ತಾವು ತಾವೇ ಹೊಡಿದಾಡಿ ಸಾಯಲಿಕ್ಕತ್ಯಾರ ಇನ್ನ ದಲಿತರನ್ನ ಹೆಂಗ ಸಿಎಂ ಮಾಡ್ತಾರ?: ಕಾಂಗ್ರೆಸ್ ವಿರುದ್ಧ ಸಂಸದ ಜಿಗಜಿಣಗಿ ಕಿಡಿ

By Ravi JanekalFirst Published Nov 4, 2023, 4:01 PM IST
Highlights

ದಲಿತರನ್ನ ಸಿಎಂ ಮಾಡಬೇಕಾದ್ರ ವಿಶಾಲ ಮನಸ್ಸು ಬರಬೇಕಾಗ್ತದ. ಕಾಂಗ್ರೆಸ್ ನಲ್ಲಿ ಸಂಕುಚಿತ ಮನಸ್ಸಿದೆ,ಕಾಂಗ್ರೆಸ್ ನವರಿಗೆ ದೊಡ್ಡ ಮನಸ್ಸಿಲ್ಲ. ಇಷ್ಟ ವರ್ಷ ಆದ್ರೂ ಖರ್ಗೆ ಅವರನ್ನ ಯಾಕೆ ಸಿಎಂ ಮಾಡಲಿಲ್ಲ? ಖರ್ಗೆ ಪಕ್ಷಕ್ಕಾಗಿ ದುಡಿದು ಮುದುಕಾಗಿ ಸಾಯಲಿಕ್ಕೆ ಹೊಂಟದ ಆದ್ರೂ ಇನ್ನೂ ಸಿಎಂ ಮಾಡಿಲ್ಲ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆ (ನ.4): ಶಾಸಕ ಬಸನಗೌಡ ಪಾಟೀಲ್ ಮತ್ತು ನಾವು ಸರಿಯಿಲ್ಲ ಅನ್ನೋಕೆ ನಾವೇನು ಜಗಳಾಡಿದ್ದೀವಾ? ಪತ್ರಿಕೆ ಹೇಳಿಕೆ ನಾವೊಂದು ಅವರೊಂದು ಕೊಟ್ರೂ ವೈಯಕ್ತಿಕವಾಗಿ ಚಂದವಾಗಿದ್ದೇವೆ ಯತ್ನಾಳ್ ಮತ್ತು ನಮ್ಮ ಮಧ್ಯೆ ಯಾವುದೇ ವಾರ್ ಇಲ್ಲ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಸ್ಪಷ್ಟಪಡಿಸಿದರು.

ಇಂದು ಬಾಗಲಕೋಟೆ ಜಿಲ್ಲೆಯ ಅನಗವಾಡಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ನಿಮ್ಮಂತವರು(ಮಾಧ್ಯಮ) ಕೇಳೋದರಿಂದಲೇ ಪತ್ರಿಕೆ ಹೇಳಿಕೆ ಕೊಟ್ಟಿರುತ್ತೇವೆ. ಆದರೆ ನಮ್ಮಿಬ್ಬರ ಮನಸು ಒಂದೇ ಆಗಿದೆ. ನನಗೂ ಆತ ಸಹಾಯ ಮಾಡಿದ್ದಾನೆ, ನಾನೂ ಸಹ ಅವನಿಗೆ ಸಹಾಯ ಮಾಡಿದ್ದೇನೆ. ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನೀವೇ(ಮಾಧ್ಯಮದವರು) ಸುಮ್ಮನೆ ಭಿನ್ನಾಭಿಪ್ರಾಯ ಅಂತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.

 

ಕಾಂಗ್ರೆಸ್‌ನವರು ಪಾಪಿಷ್ಟರು ಇದ್ದಾರೆ, ಅವರ ಆಡಳಿತದಲ್ಲಿ ಬರಗಾಲ ಬೀಳ್ತದೆ: ಸಂಸದ ಜಿಗಜಿಣಗಿ

ಮತ್ತೆ ವಿಜಯಪುರಕ್ಕೆ ಸ್ಪರ್ಧೆ ಮಾಡುವ ವಿಚಾರದಲ್ಲಿ ಹೈಕಮಾಂಡ್ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲದೇ ಹೋದರೆ ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ಸುಮ್ಮನಿರುತ್ತೇನೆ ಎನ್ನುವ ಮೂಲಕ ರಾಜಕಾರಣದಿಂದ ದೂರ ಉಳಿಯುವ ಸುಳಿವು ನೀಡಿದರು.

 ರಾಜ್ಯ ಕಾಂಗ್ರೆಸ್ ನಿಂದ ದಲಿತ ಸಿಎಂ ಆಯ್ಕೆ ವಿಚಾರ ಪ್ರಸ್ತಾಪಿಸಿ, ಇನ್ನು ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಸಿಎಂ ಮಾಡೋದಿಲ್ಲ. ಕಾಂಗ್ರೆಸ್ ನವರು ದಲಿತರನ್ನ ಸಿಎಂ ಮಾಡ್ತಾರೆ ಅಂತಾ ನನಗೇನು ಅನಿಸ್ತಿಲ್ಲ. ರಾಜ್ಯ ಕಾಂಗ್ರೆಸ್ ನಲ್ಲಿ ತಾವು ತಾವೇ ಹೊಡಿದಾಡಿ ಸಾಯಲಿಕ್ಕತ್ಯಾರ. ದಲಿತರನ್ನ ಹೆಂಗ ಸಿಎಂ ಮಾಡ್ತಾರೆ. ದಲಿತರನ್ನ ಸಿಎಂ ಮಾಡಬೇಕಾದ್ರ ವಿಶಾಲ ಮನಸ್ಸು ಬರಬೇಕಾಗ್ತದ. ಕಾಂಗ್ರೆಸ್ ನಲ್ಲಿ ಸಂಕುಚಿತ ಮನಸ್ಸಿದೆ,ಕಾಂಗ್ರೆಸ್ ನವರಿಗೆ ದೊಡ್ಡ ಮನಸ್ಸಿಲ್ಲ. ಇಷ್ಟ ವರ್ಷ ಆದ್ರೂ ಖರ್ಗೆ ಅವರನ್ನ ಯಾಕೆ ಸಿಎಂ ಮಾಡಲಿಲ್ಲ? ಖರ್ಗೆ ಪಕ್ಷಕ್ಕಾಗಿ ದುಡಿದು ಮುದುಕಾಗಿ ಸಾಯಲಿಕ್ಕೆ ಹೊಂಟದ. ಖರ್ಗೆಯವರು ಕಾಂಗ್ರೆಸ್ ನಲ್ಲಿ ಯಾರಕಿಂತ ಕಡಿಮೆ ಇದಾರೆ ಹೇಳಪಾ? ಇವತ್ತು ಖರ್ಗೆಯವರಿಂದಲೇ ದೇಶದಲ್ಲಿ ಕಾಂಗ್ರೆಸ್ ಗೆ ನೆಲೆ ಬಂದದ. ಅಂತಹ ಖರ್ಗೆಯವರಿಗೆ ಸಿಎಂ ಸ್ಥಾನ ಕೊಟ್ಟಿಲ್ಲ ಕಾಂಗ್ರೆಸ್. ದಲಿತ ನಾಯಕರನ್ನ ಹತ್ತಿಕ್ಕುತ್ತಿರೋ ಬಗ್ಗೆ ಅನಗವಾಡಿಯಲ್ಲಿ ಸಂಸದ ರಮೇಶ್ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಜಗತ್ತೇ ಮೆಚ್ಚುವಂತಹ ನಾಯಕ: ಸಂಸದ ರಮೇಶ ಜಿಗಜಿಣಗಿ

click me!