ಮೇ 19 ರಿಂದ ಸರ್ವರ್ ಬಂದ್, 10 ಕೆ. ಜಿ ಫ್ರೀ ಅಕ್ಕಿ ಕೊಡುವುದಕ್ಕೆ ಬಿತ್ತಾ ಕತ್ತರಿ?

By Suvarna NewsFirst Published May 24, 2023, 9:22 PM IST
Highlights

ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಪ್ರತೀ ಬಿಪಿಎಲ್ ಕುಟುಂಬಗಳಿಗೆ ತಲಾ 10 ಕೆ.ಜಿ. ಅಕ್ಕಿ ವಿತರಣೆ ಮಾಡುವುದಾಗಿ ಭರವಸೆ ನೀಡಿತ್ತು. ಇದೀಗ  ಮೇ 19 ರಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ್ದ ಅವಕಾಶವನ್ನು ಸರ್ಕಾರ ಬಂದ್ ಮಾಡಿದೆ.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮೇ.24): ಚುನಾವಣೆ ಗೆಲ್ಲುವುದಕ್ಕಾಗಿ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡಿದ್ದು ಗೊತ್ತೇ ಇದೆ. ಅದರಲ್ಲಿ ಪ್ರತೀ ಬಿಪಿಎಲ್ ಕುಟುಂಬಗಳಿಗೆ ತಲಾ 10 ಕೆ.ಜಿ. ಅಕ್ಕಿ ವಿತರಣೆ ಮಾಡುವುದಾಗಿ ಭರವಸೆ ನೀಡಿತ್ತು. ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದೇ ತಡ, ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಜನರು ಮುಗಿ ಬೀಳಲು ಆರಂಭಿಸಿದ್ದರು. ಆದರೆ ಅದೇಕೋ ಸರ್ಕಾರ ಈಗ ಇದ್ದಕ್ಕಿದ್ದಂತೆ ಮೇ 19 ರಿಂದ ರೇಷನ್ ತಿದ್ದುಪಡಿಗೆ ನೀಡಿದ್ದ ಅವಕಾಶವನ್ನು ಬಂದ್ ಮಾಡಿದೆ. ಇದು ಕಾಂಗ್ರೆಸ್ ತಾನು ನೀಡಿದ್ದ ಗ್ಯಾರೆಂಟಿ ಕಾರ್ಡ್ನಲ್ಲಿ 10 ಉಚಿತ ಅಕ್ಕಿ ನೀಡುವುದಾಗಿ ಹೇಳಿದ್ದ ಭರವಸೆ ಸುಳ್ಳಾಗುತ್ತಾ ಎನ್ನುವ ಅನುಮಾನ ಮೂಡಿಸಿದೆ.

ಮೇ 19 ರವೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಇದರಿಂದ ತಮ್ಮ ಮನೆಯ ಸದಸ್ಯರ ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆಗೊಳಿಸಲು, ಹೆಸರುಗಳು ಅಥವಾ ವಿಳಾಸ ತಪ್ಪಾಗಿದ್ದರೆ ಅದನ್ನು ತಿದ್ದುಪಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಇದರಿಂದ ತಮ್ಮ ಮನೆಯ ಉಳಿದ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಿ ಎಲ್ಲರಿಗೂ ಹತ್ತು ಕೆಜಿ ಅಕ್ಕಿಯನ್ನು ಪಡೆಯುವ ಎನ್ನುವ ಉತ್ಸಾಹದಲ್ಲಿ ಇದ್ದರು. ಕಾಂಗ್ರೆಸ್ ಗೆಲ್ಲುತ್ತಿದ್ದಂತೆ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಇದ್ದ ಸರ್ವರ್ ಅನ್ನೇ ಬಂದ್ ಮಾಡಲಾಗಿದೆ. ಇದು ತಿದ್ದುಪಡಿ ಮಾಡಿಕೊಳ್ಳುವ ತವಕದಲ್ಲಿದ್ದ ಜನರಿಗೆ ಬ್ರೇಕ್ ಹಾಕಿದಂತೆ ಆಗಿದೆ.

ಇದುವರೆಗೆ ಕಾರ್ಡ್ ತಿದ್ದುಪಡಿಗೆ ಅವಕಾಶ ಇದ್ದ ಹಿನ್ನೆಲೆಯಲ್ಲಿ ಜನರು ಸೈಬರ್ ಕೇಂದ್ರ, ನಾಡಕಚೇರಿ, ತಾಲ್ಲೂಕು ಕಚೇರಿಗಳ ಮುಂದೆ ಸರದಿಯಲ್ಲಿ ನಿಂತು ತಿದ್ದುಪಡಿಗೆ ಅರ್ಜಿ ಸಲ್ಲಿಸುತ್ತಿದ್ದರು. ಇದೀಗ ಇದ್ದಕ್ಕಿದ್ದಂತೆ ಸರ್ವರ್ ಬಂದ್ ಆಗಿರುವುದರಿಂದ ಗ್ರಾಮೀಣ ಪ್ರದೇಶಗಳಿಂದ ಬರುವ ಜನರು ನಾಡಕಚೇರಿ, ತಾಲ್ಲೂಕು ಕಚೇರಿಗಳ ಮುಂದೆ ಕಾದು ಸುಸ್ತಾಗಿ ವಾಪಸ್ ಹೋಗುವಂತೆ ಆಗಿದೆ. ಜೊತೆಗೆ ತಮ್ಮ ಕುಟುಂಬದ ಎಷ್ಟು ಜನರಿಗೆ ಅಕ್ಕಿ ಕೊಡ್ತೀರಾ ಎಂದು ನ್ಯಾಯಬೆಲೆ ಅಂಗಡಿಗಳಿಗೆ ಎಡತಾಕುತ್ತಿದ್ದಾರೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಇದುವರಗೆ ಸರ್ವರ್ ತೆರೆದಿತ್ತು. ಯಾವುದೇ ಸಮಸ್ಯೆ ಇಲ್ಲದೆ ತಿದ್ದುಪಡಿ ಮಾಡುತ್ತಿದ್ದೆವು. ಆದರೆ ಈಗ ಅಕ್ಕಿ ವಿತರಣೆ ಮಾಡಬೇಕಾಗಿರುವುದರಿಂದ ಸರ್ವರ್ ಮುಚ್ಚಲಾಗಿದೆ. ಸರ್ಕಾರ ಯಾವಾಗ ಸರ್ವರ್ ತೆರೆದು ತಿದ್ದುಪಡಿಗೆ ಅವಕಾಶ ನೀಡಲಾಗುತ್ತದೆಯೋ ಆ ನಾವು ಎಂದಿನಂತೆ ತಿದ್ದುಪಡಿ ಮಾಡುತ್ತೇವೆ ಎನ್ನುತ್ತಿದ್ದಾರೆ.

ವಿಧಾನಸಭೆ ಚುನಾವಣೆ ವೇಳೆ ಚಿಕ್ಕಮಗಳೂರಿನಲ್ಲಿ ಶತಕೋಟಿ ದಾಟಿದ ಮದ್ಯ ಮಾರಾಟ!

ಇದು ಒಂದೆಡೆಯಾದರೆ ಮತ್ತೊಂದೆಡೆ ತಿದ್ದುಪಡಿಗೆ ಅವಕಾಶ ನೀಡದ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇವರನ್ನು ನಂಬಿ ನಾವು ಕೆಟ್ಟು ಹೋದೆವೇ ಎಂಬ ಅನುಮಾನ ಮೂಡುತ್ತಿದೆ. 10 ಕೆ.ಜಿ ಉಚಿತ ಅಕ್ಕಿ ಕೊಡುತ್ತೇವೆ ಎಂದಿದ್ದವರು. ಈಗ ಕಾರ್ಡುಗಳ ತಿದ್ದುಪಡಿಗೆ ಅವಕಾಶ ನೀಡದೆ ತೊಂದರೆ ನೀಡುತ್ತಿದ್ದಾರೆ. ಇದರಿಂದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ತಿಂಗಳು ಪಡಿತರವನ್ನು ಪಡೆಯಲಾಗದ ಸಮಸ್ಯೆ ಅನುಭವಿಸುವಂತೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ದಾವಣಗೆರೆ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಹಂದಿಗಳ ಹಾವಳಿಯೇ ಕಪ್ಪು ಚುಕ್ಕೆ!

ಕೂಡಲೇ ಸರ್ಕಾರ ಸರ್ವರ್ ತೆರೆದು ಕಾರ್ಡು ತಿದ್ದುಪಡಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಏನೇ ಆಗಲಿ, 10 ಕೆ.ಜಿ. ವರೆಗೆ ಅಕ್ಕಿ ಕೊಡುತ್ತೇವೆ ಎಂದಿದ್ದ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ನಾಟಕವಾಡಲು ಶುರು ಮಾಡುತ್ತಿದೆಯಾ ಎಂದು ಜನರು ಗೇಲಿ ಮಾಡುವಂತೆ ಆಗಿದೆ.

click me!