ಕ್ರೆಡಿಟ್‌ ಪಡೆಯಲು ಕಾಂಗ್ರೆಸ್‌ ಸಂಸದರು, ಬಿಜೆಪಿ ಮಂತ್ರಿಗಳ ಜಿದ್ದು,ಕಲಬುರಗಿ- ಬೆಂಗಳೂರು ವಂದೇ ಭಾರತ್ ರದ್ದು!

By Gowthami KFirst Published Jul 27, 2024, 5:00 PM IST
Highlights

ಕಲಬುರಗಿ- ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ, ಮಹತ್ವಾಕಾಂಕ್ಷಿ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು (22232/22231) ಜು. 27 ರಿಂದ ಪ್ರತಿದಿನ ಯಾದಗಿರಿ ನಿಲ್ದಾಣದಲ್ಲಿ ನಿಲ್ಲುತ್ತದೆ ಎಂಬ ನಾಗರಿಕರ ಕನಸು ಮತ್ತೆ ಕಮರಿದೆ.

ಯಾದಗಿರಿ (ಜು.27): ಕಲಬುರಗಿ- ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ, ಮಹತ್ವಾಕಾಂಕ್ಷಿ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು (22232/22231) ಜು. 27 ರಿಂದ ಪ್ರತಿದಿನ ಯಾದಗಿರಿ ನಿಲ್ದಾಣದಲ್ಲಿ ನಿಲ್ಲುತ್ತದೆ ಎಂಬ ನಾಗರಿಕರ ಆಶಾಗೋಪುರ ಮತ್ತೇ ಕುಸಿದಿದೆ. ಈ ಹಿಂದಿನಂತೆ, ಈ ಬಾರಿಯೂ ಇಲಾಖೆ ರೈಲು ಬದಲು ರೀಲು ಬಿಟ್ಟಂತಿದೆ.

ಶನಿವಾರದಿಂದ (ಜು.27) ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್‌ ನಿಲುಗಡೆ ಆಗಲಿದೆ ಎಂಬ ಆದೇಶ ಮತ್ತೇ ರದ್ದಾಗಿದೆ. ಶುಕ್ರವಾರ ಸಂಜೆ ಹೊರಬಿದ್ದ ದಕ್ಷಿಣ ಮಧ್ಯೆ ರೈಲ್ವೆಯ ಪ್ರಕಟಣೆಯು ಜನರ ನಿರೀಕ್ಷೆಯ ಜೊತೆ ಚೆಲ್ಲಾಟವಾಡುತ್ತಿರುವಂತಿದೆ. ಈ ಹಿಂದೆ, ಎರಡು ಬಾರಿ ನಿಲ್ಲುವ/ನಿಲ್ಲದಿರುವ ಇಂತಹುದ್ದೇ ಮಾತುಗಳು ಇಲ್ಲಿನವರ ಅಪಾರ ನಿರೀಕ್ಷೆಗಳ ಹುಸಿಯಾಗಿಸಿದ್ದವು.

Latest Videos

ಮಣ್ಣು ಕುಸಿತದಿಂದ ಬೆಂಗಳೂರು-ಮಂಗಳೂರು ಟ್ರೈನ್ ಸಂಚಾರ ಬಂದ್‌, ಪರ್ಯಾಯ ರೈಲು ಮಾರ್ಗ ಸೂಚಿಸಿದ ಇಲಾಖೆ

ಶನಿವಾರ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಲು ರಾಯಚೂರು ಸಂಸದ ಜಿ.ಕುಮಾರ ನಾಯಕ್‌ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ದರ್ಶನಾಪುರ ಸಹ ಆಗಮಿಸಲಿದ್ದಾರೆ ಎಂಬುದಾಗಿ ಹೇಳಲಾಗಿತ್ತು. ಆದರೆ, ರೈಲು ನಿಲುಗಡೆ ರದ್ದಾಗಿರುವುದು ಅಚ್ಚರಿ ಮೂಡಿಸಿದೆ.-ಚುನಾವಣೆ ವೇಳೆ ವಂದೇ ಭಾರತ್‌ ಪ್ರಚಾರ "ಪ್ರಿಯ " :

ಕಲ್ಯಾಣ ಕರ್ನಾಟಕ ಭಾಗದ ಬೇಡಿಕೆಯಾಗಿದ್ದ ಮಹತ್ವಾಕಾಂಕ್ಷಿ ಈ ರೈಲು ಇದೇ ಮಾ.12 ರಿಂದ ಕಲಬುರಗಿಯಿಂದ ಚಾಲನೆ ನೀಡಲಾಗಿತ್ತು. ಆಗ, ಲೋಕಸಭಾ ಚುನಾವಣೆಯ ಪರ್ವಕಾಲ. ಗುಂತಕಲ್‌ ರೈಲ್ವೆ ವಿಭಾಗದಲ್ಲಿ ತಿರುಪತಿ ನಂತರ ಹೆಚ್ಚಿನ ಧನಸಂಗ್ರಹದ ಹಾಗೂ ಸಂಚಾರದಟ್ಟಣೆಯಲ್ಲಿ ಖ್ಯಾತಿಪಡೆದಿರುವ ಯಾದಗಿರಿ ನಿಲ್ದಾಣದಲ್ಲಿ ಮಹತ್ವಾಕಾಂಕ್ಷಿ ವಂದೇ ಭಾರತ್ ರೈಲು ನಿಲ್ಲುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಅನೇಕರು ಹೋರಾಟಕ್ಕೆ ಧುಮುಕಿದ್ದರು. ರೈಲು ತಡೆಯತ್ನ ಪ್ರತಿಭಟನೆಯನ್ನೂ ನಡೆಸಿದ್ದರು.

ಅಮೃತ್‌ ಭಾರತ್‌ ಯೋಜನೆಯಡಿ ರಾಜ್ಯದ 59 ರೈಲು ನಿಲ್ದಾಣಗಳು ಮೇಲ್ದರ್ಜೆಗೆ, 7559 ಕೋಟಿ ರೂ ಮೀಸಲು

ಚುನಾವಣೆ ವೇಳೆ ಮತ್ಯಾಕೆ "ರಿಸ್ಕ್‌ " ಎಂಬಂತೆ, ಆಗ ಕಲಬುರಗಿ ಮತ್ತು ರಾಯಚೂರು ಕ್ಷೇತ್ರಗಳ ಸಂಸದರು ಹಾಗೂ ಅಭ್ಯರ್ಥಿಗಳೂ ಆಗಿದ್ದ ಡಾ.ಉಮೇಶ್‌ ಜಾಧವ್‌ ಮತ್ತು ರಾಜಾ ಅಮರೇಶ್ವರ ನಾಯಕ್‌ ರೈಲು ನಿಲ್ಲಲಿದೆ ಎಂಬುದಾಗಿ ಹೇಳಿಕೆಗಳ ನೀಡಿ ಜನಾಕ್ರೋಶಕ್ಕೆ ತೇಪೆ ಹಚ್ಚುವ ಪ್ರಯತ್ನ ನಡೆಸಿದ್ದರಾದರೂ ರೈಲು ನಿಂತಿರಲೇ ಇಲ್ಲ. ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದಿದ್ದರು. ಈಗ ಮತ್ತೆ, ಜು.20ರಿಂದ ವಂದೇ ಭಾರತ್‌ ನಿಲುಗಡೆಯಾಗಲಿದೆ ಎಂಬುದಾಗಿ ಇಲಾಖೆ ಹೊರಡಿಸಿದ್ದ ಆದೇಶ ಕೆಲವೇ ನಿಮಿಷಗಳಲ್ಲಿ ರದ್ದಾಗಿ, ವಾಪಸ್‌ ಪಡೆಯಲಾಗಿತ್ತು. ರೈಲು ಇಲಾಖೆಯ ಇಬ್ಬಗೆ ನೀತಿಯಿಂದಾಗಿ ಆಕ್ರೋಶಗೊಂಡ ಭೀಮುನಾಯಕ್‌ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ, ಜು.22 ರಂದು ರೈಲು ರೋಕೋಗೆ ಮುಂದಾಗಿತ್ತು. ಇದನ್ನರಿತ ಇಲಾಖೆಯ ಅಧಿಕಾರಿಗಳು ಹೋರಾಟಗಾರರ ಜೊತೆ ಸಂಧಾನ ನಡೆಸಿ, ಪ್ರತಿಭಟನೆ ಕೈಬಿಡುವಂತೆ ಮನವೊಲೈಸಿದ್ದರು.

ಈ ನಂತರ, ಜು.27ಕ್ಕೆ ವಂದೇ ಭಾರತ್‌ ನಿಲುಗಡೆ ಬಗ್ಗೆ ಇಲಾಖೆ ಆದೇಶ ಹೊರಡಿಸಿದಾಗ, ಈಗ ಪಕ್ಕಾ ಎಂದರಿತಿದ್ದ ಯಾದಗಿರಿಗರ ಕನಸು ಮತ್ತೇ ನುಚ್ಚು ನೂರಾಗಿದೆ. ತಾಂತ್ರಿಕ ಕಾರಣಗಳಿಂದ ಇದು ಮುಂದೂಡಲಾಗಿದೆ ಎಂದು ಶುಕ್ರವಾರ ಸಂಜೆ ಮರು ಆದೇಶ ಹೊರಡಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. 

ರೈಲು ಮಂತ್ರಿಗಾಗಿ ಕಾಯುವಿಕೆ: ವಂದೇ ಭಾರತ್‌ ನಿಲುಗಡೆ ಈ ಭಾಗದಲ್ಲಿ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದೆ. ರಾಯಚೂರು ಹಾಗೂ ಕಲಬುರಗಿ ಸಂಸದರು ಕಾಂಗ್ರೆಸ್ಸಿಗರು. ಕೇಂದ್ರ ಸರ್ಕಾರ್‌ ಎನ್‌ಡಿಎ ನೇತೃತ್ವದ್ದು. ರೈಲು ನಿಲುಗಡೆ ಕೋರಿ ನಮ್ಮ ಮನವಿಗೆ ಸ್ಪಂದಿಸಿದ ಇಲಾಖೆಗೆ ಧನ್ಯವಾದಗಳು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂಸದರ - ಕಾಂಗ್ರೆಸ್ಸಿಗರ ಸಂದೇಶಗಳು ಹರಿದಾಡುತ್ತಿವೆ. 

ನಮ್ಮ ಸಾಧನೆಗೆ ಕಾಂಗ್ರೆಸ್ಸಿಗರೇಕೇ ಎಂದು, ರೈಲು ಮಂತ್ರಿ ಸೋಮಣ್ಣರನ್ನೇ ಕರೆಸಿದರೆ ಸೂಕ್ತ ಅನ್ನೋದು ಬಿಜೆಪಿ ವಲಯದಲ್ಲಿನ ಜಿದ್ದು. "ಕ್ರೆಡಿಟ್‌ "ಗಾಗಿ ಕೈ, ಕಮಲ ಪಕ್ಷದ ಮುಸುಕಿನ ಗುದ್ದಾಟ ವಂದೇ ಭಾರತ್‌ಗೆ ಅಡ್ಡಿಯಾಗುತ್ತಿದೆ ಅನ್ನೋದು ಸಾರ್ವಜನಿಕ ವಲಯದಲ್ಲಿನ ಮಾತುಗಳು. 

click me!