವರ ನಡವಳಿಕೆಯಿಂದ ಅವರ ಪಕ್ಷದಲ್ಲಿ ಒಮ್ಮತವಿಲ್ಲ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಆರ್. ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷರೂ ವಿಧಾನಸಭೆಯಲ್ಲಿ ಇದ್ದಾರೆ.
ಸಿಎಂ ಸಿದ್ದರಾಮಯ್ಯ ಜಾತಿ, ಧರ್ಮ ಒಡೆಯುವುದರಲ್ಲಿ ನಿಸ್ಸಿಮ: ಕೆ.ಎಸ್.ಈಶ್ವರಪ್ಪ
ಸರ್ಕಾರ ಕೋಟ್ಯಂತರ ರು. ಖರ್ಚು ಮಾಡಿ ಸುವರ್ಣಸೌಧ ಕಟ್ಟಿಸಿರುವುದು ರಾಜ್ಯದ ಜನರ, ಉತ್ತರ ಕರ್ನಾಟಕದ ಸಮಸ್ಯೆಗಳು, ಬರ ಪರಿಸ್ಥಿತಿ ಹಾಗೂ ಸರ್ಕಾರದ ವೈಫಲ್ಯಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು ಎಂಬ ಉದ್ದೇಶದಿಂದ. ಅವರ ಆಚಾರ, ವಿಚಾರ, ಜನಪರ ಧ್ವನಿಯನ್ನು ಸದನದಲ್ಲಿ ವ್ಯಕ್ತಪಡಿಸಬೇಕು. ಅದನ್ನು ಬಿಟ್ಟು ಹೊರಗೆ ಹೊರಾಟ ಮಾಡುತ್ತೇನೆ ಎಂದರೆ ಯಾರು ಕೇಳುತ್ತಾರೆ? ಅದರಿಂದ ಏನು ಪ್ರಯೋಜನ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ