
ದಾವಣಗೆರೆ (ಆ.7) : ನಗರದಲ್ಲಿ ಭಾನುವಾರ ನಡೆದ ‘ಗೃಹಜ್ಯೋತಿ’ ಕಾರ್ಯಕ್ರಮದಲ್ಲಿ ‘ಪ್ರಧಾನಿ ಮೋದಿ ಕೇಳಿ 10 ಕೆಜಿ ಅಕ್ಕಿ ಘೋಷಣೆ ಮಾಡಿದ್ದೀರಾ?’ ಎಂಬುದಾಗಿ ಹರಿಹರ ಶಾಸಕ ಬಿ.ಪಿ.ಹರೀಶ ಆಡಿದ ಮಾತು, ಗದ್ದಲಕ್ಕೆ ಕಾರಣವಾಯಿತು.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ‘ಗೃಹಜ್ಯೋತಿ’ ಯೋಜನೆಗೆ ಚಾಲನೆ ನೀಡುವ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಯಕೊಂಡ ಕಾಂಗ್ರೆಸ್ ಶಾಸಕ ಕೆ.ಎಸ್.ಬಸವಂತಪ್ಪ, ‘ಅನ್ನಭಾಗ್ಯ’ಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ ಎಂದು ಆರೋಪಿಸಿದರು. ಬಳಿಕ ಮಾತನಾಡಿದ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ, ‘ಪ್ರಧಾನಿ ಮೋದಿಯವರನ್ನು ಕೇಳಿ 10 ಕೆಜಿ ಅಕ್ಕಿ ಘೋಷಣೆ ಮಾಡಿದ್ದೀರಾ?. ಈಗ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸುವುದು ಎಷ್ಟುಸರಿ?’ ಎಂದು ಪ್ರಶ್ನಿಸಿದರು.
Davanagere: ರೈತನ ಮೇಲಿನ ದ್ವೇಷಕ್ಕೆ 780 ಅಡಿಕೆ ಗಿಡ ಕತ್ತರಿಸಿದ ದುಷ್ಕರ್ಮಿಗಳು
ಶಾಸಕರ ಮಾತಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರೊಚ್ಚಿಗೆದ್ದು ಗಲಾಟೆ, ಗದ್ದಲ ಶುರು ಮಾಡಿದರು. ಇದರಿಂದಾಗಿ ಸಭಾಂಗಣದಲ್ಲಿ ಸುಮಾರು ಹೊತ್ತು ಗದ್ದಲ ಏರ್ಪಟ್ಟಿತು. ಇದರಿಂದ ಕೋಪಗೊಂಡ ಶಾಸಕ ಹರೀಶ, ಭಾಷಣ ನಿಲ್ಲಿಸಿದರು. ಈ ವೇಳೆ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಧ್ಯಪ್ರವೇಶಿಸಿ, ಶಾಸಕರಿಗೆ ಮಾತು ಮುಂದುವರಿಸಲು ಮನವಿ ಮಾಡಿದರು. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಮುಂದುವರಿಸಿದಾಗ ಆಕ್ರೋಶಗೊಂಡ ಹರೀಶ, ‘ಗಂಡಸ್ತನ ಇದ್ದಿದ್ದರಿಂದಲೇ ಹರಿಹರ ಕ್ಷೇತ್ರದಲ್ಲಿ 8 ಸಲ ಸ್ಪರ್ಧಿಸಿದ್ದೇನೆ. ನೀವು ಅಡ್ಡಿಪಡಿಸುವುದನ್ನು ನಿಲ್ಲಿಸುವವರೆಗೂ ನಾನು ಈ ಜಾಗ ಬಿಟ್ಟು ಕದಲಲ್ಲ’ ಎಂಬುದಾಗಿ ಪಟ್ಟು ಹಿಡಿದರು.
ಸಿದ್ದರಾಮೋತ್ಸವಕ್ಕೆ ಒಂದು ವರ್ಷ.. ಸಿದ್ದು ಚರಿಷ್ಮಾವನ್ನೇ ಬದಲಿಸಿದ್ದು ಹೇಗೆ "ದಾವಣಗೆರೆ" ಸಮಾವೇಶ..?
ಈ ವೇಳೆ ಮತ್ತೊಮ್ಮೆ ಸಚಿವರು ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ನಂತರ, ಮಾತು ಮುಂದುವರಿಸಿದ ಶಾಸಕರು, ಯೋಜನೆ ಯಶಸ್ವಿಯಾಗಲಿ. ನಾನೊಬ್ಬ ಜವಾಬ್ಧಾರಿಯುತ ವಿಪಕ್ಷ ಸದಸ್ಯನಾಗಿ ಮಾತನಾಡಿದ್ದೇನೆ ಎನ್ನುತ್ತಾ ಮಾತು ಮುಗಿಸಿದರು. ನಂತರ, ಮಾತನಾಡಿದ ಸಚಿವರು, ಹರೀಶ್ ಅವರು ನನ್ನ ಹಳೆಯ ಮಿತ್ರರು. ಅವರು ಯಾವಾಗ ಕಾಂಗ್ರೆಸ್ಸಿಗೆ ಬರುತ್ತಾರೋ ನೋಡೋಣ ಎನ್ನುವ ಮೂಲಕ ಸಭಾಂಗಣದಲ್ಲಿ ನಗು ಮೂಡಿಸಲು ಯತ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ