ಸ್ಕೂಟರ್ ಏರಿ ದೇಶ ಪರ್ಯಟನೆ ಮಾಡಿದ ತಾಯಿ-ಮಗ! ಮಗನಿಗೆ ಅಮ್ಮನ ಮೇಲೆ ಅದೆಂಥಾ ಪ್ರೀತಿ!

By Ravi JanekalFirst Published Nov 9, 2023, 5:23 PM IST
Highlights

ಬಾಲ್ಯದಲ್ಲಿ ಮಕ್ಕಳು ಅಮ್ಮನ ಕಣ್ಣಿನ ಮೂಲಕ ಜಗತ್ತು ನೋಡುತ್ತಾರೆ ಎಂಬ ಮಾತಿದೆ, ವೃದ್ಧಾಪ್ಯದ ನಂತರ ಮಕ್ಕಳ ಕಣ್ಣಲ್ಲಿ ಜಗತ್ತು ನೋಡುವ ಹಂಬಲ ಹೆತ್ತವರಿಗೆ ಇರುತ್ತದೆ. ಅಮ್ಮನಿಗೆ ಜಗತ್ತು ತೋರಿಸುವ ಹಠ ಹೊತ್ತ ಮಗನೊಬ್ಬ, ತಂದೆ ಕೊಡಿಸಿದ ಸ್ಕೂಟರ್ ನಲ್ಲಿ ಅಮ್ಮನನ್ನು ಕುಳ್ಳಿರಿಸಿಕೊಂಡು ದೇಶ ಸುತ್ತುತ್ತಾ ಉಡುಪಿಗೆ ಬಂದಿದ್ದಾನೆ. ಅಮ್ಮ ಮಗನ ಬಾಂಧವ್ಯದ ಅಪರೂಪದ ಸ್ಟೋರಿ ಇಲ್ಲಿದೆ.

ಉಡುಪಿ (ನ.9): ಬಾಲ್ಯದಲ್ಲಿ ಮಕ್ಕಳು ಅಮ್ಮನ ಕಣ್ಣಿನ ಮೂಲಕ ಜಗತ್ತು ನೋಡುತ್ತಾರೆ ಎಂಬ ಮಾತಿದೆ, ವೃದ್ಧಾಪ್ಯದ ನಂತರ ಮಕ್ಕಳ ಕಣ್ಣಲ್ಲಿ ಜಗತ್ತು ನೋಡುವ ಹಂಬಲ ಹೆತ್ತವರಿಗೆ ಇರುತ್ತದೆ. ಅಮ್ಮನಿಗೆ ಜಗತ್ತು ತೋರಿಸುವ ಹಠ ಹೊತ್ತ ಮಗನೊಬ್ಬ, ತಂದೆ ಕೊಡಿಸಿದ ಸ್ಕೂಟರ್ ನಲ್ಲಿ ಅಮ್ಮನನ್ನು ಕುಳ್ಳಿರಿಸಿಕೊಂಡು ದೇಶ ಸುತ್ತುತ್ತಾ ಉಡುಪಿಗೆ ಬಂದಿದ್ದಾನೆ. ಅಮ್ಮ ಮಗನ ಬಾಂಧವ್ಯದ ಅಪರೂಪದ ಸ್ಟೋರಿ ಇಲ್ಲಿದೆ.

ವೃದ್ಧಾಶ್ರಮ ಸೇರುವ ಹಿರಿಯರ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚೇಕೆ ನಮ್ಮ ಹಳ್ಳಿಗಳೇ ವೃದ್ಧಾಶ್ರಮಗಳಾಗುತ್ತಿವೆ. ಇಂತಹ ಅಮಾನವೀಯ ಕಾಲಘಟ್ಟದಲ್ಲಿ, ಈ ತಾಯಿ ಮಗನ ಬದುಕು ನಮಗೆ ಆದರ್ಶವಾಗಿ ಕಾಣುತ್ತದೆ. ಕೂಡು ಕುಟುಂಬದಲ್ಲಿ ಬೆಳೆದ ಯುವಕ ಮೈಸೂರಿನ ಡಿ ಕೃಷ್ಣಕುಮಾರ್, ತನ್ನ ತಾಯಿ ಚೂಡಾರತ್ನಮ್ಮ ಜೊತೆಗೆ ಭಾರತ ಸಂಚಾರ ಪೂರೈಸಿದ್ದಾರೆ. 

ಉಡುಪಿ: ಗೃಹಿಣಿ ಯುಪಿಎಸ್‌ಸಿ ತೇರ್ಗಡೆ, ಪುಟ್ಟ ಮಗುವಿನ ತಾಯಿಯ ದೊಡ್ಡ ಸಾಧನೆ..!

ಎರಡು ದಶಕದ ಹಿಂದೆ ತಂದೆ ತೆಗೆಸಿಕೊಟ್ಟ ಸ್ಕೂಟರ್ ನಲ್ಲಿ ಇವರ ಈ ಪ್ರವಾಸ ಪೂರ್ಣಗೊಂಡಿರುವುದು ಮತ್ತೊಂದು ವಿಶೇಷ. ಈ ಸ್ಕೂಟರ್ ನ ರೂಪದಲ್ಲಿ ತಂದೆ ಜೀವಂತ ಇದ್ದಾರೆ , ನಮ್ಮದು ಕುಟುಂಬ ಪ್ರವಾಸ ಅನ್ನುವ ಕಲ್ಪನೆಯೊಂದಿಗೆ, ಸಂಪೂರ್ಣ ದೇಶ ಮಾತ್ರವಲ್ಲದೆ ನೆರೆ ರಾಷ್ಟ್ರಗಳಿಗೂ ಈ ತಾಯಿ ಮಗ ಪ್ರವಾಸ ನಡೆಸಿದ್ದಾರೆ. 

ಮನೆ ವಾರ್ತೆಯಲ್ಲೇ ಜೀವನ ಪೂರೈಸಿದ ತಾಯಿ ಪಕ್ಕದೂರಿನ ದೇವಸ್ಥಾನವನ್ನು ಕೂಡಾ ನೋಡಿಲ್ಲ ಅನ್ನೋದು ಕೃಷ್ಣಕುಮಾರ್ ಅರಿವಿಗೆ ಬಂದಾಗ, ಅವರೊಂದು ಸಾಹಸಕ್ಕೆ ಕೈ ಹಾಕುತ್ತಾರೆ. ನಾನು ಕೆಲಸ ಮಾಡುತ್ತಿದ್ದ ಐಟಿ ಕಂಪನಿಯಲ್ಲಿ ಸ್ವಯಂ ನಿವೃತ್ತಿ ಪಡೆದು, ಅಮ್ಮನನ್ನು ಕರೆದುಕೊಂಡು ದೇಶ ಸುತ್ತಲು ಆರಂಭಿಸಿದ್ದಾರೆ. ಉತ್ತರ ಭಾರತದ ಎಲ್ಲಾ ತೀರ್ಥಕ್ಷೇತ್ರಗಳನ್ನು ಸುತ್ತುವುದರ ಜೊತೆಗೆ ದಕ್ಷಿಣ ಭಾರತದ ಪ್ರತಿಯೊಂದು ದೇವಾಲಯಗಳಿಗೂ ಭೇಟಿ ನೀಡಿದ್ದಾರೆ. 

ಎಳವೆಯಲ್ಲೇ ಆಧ್ಯಾತ್ಮದ ಒಲವು ಹೊಂದಿದ್ದ ಕೃಷ್ಣಕುಮಾರ್ ಲೌಕಿಕ ಜೀವನದಲ್ಲಿ ಯಾವುದೇ ಆಸಕ್ತಿ ಇರದ ಕಾರಣ ಪ್ರೀತಿಯನ್ನೆಲ್ಲಾ ತಾಯಿಗೆ ಮುಡಿಪಾಗಿಟ್ಟು ಅವಿವಾಹಿತರಾಗಿಯೇ ಉಳಿದಿದ್ದಾರೆ. ವಯಸ್ಸು 73 ಆದರೂ ತಾಯಿ ಚೂಡಾ ರತ್ನಮ್ಮ ಸ್ಕೂಟರ್ ನ ಹಿಂದಿನ ಸೀಟಿನಲ್ಲಿ ನವ ಯುವತಿಯಂತೆ ಉತ್ಸಾಹದಿಂದ ದೇಶವನ್ನೇ ಕಣ್ಣಿನೊಳಗೆ ತುಂಬಿಕೊಂಡಿದ್ದಾರೆ.

ಲೋಕ ಕಲ್ಯಾಣಕ್ಕಾಗಿ ಅಮೆರಿಕಾದಲ್ಲೂ ನಡೆಯಿತು ನಾಗರಾಧನೆ! 

ತಾವು ಸಂಚರಿಸಿದ ತೀರ್ಥಕ್ಷೇತ್ರಗಳಲ್ಲೇ ತಂಗುತ್ತಾರೆ. ಜನರ ಪ್ರೀತಿಗೆ ಪಾತ್ರರಾಗಿ ದೇವಾಲಯ, ಆಶ್ರಮಗಳಲ್ಲೇ ಊಟ ಮಾಡುತ್ತಾರೆ. ಹೋಟೆಲ್ ರೂಂ, ಊಟ ಅಂತ ಯಾವುದೇ ಖರ್ಚು ಮಾಡದೆ ಅತ್ಯಂತ ಸರಳವಾಗಿ ಪ್ರವಾಸ ನಡೆಸುವ ಈ ತಾಯಿ ಮಗನನ್ನು ನೋಡೋದೇ ಒಂದು ಖುಷಿ! ಸಾಧ್ಯವಾದರೆ ಪಾಶ್ಚಾತ್ಯ ಜಗತ್ತನ್ನು ಕೂಡ ಇದೇ ಸ್ಕೂಟರ್ ನಲ್ಲಿ ಸುತ್ತಬೇಕು ಅನ್ನೋದು ಇವರಿಬ್ಬರ ಆಸೆ.  ಹೆತ್ತವರನ್ನು ಮಕ್ಕಳು ಹೇಗೆ ಪ್ರೀತಿಸಬೇಕು ಅನ್ನುವ ಸಂದೇಶ ಹೊತ್ತ ರಥಯಾತ್ರೆಯಂತೆ ಇವರ ಪ್ರವಾಸ ಕಾಣುತ್ತದೆ. 

ಹಿರಿಯರನ್ನು ಮಕ್ಕಳು ಹೇಗೆ ನೋಡಿಕೊಳ್ಳಬೇಕು ಅನ್ನೋ ಆದರ್ಶದ ಮೂರ್ತ ರೂಪದಂತೆ ಇವರ ಜೋಡಿ ಜನರ ಗಮನ ಸೆಳೆಯುತ್ತಿದೆ. ಇಂಥ ಮಗನನ್ನು ಪಡೆದದ್ದೆ ಪುಣ್ಯ ಎಂದು ತಾಯಿ ಚೂಡಾ ರತ್ನಮ್ಮ ಹೆಮ್ಮೆಯಿಂದ ಮಾತನಾಡುತ್ತಾರೆ. ಹೇಳುವ ಆದರ್ಶಕ್ಕಿಂದ ಪಾಲಿಸುವ ಆದರ್ಶ ಮಾದರಿ ಎನಿಸುತ್ತದೆ ಅಲ್ಲವೇ?

click me!