ಹರಿಹರ ಪೀಠದಲ್ಲಿ ಭುಗಿಲೆದ್ದ ಸಂಘರ್ಷ: ಪಂಚಮಸಾಲಿ ಪೀಠದ ವಚನಾನಂದ ಶ್ರೀ ಪದಚ್ಯುತಿ, ಟ್ರಸ್ಟ್ ನಿರ್ಣಯಕ್ಕೆ ಕಾರಣವೇನು?

Kannadaprabha News   | Kannada Prabha
Published : Apr 14, 2026, 04:45 AM IST
Conflict Erupts at Harihara Peetha Vachananda Swamiji Removed as Head of Panchamasali Peetha

ಸಾರಾಂಶ

ಹರಿಹರ ಪಂಚಮಸಾಲಿ ಪೀಠದಲ್ಲಿ ವಚನಾನಂದ ಶ್ರೀಗಳು ಮತ್ತು ಟ್ರಸ್ಟ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಶ್ರೀಗಳ ವರ್ತನೆ ಸರಿಯಿಲ್ಲ ಎಂದು ಆರೋಪಿಸಿ ಟ್ರಸ್ಟ್ ಅವರನ್ನು ಪದಚ್ಯುತಿಗೊಳಿಸಲು ನಿರ್ಣಯಿಸಿದ್ದು, ಇದಕ್ಕೆ ಪ್ರತಿಯಾಗಿ ಶ್ರೀಗಳು ಟ್ರಸ್ಟ್‌ನ ಲೆಕ್ಕಪತ್ರದ ಬಗ್ಗೆ ಪ್ರಶ್ನಿಸಿದ್ದಾರೆ. 

 ದಾವಣಗೆರೆ (ಏ.14): ಹರಿಹರ ಪಂಚಮಸಾಲಿ ಪೀಠದಲ್ಲಿ ಶ್ರೀಗಳು ಹಾಗೂ ಟ್ರಸ್ಟ್‌ ನಡುವಿನ ಗುದ್ದಾಟ ಸೋಮವಾರ ಸ್ಫೋಟಗೊಂಡಿದೆ. ‘ಪೀಠದ ಸ್ವಾಮಿಗಳಾದ ವಚನಾನಂದ ಶ್ರೀಗಳ ವರ್ತನೆ ಸರಿಯಿಲ್ಲ.ಅವರು ಎರಡೆರಡು (ಶ್ವಾಸಪೀಠ ಹಾಗೂ ಪಂಚಮಸಾಲಿ ಪೀಠ) ಪೀಠಗಳ ಮುಖ್ಯಸ್ಥರಾಗಿದ್ದು, ಶ್ವಾಸಪೀಠ ತೊರೆಯುತ್ತಿಲ್ಲ’ ಎಂಬ ಆರೋಪ ಹೊರಿಸಿರುವ ಪಂಚಮಸಾಲಿ ಟ್ರಸ್ಟ್‌, ಶ್ರೀಗಳ ಪದಚ್ಯುತಿ ನಿರ್ಣಯ ಕೈಗೊಂಡಿದೆ.

ಇತ್ತೀಚೆಗೆ ಇನ್ನೊಂದು ಪಂಚಮಸಾಲಿ ಪೀಠವಾದ ಕೂಡಲಸಂಗಮ ಮಠದಿಂದ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಹರಿಹರ ಪೀಠದಲ್ಲೂ ಇಂಥದ್ದೇ ವಿದ್ಯಮಾನ ನಡೆದಿದ್ದು, ಎರಡೂ ಪಂಚಮಸಾಲಿ ಪೀಠಗಳು ಖಾಲಿ ಉಳಿದಂತಾಗಿದೆ.

ಇದರಿಂದಾಗಿ ಮಠದ ಸುತ್ತ ಭಕ್ತರು ಹಾಗೂ ವಿರೋಧಿಗಳ ನಡುವೆ ತಳ್ಳಾಟ-ನೂಕಾಟ ನಡೆದಿದೆ. ಪೊಲೀಸರ ಜತೆಗೆ ವಚನಾನಂದ ಶ್ರೀಗಳೂ ತಳ್ಳಾಟ-ನೂಕಾಟ ನಡೆಸಿದ್ದಾರೆ. ಹೀಗಾಗಿ ಹಲವರನ್ನು ವಶಕ್ಕೆ ಪಡೆದು ಪೊಲೀಸರು ನಿಷೇಧಾಜ್ಞೆ ಹೇರಿದ್ದಾರೆ.

ಆದರೆ ತಮಗೆ ನೋಟಿಸ್‌ ನೀಡದೆ ಟ್ರಸ್ಟ್‌ ಕೈಗೊಂಡ ನಿರ್ಣಯ ಊರ್ಜಿತವಲ್ಲ ಎಂದು ವಚನಾನಂದ ಶ್ರೀ ವಾದಿಸಿದ್ದಾರೆ. ಇನ್ನು ಶ್ರೀಗಳ ಬೆಂಬಲಿಗರು ಸಭೆ ನಡೆಸಿ ‘ಟ್ರಸ್ಟ್‌ನ ಲೆಕ್ಕಪತ್ರದ ವಿವರ ಕೇಳಿದ್ದಕ್ಕೆ ಈ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ದೂರಿದ್ದಾರೆ. ಇದನ್ನು ತಳ್ಳಿಹಾಕಿರುವ ಮಠದ ಟ್ರಸ್ಟಿಗಳು ಶ್ರೀಗಳ ವರ್ತನೆ ಸರಿಯಿಲ್ಲ ಎಂದು ಆರೋಪಿಸಿ ವಜಾ ನಿರ್ಣಯ ಸಮರ್ಥಿಸಿದ್ದಾರೆ.

ವಚನಾನಂದ ಶ್ರೀ ಪದಚ್ಯುತಿ, ನಡೆದಿದ್ದೇನು:

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಪೀಠದಲ್ಲಿ ಕೆಲ ದಿನಗಳ ಹಿಂದೆ ಪೀಠಾಧ್ಯಕ್ಷ ವಚನಾನಂದ ಶ್ರೀಗಳ ಬೆಂಗಳೂರಿನ ಶ್ವಾಸಗುರು ಪೀಠವನ್ನು ತೊರೆಯಬೇಕು ಎಂದು ಹರಿಹರ ಪೀಠದ ಟ್ರಸ್ಟ್‌ ತಿಳಿಸಿತ್ತು. ಇದಕ್ಕೆ ಸ್ವಾಮೀಜಿ ಸ್ಪಂದಿಸಿರಲಿಲ್ಲ.

ಹೀಗಾಗಿ ಸೋಮವಾರ ಮಠಕ್ಕೆ ಬಂದ 13 ಟ್ರಸ್ಟಿಗಳು, ಸಭಾಂಗಣದಲ್ಲಿ ಸುಮಾರು 3 ಗಂಟೆ ಕಾಲ ಸುಧೀರ್ಘ ಚರ್ಚೆ ನಡೆಸಿದರು ಹಾಗೂ ಸ್ವಾಮೀಜಿ ನಡವಳಿಕೆಯು ಪೀಠದ ಹಿತಾಸಕ್ತಿಗೆ ಕಾಪಾಡುವುದರ ವಿರುದ್ಧವಾಗಿದೆ ಎಂದು ಆರೋಪಿಸಿ, ಸ್ವಾಮೀಜಿ ಉಚ್ಚಾಟಿಸಲು ನಿರ್ಧಾರ ಕೈಗೊಂಡರು. ಈ ವೇಳೆ, 15 ಟ್ರಸ್ಟಿಗಳ ಪೈಕಿ ಸಭೆಯಲ್ಲಿದ್ದ 13 ಟ್ರಸ್ಟಿಗಳು ಇದ್ದರು. ಬಳಿಕ ವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಿ ಮಾಡಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಈ ನಡುವೆ, ಅಲ್ಲಿಗೆ ಬಂದ ಸ್ವಾಮೀಜಿ ಮಠದ ಒಳಗೆ ಹೋಗಲು ಯತ್ನಿಸಿದರು. ಇದಕ್ಕೆ ಪೊಲೀಸರು ಅವಕಾಶ ನೀಡದಿದ್ದಾಗ ಸ್ವಾಮೀಜಿ ವಾಗ್ವಾದ ಮಾಡಿದರು. ಪೊಲೀಸರು ಮತ್ತು ಸ್ವಾಮೀಜಿ ಪರಸ್ಪರ ನೂಕಾಟ, ತಳ್ಳಾಟ ನಡೆಯಿತು. ತಳ್ಳಾಟದಲ್ಲಿ ಪರಸ್ಪರರಿಗೆ ಸಣ್ಣದಾಗಿ ತರಚು ಗಾಯಗಳಾದವು.

ವಚನಾನಂದ ಶ್ರೀ ಪದಚ್ಯುತಿಗೆ ಆಕ್ರೋಶ:

ಸ್ವಾಮೀಜಿ ಪದಚ್ಯುತಿಗೆ ಆಕ್ರೋಶಗೊಂಡ ಮಠದ ಭಕ್ತರಾದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್‌ ಸೇರಿ ಇತರ ಮುಖಂಡರು. ಪಂಚಮಸಾಲಿಗಳು ಮಠದ ಮುಖ್ಯಗೇಟ್ ಬಳಿ ಜಮಾಯಿಸಿದರು. ಆಗ ಸ್ಥಿತಿ ಕೈಮೀರುವುದನ್ನು ತಪ್ಪಿಸಲು ಪೊಲೀಸರು ಮಾಜಿ ಶಾಸಕರು ಸೇರಿ ಸಮಾಜದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ತಹಸೀಲ್ದಾರ್‌ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮಠದ ಸುತ್ತ ನಿಷೇಧಾಜ್ಞೆ ಜಾರಿಗೆ ತಂದರು.

ಟ್ರಸ್ಟ್‌ ನಿರ್ಣಯಕ್ಕೆ ವಿರೋಧ- ಸಮರ್ಥನೆ:

ಸಂಜೆ ಮಠದಲ್ಲಿ ಸಭೆ ನಡೆಸಿದ ವಚನಾನಂದ ಶ್ರೀಗಳ ಬೆಂಬಲಿಗರು, ಭಕ್ತರು, ಟ್ರಸ್ಟಿಗಳ ನಿರ್ಧಾರವನ್ನು ಖಂಡಿಸಿ, ಸ್ವಾಮೀಜಿ ಮುಂದುರಿಯುತ್ತಾರೆ ಎಂದು ಸಮಾಜದ ನಿರ್ಣಯವನ್ನು ಮಂಡಿಸಿದರು. ಈ ವೇಳೆ ಮಾತನಾಡಿದ ವಚನಾನಂದಶ್ರೀ, ‘ಟ್ರಸ್ಟಿಗಳು ಮಠದ ಲೆಕ್ಕವನ್ನೇ ಕೊಟ್ಟಿಲ್ಲ’ ಎಂದು ದೂರಿದರು.

ಭಾರೀ ಹೈಡ್ರಾಮಾ ನಡೆದು ಪೊಲೀಸ್‌ ಭದ್ರತೆ ಮಧ್ಯೆ ಟ್ರಸ್ಟಿಗಳು ದಾವಣಗೆರೆ ಚೇತನ ಹೋಟೆಲ್‌ಗೆ ಬಂದು ಸಂಜೆ ಪತ್ರಿಕಾ ಗೋಷ್ಠಿ ನಡೆಸಿ, ಟ್ರಸ್ಟಿಗಳ ಕ್ರಮವನ್ನು ಸಮರ್ಥಿಸಿಕೊಂಡರು. ಮತ್ತೊಂದು ಕಡೆ ಸ್ವಾಮೀಜಿ ಸಮಾಜದ ಮುಖಂಡರು, ಸಮಾಜ ಬಾಂಧವರ ಸಭೆ ಮಾಡಿದರು. ಸೋಮವಾರ ರಾತ್ರಿ ಸಹ ಎರಡೂ ಕಡೆಯವರ ಪ್ರತ್ಯೇಕ ಸಭೆಗಳು ಮುಂದುವರಿದಿದ್ದವು.

ಮೇಕಪ್‌ ಮಾಡಿಕೊಂಡು ಬರ್ತಾರೆ

ಹರಿಹರ ಪೀಠಕ್ಕೆ 2018ರಲ್ಲಿ ವಚನಾನಂದ ಸ್ವಾಮೀಜಿಯವರು ದಿಂಗಾಲೇಶ್ವರ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಬಂದರು. ದಿಂಗಾಲೇಶ್ವರರ ಸಮ್ಮುಖದಲ್ಲೇ ನಾವು ಸ್ಪಷ್ಟವಾಗಿ ಹೇಳಿದ್ದೆವು. ನಮ್ಮ ಪೀಠದಲ್ಲಿ ನಿಬಂಧನೆಗಳು, ಬೈಲಾ ಇದೆ. ಸರಿಯಾಗಿ ಓದಿಕೊಳ್ಳಿ. ಟ್ರಸ್ಟ್‌ ತೀರ್ಮಾನಕ್ಕೆ ವಿರುದ್ಧವಾಗಿದ್ದರೆ, ನಡೆ-ನುಡಿಯಲ್ಲಿ ವ್ಯತ್ಯಾಸವಾದರೆ ಪೀಠದಿಂದ ನಿಮ್ಮನ್ನು ತೆಗೆಯಲು ಅವಕಾಶ ಇದೆ ಎಂದಿದ್ದೆವು. ಎಲ್ಲಾ ನಿಬಂಧನೆಗಳನ್ನು ಒಪ್ಪಿಕೊಂಡಿದ್ದಾಗಿ ಹೇಳಿ ಬಂದರು. ಜಟ ತೆಗೆಯಲು ನಾವು ಹೇಳಿದ್ದೆವು. ಆದರೆ, ಸ್ವಾಮೀಜಿ ಬ್ಯೂಟಿ ಪಾರ್ಲರ್‌ಗೆ ಹೋಗಿ ಮೇಕಪ್ ಮಾಡಿಕೊಂಡು ಬರುತ್ತಿದ್ದಾರೆ.

- ಬಾವಿ ಬೆಟ್ಟಪ್ಪ, ಧರ್ಮದರ್ಶಿ, ಹರಿಹರ ಪಂಚಮಸಾಲಿ ಪೀಠ.

-ಶ್ರೀಗಳ ವಿರೋಧಿಗಳ ಆರೋಪ

- ಸ್ವಾಮೀಜಿ ನಡೆ, ನುಡಿಗಳಿಂದ ಸಮಾಜದ ಗೌರವಕ್ಕೆ ಧಕ್ಕೆ ಆಗುತ್ತಿದೆ

- ಆಚಾರ-ವಿಚಾರ, ನಡೆ-ನುಡಿ ಪೀಠದ ಪಾವಿತ್ರ್ಯತೆಗೆ ಹೊಂದಿಕೆ ಆಗ್ತಿಲ್ಲ

- ಶ್ವಾಸ ಪೀಠ ಬಿಟ್ಟು ಪಂಚಮಸಾಲಿ ಪೀಠ ಆಯ್ಕೆ ಮಾಡಿಕೊಳ್ಳಿ ಎಂದಿದ್ದೆವು- ನಡವಳಿಕೆಯಲ್ಲಿ ದೋಷಗಳ ಬಗ್ಗೆ ಹಿಂದಿನ ಅನೇಕ ಸಭೆಗಳಲ್ಲಿ ತಿಳಿಸಿದ್ದೆವು

- ಆದರೂ ತಪ್ಪು ತಿದ್ದಿಕೊಳ್ಳದೆ ವೈಯಕ್ತಿಕ ಐಷಾರಾಮಿ ಜೀವನಕ್ಕೆ ಆದ್ಯತೆ

- ಸ್ವಾಮೀಜಿ ಬ್ಯೂಟಿ ಪಾರ್ಲರ್‌ಗೆ ಹೋಗಿ ಮೇಕಪ್ ಮಾಡಿಕೊಳ್ಳುತ್ತಾರೆ

- ಸಮಾಜದ ಹಣ ಸಮಾಜದ ಅಭಿವೃದ್ಧಿಗೆ ಬಳಸದೇ, ಗೌಪ್ಯ ವ್ಯವಹಾರ-

ವಚನಾನಂದಶ್ರೀ ಸಮರ್ಥನೆ

- ಲೆಕ್ಕ ಕೊಡದ ಪಂಚಮಸಾಲಿ ಟ್ರಸ್ಟ್ ಸದಸ್ಯರಿಂದ ಸಮಾಜಕ್ಕೆ ಮೋಸ

- ಟ್ರಸ್ಟ್‌ನಲ್ಲಿ ಅವ್ಯವಹಾರ ಆಗಿತ್ತು. ಈ ಬಗ್ಗೆ ತನಿಖೆಗೆ ಸಮಿತಿ ರಚನೆ ಆಗಿತ್ತು

- 5 ವರ್ಷಕ್ಕೊಮ್ಮೆ ಟ್ರಸ್ಟ್‌ನ 4ನೇ 1 ಭಾಗದಷ್ಟು ಸದಸ್ಯರ ನೇಮಕ ಆಗಿಲ್ಲ

- ಹಣ ದುರ್ಬಳಕೆ ಜೊತೆಗೆ ಸದಸ್ಯರಿಂದ ಟ್ರಸ್ಟ್ ಬೈಲಾ ಸ್ಪಷ್ಟ ಉಲ್ಲಂಘನೆ

- ಟ್ರಸ್ಟ್‌ ಬೈಲಾ ಪ್ರಕಾರ ಪಂಚಮಸಾಲಿ ಸಮಾಜದ ಗಣ್ಯರ ತೀರ್ಮಾನ ಅಂತಿಮ

- ಶ್ರೀಗಳಿಗೆ ಟ್ರಸ್ಟ್‌ ಗೌರವ ನೀಡದ ಟ್ರಸ್ಟ್‌ನ ಧರ್ಮದರ್ಶಿಯನ್ನೇ ವಜಾ ಮಾಡಿದ್ದೇವೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದ ಜೈಲು ಕಾಯಲು ಮಾಜಿ ಸೈನಿಕರ ನೇಮಕ; 550 ಮಾಜಿ ಯೋಧರ ನೇಮಕಕ್ಕೆ ಸರ್ಕಾರ ಓಕೆ, ಜೈಲಿನಲ್ಲಿ ರಾಜಾತಿಥ್ಯ ವಿವಾದ ಬೆನ್ನಲ್ಲೇ ಮಹತತ್ವದ ನಿರ್ಧಾರ!
ವಿದ್ಯಾರ್ಥಿಗಳ ಕನಸಿಗೆ ಫೀಸು ಕಂಟಕ, ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ.7.5ರಷ್ಟು ಹೆಚ್ಚಳ!