
ಬೆಂಗಳೂರು (ಜು.13): ‘ಪಿಎಸ್ಐ ನೇಮಕಾತಿ ಹಗರಣದ ಸಂಬಂಧ ಮಂಗಳವಾರ ಬಂಧನವಾಗಿರುವ ಗಣಪತಿ ಭಟ್ಗೂ ಗೃಹ ಸಚಿವರ ಕಚೇರಿಗೂ ಏನು ಸಂಬಂಧ ಎಂಬುದು ಬಹಿರಂಗಗೊಳ್ಳಬೇಕು. ಗೃಹ ಸಚಿವರ ಪಾಲುದಾರಿಕೆ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು’ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಮಂಗಳವಾರ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ನಾನು ಮೊದಲೇ ಹೇಳಿದ್ದೇನೆ. ಪಿಎಸ್ಐ ಹಗರಣದ ಸೂತ್ರಧಾರಿಗಳೇ ಬೇರೆ ಇದ್ದಾರೆ. ಆದರೆ ತನಿಖೆ ಪಾತ್ರಧಾರಿಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಪಿಎಸ್ಐ ಹಗರಣ ಸಂಬಂಧ ಸಿಐಡಿ ಬಂಧಿಸಿದ ಗಣಪತಿ ಭಟ್ಗೂ ಗೃಹ ಸಚಿವರ ಕಚೇರಿಗೂ ಏನು ಸಂಬಂಧ ಆರಗ ಜ್ಞಾನೇಂದ್ರ ಅವರೇ? ಗೃಹ ಸಚಿವರ ಕಚೇರಿಗೆ ಆರೋಪಿ ಗಣಪತಿ ಭಟ್ ಬರುತ್ತಿದ್ದದ್ದು ನಿಜವೇ?’ ಎಂದು ಪ್ರಶ್ನಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕನ ಪುತ್ರನ ಹೆಸರು..!
ಸಿಸಿಟೀವಿ ಬಹಿರಂಗ ಮಾಡ್ತೀರಾ?: ‘ಪಿಎಸ್ಐ ನೇಮಕಾತಿ ಹಗರಣ ನಡೆಯುತ್ತಿದ್ದ ದಿನಗಳ ಗೃಹ ಸಚಿವರ ಕಚೇರಿ, ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಗೃಹ ಸಚಿವರು ಬಹಿರಂಗ ಮಾಡುತ್ತಾರೆಯೇ? ಜನರಿಗೆ ವದಂತಿಗಳಿಂದ ಮುಕ್ತಿ ಕೊಟ್ಟು ಪಾರದರ್ಶಕವಾಗಿರಬೇಕಾದದ್ದು ಗೃಹ ಸಚಿವರ ಕರ್ತವ್ಯ. ಹೀಗಾಗಿ ಗೃಹ ಸಚಿವರ ಕಚೇರಿ ಪಾಲುದಾರಿಕೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ. ಇಲ್ಲದಿದ್ದರೆ ಪಿಎಸ್ಐ ಹಗರಣಕ್ಕೆ ಮುಕ್ತಿ ಇಲ್ಲ’ ಎಂದು ಹೇಳಿದ್ದಾರೆ.
ಎಸ್ಐ ಅಕ್ರಮದಲ್ಲಿ ಭಾಗಿಯಾದ ಡಿವೈಎಸ್ಪಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದಲ್ಲಿ 29ನೇ ಆರೋಪಿಯಾಗಿ ಜೈಲು ಸೇರಿರುವ ಕೆಎಸ್ಆರ್ಪಿ 6ನೇ ಬೆಟಾಲಿಯನ್ ಸಹಾಯಕ ಕಮಾಂಡೆಂಟ್, ಡಿವೈಎಸ್ಪಿ ವೈಜನಾಥ ರೇವೂರ್, ಬಿಟ್ಟಿಕಟ್ಟಡ ಸಾಮಗ್ರಿಗಾಗಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದರು ಎಂಬ ಸ್ವಾರಸ್ಯಕರ ಸಂಗತಿ ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿರುವ ಸಿಐಡಿ ತಂಡ ತನ್ನ ವರದಿಯಲ್ಲಿ ಈ ಸಂಗತಿಯನ್ನು ಪ್ರಧಾನವಾಗಿ ಉಲ್ಲೇಖಿಸಿದೆ. ಡಿವೈಎಸ್ಪಿ ವೈಜನಾಥ ರೇವೂರ್ ಇಲ್ಲಿನ ರಿಂಗ್ ರಸ್ತೆಯಲ್ಲಿ ಮನೆ ನಿಮಾಣಕ್ಕೆ ಮುಂದಾಗಿದ್ದರು.
PSI Scam: ನಾನು ತಪ್ಪು ಮಾಡಿಲ್ಲವೆಂದೇ ಅಮೃತ್ ಪಾಲ್ ವಾದ, ಸ್ನೇಹಿತನ ಮನೆಗೆ ಸಿಐಡಿ ದಾಳಿ
ಮನೆ ಕಟ್ಟಲು ಬೇಕಾದ ಮರಳು, ಇಟ್ಟಿಗೆ, ಕಬ್ಬಿಣ ಪಡೆಯಲು ಇವರಿಗೆ ಹಗರಣದ ಕಿಂಗ್ಪಿನ್ ರುದ್ರಗೌಡ ಪಾಟೀಲ್ ನೆರವಾಗಿದ್ದ. ಇವನ್ನೆಲ್ಲಾ ಸಂಪೂರ್ಣ ಉಚಿತವಾಗಿ ಒದಗಿಸುವುದಾಗಿ ಹೇಳಿ ಅದರಂತೆಯೇ ನಿಭಾಯಿಸಿದ್ದನೆಂಬ ಸಂಗತಿ ವರದಿಯಲ್ಲಿ ನಮೂದಾಗಿದೆ. ಕಟ್ಟಡ ನಿರ್ಮಾಣ ಸಾಮಗ್ರಿ ಉಚಿತವಾಗಿ ಪಡೆದುದಕ್ಕೆ ಪ್ರತಿಯಾಗಿ ಡಿವೈಎಸ್ಪಿ ವೈಜನಾಥ ರೇವೂರ್ ಪಿಎಸ್ಐ ಪರೀಕ್ಷೆಯಲ್ಲಿ ರುದ್ರಗೌಡನ ಅಕ್ರಮಕ್ಕೆ ನೇರವಾಗಿದ್ದನೆಂಬ ಸಂಗತಿಯೂ ವರದಿಯಲ್ಲಿ ನಮೂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ