'ಬಾಂಗ್ಲಾ ವಲಸಿಗರ ಹೊರಗೆ ಹಾಕ್ತೀವಿ ಅನ್ನೋದು ಸರಿಯಲ್ಲ'

By Suvarna NewsFirst Published Jan 13, 2020, 8:17 AM IST
Highlights

ಬಾಂಗ್ಲಾ ವಲಸಿಗರ ಹೊರಗೆ ಹಾಕ್ತೀವಿ ಅನ್ನೋದು ಸರಿಯಲ್ಲ| ಡಿಸಿಎಂ ಅಶ್ವತ್ಥ್ ಹೇಳಿಕೆ ಭೀತಿ ಹುಟ್ಟಿಸುವಂತಿದೆ: ಖಂಡ್ರೆ

ಬೀದರ್‌[ಜ.13]: ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರ ಹಾಕುತ್ತೇವೆ ಎಂಬ ಉಪಮುಖ್ಯಮಂತ್ರಿ ಅಶ್ವತ್‌್ಥ ನಾರಾಯಣ ಹೇಳಿಕೆ ಸರಿಯಲ್ಲ. ಅವರ ಹೇಳಿಕೆ ಜನರಲ್ಲಿ ಭೀತಿ ಹುಟ್ಟಿಸುವಂತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದೇ ದಾಖಲೆಗಳಿಲ್ಲದೇ ರಾಜ್ಯದಲ್ಲಿ ವಾಸಿಸುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಮುಲಾಜಿಲ್ಲದೇ ದೇಶದಿಂದ ಹೊರಹಾಕಲಾಗುವುದು ಎಂಬ ಡಿಸಿಎಂ ಹೇಳಿಕೆಗೆ ಬೀದರ್‌ನಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿರುವ 3 ಲಕ್ಷ ಬಾಂಗ್ಲಾ ವಲಸಿಗರನ್ನು ಗಡೀಪಾರು ಮಾಡುತ್ತೇವೆಂಬ ಅಸಂಬದ್ಧ ಹೇಳಿಕೆ ಸರಿಯಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ದೇಶದಲ್ಲಿ ಆತಂಕ ಸೃಷ್ಟಿಸಲಿದೆ. ಸ್ವಾಮಿ ವಿವೇಕಾನಂದರ ತತ್ವ ಪಾಲಿಸುವ ಮೂಲಕ ಎಲ್ಲರನ್ನು ನಮ್ಮವರೆನ್ನೋಣ ಎಂದರು.

ತನಿಖೆ ನಡೆಸಲಿ:

ಮಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋ ತುಣುಕುಗಳು ಸುಳ್ಳು ಎಂದೆನಿಸಿದರೆ ಅದನ್ನು ತನಿಖೆಗೆ ಒಳಪಡಿಸಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿಗಳು ಏನೇನೋ ಹೇಳ್ತಿದ್ದಾರೆ. ಅದು ಕಟ್‌ ಅಂಡ್‌ ಪೇಸ್ಟ್‌ ಅಂತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡಬಾರದು ಎಂದು ಹೇಳಿದರು.

ಅಕ್ರಮ ಬಾಂಗ್ಲಾ ವಲಸಿಗರು ಮುಲಾಜಿಲ್ಲದೆ ಹೊರಕ್ಕೆ: ಡಿಸಿಎಂ

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಲಿಂಗಾಯತ ಅಭ್ಯರ್ಥಿ ಆಯ್ಕೆ ವಿಚಾರ, ಹೈಕಮಾಂಡ್‌ಗೆ ಬಿಟ್ಟದ್ದು. ಹೈಕಮಾಂಡ್‌ ಎಲ್ಲವನ್ನೂ ಅರಿತಿದೆ. ಅದು ಸೂಕ್ತ ಕ್ರಮ ಕೈಗೊಳ್ಳುತ್ತದೆ. ಹೈಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಹೇಳಿದರು.

ರಾಜ್ಯದ ಪೊಲೀಸರು ಒಳ್ಳೆಯವರೇ, ಅವರೂ ನಮ್ಮವರೇ. ಆದರೆ ಅಲ್ಲಿ ಆಗಿರುವ ಲೋಪವನ್ನು ಕ್ಷಮಿಸಲಾರದು. ಅದಕ್ಕಾಗಿ ನ್ಯಾಯಾಂಗ ತನಿಖೆಯ ಅಗತ್ಯವಿದೆ. ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ. ಗಲಭೆ ಕುರಿತಂತೆ ಒಬ್ಬ ಮಾಜಿ ಸಿಎಂ ವಿಡಿಯೋ ಸಾಕ್ಷ್ಯಸಹಿತ ಗಂಭೀರವಾಗಿ ಜನರ ಮುಂದೆ ಬಂದಿದ್ದಾರೆ. ಮುಖ್ಯಮಂತ್ರಿಯಂತಹ ಉನ್ನತ ಸ್ಥಾನದಲ್ಲಿರುವವರು ಮನಬಂದಂತೆ ಮಾತನಾಡಬಾರದು. ಫಾರೆನ್ಸಿಕ್‌ ಲ್ಯಾಬ್‌ಗೆ ಕಳುಹಿಸಿ ಅದರ ಸತ್ಯಾಸತ್ಯತೆ ಜನರ ಮುಂದಿಡಲು ಮುಖ್ಯಮಂತ್ರಿಗಳು ಮುಂದಾಗಲಿ ಎಂದು ಆಗ್ರಹಿಸಿದರು.

click me!