
ಬೆಂಗಳೂರು (ಆ.10): ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಮೊದಲು ಗ್ರಾಮ ಪಂಚಾಯಿತಿಗಳಾಗಿದ್ದು, ಈಗ ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿವೆ. ಆದ್ದರಿಂದ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಪಟ್ಟಣದ ಪ್ರತಿಯೊಬ್ಬರಿಗೂ ದಿನಕ್ಕೆ 135 ಲೀಟರ್ ನೀರು ಒದಗಿಸುವ ನಿಟ್ಟಿನಲ್ಲಿ, ಈ ಹಿಂದಿನ ಯೋಜನೆಗಳನ್ನು ಪರಿಷ್ಕರಿಸಿ, ಕಾರ್ಯಗತಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರ ನಗರ ಮತ್ತು ಬಬಲೇಶ್ವರ, ತಿಕೋಟಾ ಪಟ್ಟಣಗಳ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಕುರಿತು ಗುರುವಾರ ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಬಬಲೇಶ್ವರ ಮತ್ತು ತಿಕೋಟಾಗಳಿಗೆ ಮೊದಲು ಪ್ರತೀ ವ್ಯಕ್ತಿಗೆ ದಿನಕ್ಕೆ 55 ಲೀ. ನೀರು ಒದಗಿಸುವ ಮಾನದಂಡಕ್ಕೆ ಅನುಗುಣವಾಗಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆ ಮಂಜೂರಾಗಿ, ಇದಕ್ಕೆ 82 ಕೋಟಿ ರೂ. ಒದಗಿಸಲಾಗಿತ್ತು. ಆದರೆ ಈಗ ಎರಡೂ ಊರುಗಳು ಪಟ್ಟಣ ಪಂಚಾಯಿತಿಗಳಾಗಿವೆ. ಹೀಗಾಗಿ, ನಗರ/ಪಟ್ಟಣ ಕುಡಿಯುವ ನೀರು ಪೂರೈಕೆ ಯೋಜನೆಯಂತೆ ಯೋಜನೆಗಳ ಮರುವಿನ್ಯಾಸ ಮಾಡಿ, ಇನ್ನುಮುಂದೆ 24/7 ನೀರು ಪೂರೈಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಬಿಜೆಪಿ ಮೇಲೆ ಶೇ.40 ಕಮಿಷನ್ ಆರೋಪಿಸಿದ್ದ ಕಾಂಗ್ರೆಸ್, ಈಗ ಶೇ.65 ಕಮಿಷನ್ ವಸೂಲಿ ಮಾಡ್ತಿದೆ: ಬೊಮ್ಮಾಯಿ ಆರೋಪ
ಹಾಗೆಯೇ ವಿಜಯಪುರ ನಗರಕ್ಕೆ ಕೊಲ್ಹಾರದಿಂದ ನೀರನ್ನು ಹೊತ್ತು ತರುವ 10.74 ಕಿ.ಮೀ. ಉದ್ದದ ಕಾಂಕ್ರೀಟ್ ಪೈಪುಗಳಲ್ಲಿ ಸೋರಿಕೆ ಕಂಡುಬರುತ್ತಿದೆ. ಆದ್ದರಿಂದ ಇಲ್ಲಿ ಉತ್ಕೃಷ್ಟ ದರ್ಜೆಯ ಎಂಎಸ್ ಪೈಪ್ ಹಾಕಬೇಕು. 2018ರಲ್ಲಿ ಇದಕ್ಕೆ 32 ಕೋಟಿ ರೂ. ಮಂಜೂರಾಗಿದ್ದರೂ ಟೆಂಡರ್ ರದ್ದಾಗಿತ್ತು. ಈಗ ಇದನ್ನು ಪರಿಷ್ಕರಿಸಿದ್ದು, 52 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ ಎಂದು ನಿರ್ಧರಿಸಲಾಗಿದೆ. ಈ ವಿಷಯವನ್ನು ತ್ವರಿತವಾಗಿ ಸಚಿವ ಸಂಪುಟದ ಮುಂದೆ ಮಂಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿಜಯಪುರ ನಗರ ಅಗಾಧವಾಗಿ ಬೆಳೆಯುತ್ತಿದ್ದು, 90 ಕಿ.ಮೀ. ದೂರದ ಆಲಮಟ್ಟಿ ಅಣೆಕಟ್ಟೆಯಿಂದ ನೀರು ಪೂರೈಸಲಾಗುತ್ತಿದೆ. ಇಲ್ಲಿಗೆ ಮುಂದಿನ 50 ವರ್ಷಗಳ ಅಗತ್ಯವನ್ನು ಮನಗಂಡು, ದೂರದೃಷ್ಟಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಬೇಕಾಗಿದೆ. ಇವೆಲ್ಲವನ್ನೂ ನಗರಾಭಿವೃದ್ಧಿ ಇಲಾಖೆ ಒಪ್ಪಿಕೊಂಡಿದ್ದು, ತ್ವರಿತ ಕ್ರಮ ಕೈಗೊಳ್ಳಲಿದೆ. ಇದಲ್ಲದೆ, ವಿಜಯಪುರ ನಗರದಲ್ಲಿ ಸುಗಮ ಓಡಾಟ ಮತ್ತು ಸುರಕ್ಷತೆ ಹಾಗೂ ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಎಲ್ಇಡಿ ದೀಪಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಈಸಂಬಂಧ ಟೆಂಡರ್ ಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಬೇಕು ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಗೆ 2000 ರೂ. ಸ್ಮಾರ್ಟ್ ಕಾರ್ಡ್ ವಿತರಣೆ: ಆ.27ಕ್ಕೆ ಬೆಳಗಾವಿಯಲ್ಲಿ ಚಾಲನೆ
ಒಟ್ಟಾರೆಯಾಗಿ, ಈ ಸಭೆಯಲ್ಲಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಅನೇಕ ಯೋಜನೆಗಳ ಪರಿಷ್ಕರಣೆ, ದೂರದೃಷ್ಟಿಯ ಅನುಷ್ಠಾನ ಮತ್ತು ಪರಿಣಾಮಕಾರಿ ಸೇವೆಗಳ ಒದಗಿಸುವಿಕೆ ಕುರಿತು ಅಧಿಕಾರಿಗಳೊಂದಿಗೆ ವಿಶದವಾಗಿ ಚರ್ಚಿಸಲಾಯಿತು ಎಂದು ಅವರು ನುಡಿದಿದ್ದಾರೆ. ಈ ವೇಳೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಆಯುಕ್ತ ಶರತ್, ಗ್ರಾಮೀಣ ಕುಡಿಯುವ ನೀರು ಯೋಜನೆ ಆಯುಕ್ತ ನಾಗೇಂದ್ರ ಪ್ರಸಾದ್, ಮುಖ್ಯ ಎಂಜಿನಿಯರ್ಗಳು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ