
ಮೈಸೂರು(ಆ.5): ಅಲ್ಲಿ ನುಡಿನಮನವಿತ್ತು, ಭರತನಾಟ್ಯವಿತ್ತು, ನಾಟಕವಿತ್ತು, ಸಂಗೀತವಿತ್ತು, ಚಿತ್ರಗೀತೆಗಳ ಹೂರಣ ಇತ್ತು. ಅಷ್ಟೇ ಏಕೆ ಹೊರದೇಶದ ಯಾವುದೋ ಮೂಲೆಯಲ್ಲಿ ನೆಲೆಸಿರುವ ಕನ್ನಡಿಗರಿಗೆ ತಮ್ಮ ನೆಲದಲ್ಲಿ ಪ್ರತಿಭೆ ಪ್ರದರ್ಶನ ಮಾಡುತ್ತಿರುವ ಆತ್ಮವಿಶ್ವಾಸ ಇತ್ತು.
ನುಡಿನಮನ:
ಶನಿವಾರ ಮಂಡ್ಯ ರಮೇಶ್ ನೇತೃತ್ವದ ನಟನಾ ರಂಗ ಶಾಲೆಯ ಕೆಂಪು ಕಣಗಿಲು ನಾಟಕದಿಂದ ಮುಕ್ತಾಯವಾಗಿದ್ದ ಕಾರ್ಯಕ್ರಮ ಭಾನುವಾರ ಬೆಳಗ್ಗೆ ಆರಂಭವಾಯಿತು. ದಿವಂಗತ ಶಿಕಾರಿಪುರ ಹರಿಹರೇಶ್ವರ ಅವರಿಗೆ ಸಾಹಿತಿಗಳಾದ ಎಚ್.ವಿ.ನಾಗರಾಜ್ ರಾವ್, ನಾಗಲಕ್ಷ್ಮೀ ಹರಿಹರೇಶ್ವರ ನುಡಿನಮನ ಸಲ್ಲಿಸಿದರು. ಎಚ್.ವೈ.ರಾಜಗೋಪಾಲ ಅವರನ್ನು ಕುರಿತು ನೀರಜ ಅಚ್ಯತ್ ರಾವ್ ನುಡಿನಮನ ಸಲ್ಲಿಸಿದರು.
ಕಾವ್ಯ ಮೀಮಾಂಸೆ:
ಡಾ.ಟಿ.ವಿ.ವೆಂಕಾಟಚಲ ಶಾಸ್ತ್ರಿ, ಡಾ.ಎನ್.ಎಸ್.ತಾರಾನಾಥ, ಡಾ.ವಸಂತ್ ಭಾರಧ್ವಜ್, ಪ್ರೊ.ಎಚ್.ಎಸ್.ಹರಿಶಂಕರ್ ಮತ್ತು ಟೋರಾಂಟಾ ವಿಶ್ವವಿದ್ಯಾಲಯದ ಪ್ರೋಫೆಸರ್ ಸಾರಾ ಟೇಲರ್ ಅವರಿಂದ ನಡೆದ ಸಾಹಿತ್ಯಗೋಷ್ಠಿಯಲ್ಲಿ ಕನ್ನಡದ ಕಾವ್ಯ ಮತ್ತು ಗದ್ಯ ಪರಂಪರಯು ಯಾವ ಕಾಲಘಟ್ಟದಲ್ಲಿ ಹೇಗೆ ಬದಲಾಯಿತು ಎಂಬುದನ್ನು ವಿಶ್ಲೇಷಣೆ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಸೊಗಡು: ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಸೊಗಡು ತಂಡ ನಡೆಸಿಕೊಟ್ಟ ಹಾಡು ಮತ್ತು ಗದ್ಯ ಮಿಶ್ರಿತ ನೃತ್ಯ ರೂಪಕ, ಉನ್ನತಿ ಭಕ್ತರಾಮ್, ದೀಪಿಕಾ ಶ್ರೀಧರ್,ಜಾಹ್ನವಿ ಸುರೇಶ್ ಅವರಿಂದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಯುಕೆಯ ಆದ್ಯಾ ಆಚಾರ್ಯ ನೃತ್ಯ, ದುಬೈನ ಬಾಲಕ ಅಮೋಘ ವರ್ಷನ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಇಂಚರಾ ಮತ್ತು ಇಷಿಕಾ ಗಿರೀಶ್ ನೃತ್ಯ ಹೊರದೇಶದಲ್ಲಿ ನೆಲೆಸಿರುವ ಕನ್ನಡದ ಮಕ್ಕಳ ಪ್ರತಿಭೆ ಪರಿಚಯಿಸಿತು. ಮೈಸೂರಿನ ಗಾಯಕಿ ಡಾ.ಶ್ರೀದೇವಿ ಕುಳೆನೂರು ಅವರ ಗಾಯನ ಹಳೆಯ ಹಾಡುಗಳನ್ನು ಗುನುಗುವಂತೆ ಮಾಡಿತು.
ಮೈಸೂರು ಆನಂದ ಹಾಸ್ಯ:
ಎಲ್ಲದಕ್ಕಿಂತ ಮುಖ್ಯವಾಗಿ ಸಭಿಕರನ್ನು ರಂಜಿಸಿದ್ದು ಮೈಸೂರು ಆನಂದ್ ಹಾಸ್ಯ ಸಂಜೆ. ಕನ್ನಡದ ಭಾಷೆಯ ಸೊಗಡು, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುವ ಕನ್ನಡ ಇವುಗಳನ್ನು ಇಟ್ಟುಕೊಂಡು ನಡೆಸಿಕೊಟ್ಟ ಹಾಸ್ಯ ಸಂಜೆ ಎಲ್ಲರನ್ನು ರಂಜಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ