ಬಲಪ್ರಯೋಗ ಮಾಡದಂತೆ ಪೊಲೀಸರಿಗೆ ಖಡಕ್ ಸೂಚನೆ

By Suvarna NewsFirst Published May 10, 2021, 7:25 PM IST
Highlights

* ಪೊಲೀಸರಿಗೆ ಮಹತ್ವದ ಸೂಚನೆ ಕೊಟ್ಟ  ಬೆಂಗಳೂರು ನಗರ  ಕಮಿಷನರ್ ಕಮಲ್ ಪಂತ್
* ಲಾಕ್ ಡೌನ್ ವೇಳೆ ಸಾರ್ವಜನಿಕರ ಮೇಲೆ ಬಲಪ್ರಯೋಗ ಮಾಡದಂತೆ ಕಮಿಷನರ್ ಸೂಚನೆ 
* ವರದಿ ಬಳಿಕ‌ ಎಚ್ಚೆತ್ತು ಲಾಠಿ ಉಪಯೋಗಿಸದಂತೆ ಟ್ಟೀಟ್ ಮಾಡಿದ ಕಮಲ್ ಪಂತ್

ಬೆಂಗಳೂರು, (ಮೇ.10): ರಾಜ್ಯದಲ್ಲಿ ಕೊರೋನಾ ತಡೆಗಟ್ಟಲು ಇಂದಿನಿಂದ (ಸೋಮವಾರ) ಲಾಕ್‌ಡೌನ್ ಜಾರಿಯಾಗಿದ್ದು, ಈ ವೇಳೆ ಪೊಲೀಸರು ರಸ್ತೆಯಲ್ಲಿ ಹೋಗುವ ಎಲ್ಲರನ್ನೂ ತಡೆದು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ. 

ಕೆಲವರಂತೂ ಮಾನವೀಯತೆ, ಕರುಣೆ ಇಲ್ಲದೇ ಕಟುಕರ ರೀತಿಯಲ್ಲಿ ಮನಸೋಇಚ್ಛೆಯಿಂದ ಲಾಠಿ, ಪೈಪ್ ತೆಗೆದುಕೊಂಡು ಹೊಡೆಯುತ್ತಿದ್ದಾರೆ. ಜನ ಎಷ್ಟು ಪರಿ-ಪರಿಯಾಗಿ ಬೇಡಿಕೊಂಡರೂ ಸಹ ಪೊಲೀಸರೂ ಮಾತ್ರ ಹೊಡೆಯುವದನ್ನು ಬಿಡಲ್ಲ. ಈ ರೀತಿ ಘಟನೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಕ್ಯಾರಕರಿಸಿ ಉಗಿಯುತ್ತಿದ್ದಾರೆ.

ಸುಮ್ಮನೆ ಹೊರ ಬಂದರೆ ಹುಷಾರ್‌: ವಾಹನದಲ್ಲಿ ಹೋಗುವಂತಿಲ್ಲ, ನಡೆದೇ ಹೋಗಬೇಕು!
 
ಅಲ್ಲದೇ ಪೊಲೀಸರ ಈ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಲಾಠಿಯಿಂದ ಹೊಡೆಯಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಸಾರ್ವಜನಿಕರು ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಮಾತ್ರ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಬೇರೆ ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು' ಎಂದು ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಒಂದು ವೇಳೆ ಸಾರ್ವಜನಿಕರು ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಮಾತ್ರ ಕಾನೂನಿನ ಅಡಿಯಲ್ಲಿ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಹೊರತು ಬೇರೆ ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಕೊರೊನ ಹರಡುವುದನ್ನು ತಡೆಯಲು ದಯವಿಟ್ಟು ಸಹಕರಿಸಿ.
(1/2)

— Kamal Pant, IPS (@CPBlr)

ಲಾಕ್‌ಡೌನ್ ಜಾರಿಯಾಗಿರುವ ಸಮಯದಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಒಪ್ಪಿಗೆ ನೀಡಲಾದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಥವಾ ಕೆಲಸದ ಸ್ಥಳಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಾದಲ್ಲಿ ಡಿಸಿಪಿ (ಗುಪ್ತದಳ) ಸಂತೋಷ್ ಬಾಬು ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 080-22942354' ಎಂದೂ ಅವರು ಹೇಳಿದ್ದಾರೆ.

ಸಾರ್ವಜನಿಕರು ಆದಷ್ಟು ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಕೊರೊನಾ ಹರಡುವುದನ್ನು ತಡೆಯಲು ದಯವಿಟ್ಟು ಸಹಕರಿಸಿ ಎಂದು ಕಮಲ್ ಪಂತ್ ಮನವಿ ಮಾಡಿಕೊಂಡಿದ್ದಾರೆ.

click me!