ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?

Published : Dec 05, 2025, 02:56 PM IST
Court Orders Seizure of Shivamogga DC Car Office in Farmer Compensation Case

ಸಾರಾಂಶ

1995ರಲ್ಲಿ ವಶಪಡಿಸಿಕೊಂಡ ಜಮೀನಿನ ಪರಿಹಾರ ನೀಡದ ಕಾರಣ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಕಾರನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿದೆ. ಬಾಕಿ ಮೊತ್ತ ಬಡ್ಡಿ ಸಮೇತ 95 ಲಕ್ಷ ರೂ. ತಲುಪಿದ್ದು, ನ್ಯಾಯಾಲಯದ ಆದೇಶದ ಹೊರತಾಗಿಯೂ ತಕ್ಷಣಕ್ಕೆ ಹಣ ಸಿಗದ ಕಾರಣ ರೈತ ನಂಜಪ್ಪ ಬೇಸರಗೊಂಡಿದ್ದಾರೆ.

ಶಿವಮೊಗ್ಗ (ಡಿ.5): ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಕಾರನ್ನು ಜಪ್ತಿ ಮಾಡಲು ಶಿವಮೊಗ್ಗದ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಲಯವು ಆದೇಶ ನೀಡಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಜಮೀನು ಪರಿಹಾರದ ಹಣವನ್ನು ನೀಡದ ಹಿನ್ನೆಲೆಯಲ್ಲಿ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶದ ಮೇರೆಗೆ ರೈತ ನಂಜಪ್ಪ ಕೋರ್ಟ್ ಅಮೀನ್ ಜೊತೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು.

1995 ರಿಂದ ಬಾಕಿ ಉಳಿದಿದ್ದ ಪರಿಹಾರ ಮೊತ್ತ

ಶಿವಮೊಗ್ಗ ತಾಲೂಕಿನ ಹರಮಘಟ್ಟದ ನಂಜಪ್ಪ ಎಂಬ ರೈತನ ಜಮೀನನ್ನು 1995ರಲ್ಲಿ ಸರ್ಕಾರ ವಶಪಡಿಸಿಕೊಂಡಿತ್ತು. ಆ ಸಂದರ್ಭದಲ್ಲಿ ರೈತನಿಗೆ 22 ಲಕ್ಷ ರೂ. ಪರಿಹಾರ ನೀಡಬೇಕಿತ್ತು. ಆದರೆ, ಕೇವಲ 9 ಲಕ್ಷ ರೂ.ಗಳನ್ನು ಮಾತ್ರ ನೀಡಿ, ಉಳಿದ 13 ಲಕ್ಷ ರೂ.ಗಳನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಇದರಿಂದಾಗಿ, ಪರಿಹಾರಕ್ಕಾಗಿ ರೈತ ನಂಜಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಸ್ತುತ 95 ಲಕ್ಷ ರೂ. ಬಾಕಿ

ನ್ಯಾಯಾಲಯದ ಇಂದಿನ ಆದೇಶದ ಪ್ರಕಾರ, ರೈತ ನಂಜಪ್ಪ ಅವರಿಗೆ ಬಾಕಿ ಇರುವ ಪರಿಹಾರದ ಮೊತ್ತವು ಪ್ರಸ್ತುತ 95 ಲಕ್ಷದ 88,283 ರೂ. ಗಳಿಗೆ ತಲುಪಿದೆ. ಈ ಬೃಹತ್ ಮೊತ್ತವನ್ನು ನೀಡದ ಕಾರಣ, ಬಾಕಿ ಹಣದ ವಸೂಲಿಗಾಗಿ ಜಿಲ್ಲಾಧಿಕಾರಿಗಳ ಕಾರು ಮತ್ತು ಕಚೇರಿಯನ್ನು ಜಪ್ತಿ ಮಾಡಿ, ಹರಾಜು ಹಾಕುವಂತೆ ನ್ಯಾಯಾಲಯ ತೀರ್ಪು ನೀಡಿದೆ.

ಪರಿಹಾರದ ನಿರೀಕ್ಷೆಯಲ್ಲಿದ್ದ ರೈತನಿಗೆ ಬೇಸರ

ನ್ಯಾಯಾಲಯದ ಆದೇಶದ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದ ರೈತ ನಂಜಪ್ಪ ಅವರಿಗೆ, ಜಿಲ್ಲಾಧಿಕಾರಿಗಳು 'ಕಾರ್ ಬೇಕಿದ್ದರೆ ತೆಗೆದುಕೊಂಡು ಹೋಗಿ' ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ತಕ್ಷಣಕ್ಕೆ ಪರಿಹಾರದ ಹಣದ ನಿರೀಕ್ಷೆಯಲ್ಲಿದ್ದ ರೈತನಿಗೆ, ಕೇವಲ ಕಾರು ಜಪ್ತಿ ಮಾಡಿ ಹರಾಜು ಹಾಕಿ, ಉಳಿದ ಪರಿಹಾರಕ್ಕಾಗಿ ಮತ್ತೆ ಕಾನೂನು ಹೋರಾಟ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಪರಿಹಾರದ ನಿರೀಕ್ಷೆಯಲ್ಲಿದ್ದ ರೈತನಿಗೆ ಬೇಸರ ತರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!