ಚಮಚಗಿರಿ ಭಾಷಣ ಮಾಡುವ ಮೂಲಕ ದಸರಾ ಪಾವಿತ್ರ್ಯತೆ ಹಾಳು ಮಾಡಿದ್ದಾರೆ: ಎಚ್.ವಿಶ್ವನಾಥ್

By Kannadaprabha NewsFirst Published Oct 5, 2024, 8:43 AM IST
Highlights

ಈ ಬಾರಿಯ ದಸರಾ ಉದ್ಘಾಟಕರಾದಿಯಾಗಿ ಎಲ್ಲರೂ ಚಮಚಗಿರಿ ಭಾಷಣ ಮಾಡುವ ಮೂಲಕ ದಸರಾ ಪಾವಿತ್ರ್ಯತೆಯನ್ನೇ ಹಾಳು ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು. 

ಮೈಸೂರು (ಅ.05): ಈ ಬಾರಿಯ ದಸರಾ ಉದ್ಘಾಟಕರಾದಿಯಾಗಿ ಎಲ್ಲರೂ ಚಮಚಗಿರಿ ಭಾಷಣ ಮಾಡುವ ಮೂಲಕ ದಸರಾ ಪಾವಿತ್ರ್ಯತೆಯನ್ನೇ ಹಾಳು ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು. ನಗರದ ಜಲದರ್ಶಿನಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಹಬ್ಬ ದಸರಾ ಉತ್ಸವಕ್ಕೆ ಒಳ್ಳೆಯ ಪರಂಪರೆ ಇದೆ. ಚಾಮುಂಡಿಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಪಾವಿತ್ರ್ಯತೆ ಇದೆ. ಆದರೆ, ಇದೆಲ್ಲವನ್ನೂ ಈ ಬಾರಿಯ ದಸರಾ ಉದ್ಘಾಟನಾ ಕಾರ್ಯಕ್ರಮ ನುಂಗು ಹಾಕಿದೆ. ಎಲ್ಲರೂ ರಾಜಕೀಯ ಭಾಷಣ ಮಾಡುವ ಮೂಲಕ ಇಡೀ ವೇದಿಕೆಯನ್ನು ರಾಜಕೀಯಮವಾಗಿಸಿ ಹೊಲಸೆಬ್ಬಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದವರು, ದಸರಾ ಹಿನ್ನೆಲೆ, ನಡೆದು ಬಂದ ದಾರಿ, ರಾಜರ ಕೊಡುಗೆಯ ಬಗ್ಗೆ ಮಾತನಾಡುವುದು ವಾಡಿಕೆ. ಆದರೆ, ಸಾಹಿತ್ಯಲೋಕದ ದಿಗ್ಗಜರಾದ ಪ್ರೊ.ಹಂ.ಪ. ನಾಗರಾಜಯ್ಯ ಅವರು, ರಾಜಕೀಯ ಮಾತನಾಡುವ ಮೂಲಕ ವೇದಿಕೆಯ ಮಹತ್ವವನ್ನು ಹಾಳುಗೆಡವಿದ್ದಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ವೇದಿಕೆಯಲ್ಲಿ ನಾನೇನು ತಪ್ಪೇ ಮಾಡಿಲ್ಲ ಎಂದು ಯಾಕೆ ಹೇಳಬೇಕು? ಆ ಮಾತುಗಳನ್ನಾಡುವ ವೇದಿಕೆಯಾ ಅದು? ಚಾಮುಂಡ್ವೇರಿ ಸೇರಿದಂತೆ ದೇವರ ಬಗ್ಗೆ ಮೂಗು ಮುರಿಯುತ್ತಿದ್ದ ನೀವು ಭಾಷಣದಲ್ಲಿ ಪದೇ ಪದೇ ಚಾಮುಂಡೇಶ್ವರಿ ಆಶೀರ್ವಾದದ ಬಗ್ಗೆ ಏಕೆ ಒತ್ತಿ ಒತ್ತಿ ಹೇಳಿದಿರಿ? ಎಂದು ಅವರು ವಂಗ್ಯವಾಡಿದರು.

Latest Videos

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಮ್ಮಂತಹವರಿಗೆ ಮಾದರಿಯಾಗಲಿ: ಸಾ.ರಾ.ಮಹೇಶ್

ಗೊಂದಲಕ್ಕೆ ಜಿ.ಟಿ. ದೇವೇಗೌಡ ಕಾರಣ: ದಸರಾ ಉದ್ಘಾಟನೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರ ರೋಷಾವೇಶದಲ್ಲಿ ಭಾಷಣ ಮಾಡಿದ್ದಾರೆ. ಯಾಕೆ ಈ ಬೂಟಾಟಿಕೆ? ನೀವೂ ಮುಡಾ ಹಗರಣದ ಫಲಾನುಭವಿಯಾ? ಇಡೀ ಕಾರ್ಯಕ್ರಮ ಗೊಂದಲಮಯವಾಗಬೇಕಾದರೆ ಅದಕ್ಕೆ ನೀವೇ ಕಾರಣ. ಇದಕ್ಕೆ ಕ್ಷಮೆಯೇ ಇಲ್ಲ. ಒಟ್ಟಾರೆ ಕಾರ್ಯಕ್ರಮ ತಮ್ಮ ಬೆನ್ನುತಟ್ಟಿಕೊಳ್ಳಲು ವೇದಿಕೆಯಾಯಿತು ಎಂದು ಅವರು ಕಿಡಿಕಾರಿದರು. ಎಲ್ಲಾ ಅಧಿಕಾರವೂ ಒಕ್ಕಲಿಗರಿಗೆ ನೀಡಿದಂತಾಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಹಿಂದುಳಿದ ವರ್ಗದ ವ್ಯಕ್ತಿಗೆ ನೀಡಿದ್ದಾರೆ. ಆ ಹುದ್ದೆ ನನಗೆ ನೀಡಿಲ್ಲ ಎಂದು ಜಿ.ಟಿ. ದೇವೇಗೌಡರು ಕೋಪ ಮಾಡಿಕೊಂಡರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ಆದೇಶ ಓದಿಲ್ಲವೇ ಸಿದ್ದರಾಮಯ್ಯ?: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಿಂತು ನಾನು ತಪ್ಪೇ ಮಾಡಿಲ್ಲ ಎಂದು ಹೇಳುವ ಸಿದ್ದರಾಮಯ್ಯ ಅವರೇ, ನೀವು ನ್ಯಾಯಮೂರ್ತಿ ನಾಗಪ್ರಸನ್ನ ಅವರ 194 ಪುಟಗಳ ಆದೇಶವನ್ನು ಓದಿಕೊಂಡಿಲ್ಲವೆ? ನಿಮ್ಮದೇನು ತಪ್ಪಿಲ್ಲದೇ ತನಿಖೆಗೆ ಆದೇಶಿಸಿದರೆ? ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಯುವುದು ಗೊತ್ತಾಗುತ್ತಿದ್ದಂತೆ ಭಾವನಾತ್ಮಕವಾಗಿ ಪತ್ರ ಬರೆದು 14 ನಿವೇಶನಗಳನ್ನು ಮುಡಾಗೆ ವಾಪಾಸ್ ನೀಡಿದ್ದೀರಿ. ನಿವೇಶನಗಳನ್ನು ವಾಪಾಸ್ ನೀಡಿದಾಕ್ಷಣ ನಿಮ್ಮ ಅಪರಾಧ ಕಡಿಮೆಯಾಗಲ್ಲ ಎಂದರು. ಮುಡಾದಲ್ಲಿ 14 ನಿವೇಶನಗಳನ್ನು ಪಡೆದಿರುವ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ್ದರು. 

ಮಹಾರಾಷ್ಟ್ರ ವಿಧಾನಸೌಧದ 3ನೇ ಮಹಡಿಯಿಂದ ಜಿಗಿದು ಉಪಸ್ಪೀಕರ್, ಸಂಸದನಿಂದ ಹೈಡ್ರಾಮಾ!

ಬಳಿಕ ಹೈಕೋರ್ಟ್ ರಾಜ್ಯಪಾಲರ ನಿರ್ಧಾರ ಸರಿ ಇದೆ ಎಂದು ಹೇಳಿತು. ಇತ್ತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತನಿಖೆಗೆ ಆದೇಶಿಸಿತು. ಇಷ್ಟೆಲ್ಲ ಆದರೂ ಮುಡಾ ಆಯುಕ್ತ 14 ನಿವೇಶನಗಳನ್ನು ವಾಪಾಸ್ ನೀಡಿದಾಕ್ಷಣ ಪಡೆದುಕೊಂಡಿದ್ದಾರೆ. ಇದು ಅಪರಾಧವಾಗಿದ್ದು, ಮೊದಲು ಆತನನ್ನು ಒದ್ದು ಒಳಗೆ ಹಾಕಬೇಕು ಎಂದು ಅವರು ಆಗ್ರಹಿಸಿದರು. ಪ್ರಕರಣ ತನಿಖೆಯ ಹಂತದಲ್ಲಿರುವಾಗ ನಿವೇಶನಗಳನ್ನು ಹಿಂಪಡೆಯಬೇಕಾದರೆ ನ್ಯಾಯಾಲಯದ ಅನುಮತಿ ಕಡ್ಡಾಯ. ಆದರೆ, ಈ ಯಾವ ನಿಯಮವನ್ನು ಇಲ್ಲಿ ಪಾಲಿಸಿಲ್ಲ. ಈ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತೇ ಕಾನೂನಾಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ ಎಂದು ಅವರು ಪ್ರಶ್ನಿಸಿದರು.

click me!