ಸಿಎಂ ಸಿದ್ದರಾಮಯ್ಯ ಕೆಳಗಿಳಿಸಲು ಮುಡಾ ಹಗರಣ ದಾಖಲೆ ಹೊರತೆಗೆದ ಡಿಕೆಶಿ: ಜನಾರ್ಧನ ರೆಡ್ಡಿ!

By Sathish Kumar KHFirst Published Oct 15, 2024, 7:05 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸುವ ಉದ್ದೇಶದಿಂದಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಮುಡಾ ಹಗರಣದ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಶಾಸಕ ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ. 

ಬಳ್ಳಾರಿ (ಅ.15): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಖುರ್ಚಿಯಿಂದ ಕೆಳಗಿಳಿಸಬೇಕು ಎನ್ನುವ ಪ್ರಯತ್ನದಿಂದಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ದಾಖಲೆಗಳನ್ನು ಹೊರಗೆ ತೆಗೆದಿದ್ದಾರೆ. ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಪ್ರಯತ್ನವನ್ನೇ ಮಾಡಿಲ್ಲ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ. 

ಬಳ್ಳಾರಿಯಲ್ಲಿ ನಡೆದ ಕುರುಬರ ಸಭೆಯಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ಇಳಿಸಲು ಕಾಂಗ್ರೆಸ್ ನವರೇ ಪ್ರಯತ್ನ ಮಾಡ್ತಿದ್ದಾರೆ. ಬಿಜೆಪಿಯವರು ಯಾರೂ ಅವರನ್ನು ಇಳಿಸೋದಕ್ಕೆ ಪ್ರಯತ್ನ ಮಾಡಿಲ್ಲ. ಮುಡಾ ಹಗರಣ ದಾಖಲೆಗಳನ್ನು ಡಿಕೆಶಿ ಅವರೇ ತೆಗೆದಿದ್ದಾರೆ. ಅಧಿಕಾರದಲ್ಲಿ ಇದ್ದವರೇ ಆ ರೀತಿ ದಾಖಲೆ ತೆಗೆಯಲು ಸಾಧ್ಯ. ವಿರೋಧ ಪಕ್ಷದವರು ಹೊರಗೆ ತೆಗೆಯಲು ಸಾಧ್ಯವಿಲ್ಲ. ಡಿಕೆಶಿ ಪ್ರಯತ್ನದಿಂದಲೇ ಮುಡಾ ಹಗರಣ ಹೊರಗೆ ಬಂದಿದೆ ಎನ್ನುವದು ಮೈಸೂರಿನ ಪ್ರತಿ ಮನೆ ಮನೆಯವರಿಗೂ ಗೊತ್ತಿದೆ ಎಂದು ಹೇಳಿದರು.

Latest Videos

ಇದನ್ನೂ ಓದಿ: ಮುಡಾ ಹಗರಣಕ್ಕೆ ಅಧ್ಯಕ್ಷ ಮರಿಗೌಡ ತಲೆದಂಡ: ಸರ್ಕಾರದಿಂದ ಶೀಘ್ರ ಆಡಳಿತಾಧಿಕಾರಿ ನೇಮಕ!

ಕಾಂಗ್ರೆಸ್‌ನವರು ಸಿದ್ದರಾಮಯ್ಯ ಅವರನ್ನು ಇಳಿಸಿದರೆ ಸರ್ಕಾರ ಉಳಿಯಲ್ಲ ಅನ್ನೋದು ಗೊತ್ತಿದೆ. ಹೀಗಾಗಿ ಮುಡಾ ಹಗರಣ ಹೊರಗೆ ತಂದಿದ್ದಾರೆ. ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಸತೀಶ್ ಜಾರಕಿಹೊಳಿ ಯಾರಾರು ಸಿಎಂ ಆಕಾಂಕ್ಷಿಗಳಿದ್ದಾರೋ ಅವರೇ ಸಿದ್ದರಾಮಯ್ಯ ಇಳಿಸೋ ಪ್ರಯತ್ನದಲ್ಲಿದ್ದಾರೆ. ಆದರೆ, ಸಿದ್ದರಾಮಯ್ಯ ಅಧಿಕಾರಕ್ಕಾಗಿ  ಹೋರಾಟ ಮಾಡ್ತಿದ್ದಾರೆ. ರಾಜಕೀಯ, ಅಧಿಕಾರಕ್ಕಾಗಿ ಸಿದ್ದರಾಮಯ್ಯ ಹಾಗೂ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ. ನನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸಿದರು ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಸಚಿವನಾಗಿದ್ದಾನ ನನ್ನ ಮೇಲೆ ಲಕ್ಷ ಕೋಟಿ ಲೂಟಿ ಮಾಡಿದ್ದೇನೆ ಅಂತ ಹೇಳಿದರು. ಏನೋ ಮಾಡಿ ಅಧಿಕಾರಕ್ಕೆ ಬರಬೇಕು ಅಂತಾ ಅಪಪ್ರಚಾರ ಮಾಡಿದರು. ಅಂದು ನಾನು ರಾಜಕಾರಣದಲ್ಲಿ ಎದ್ದು ಕಾಣುತ್ತಿದ್ದೆನು. ನನ್ನ ಹೊಡೆದರೆ, ನಾನು ಸಿಎಂ ಆಗ್ತಿನಿ ಎಂದು ನನ್ನ ಬಗ್ಗೆ ಸಿದ್ದರಾಮಯ್ಯ ಅಪಪ್ರಚಾರ ಮಾಡಿದರು. ಇಂದು‌ ಸಿದ್ದರಾಮಯ್ಯಗೆ ತೊಂದರೆ ಆಗಿದೆ. ಆದರೆ, ಅವರೇ ಇಂದು ಮುಡಾ ಹಗರಣ ಆಗಿರೋದು ಜನಾರ್ದನ ರೆಡ್ಡಿಯಿಂದಲ್ಲ. ಕಾಂಗ್ರೆಸ್ ಕೆಲ ನಾಯಕರು ಹಾಗೂ ಡಿ.ಕೆ. ಶಿವಕುಮಾರ್ ಸೇರಿಕೊಂಡು ಸಿದ್ದರಾಮಯ್ಯ ಬುಡಕ್ಕೆ ಕೈ ಹಾಕಿದ್ದಾರೆ. ಸಿದ್ದರಾಮಯ್ಯ ಅವರನ್ನ ಸಂಪೂರ್ಣವಾಗಿ ಮನೆಯಲ್ಲಿ ಕೂಡಿಸಬೇಕು ಎ2 ಡಿಕೆಶಿ ಪ್ಲಾನ್ ಮಾಡಿದ್ದಾರೆ. ನನ್ನ ಮಗ ಸಿಎಂ ಆಗ್ಬೇಕು ಅಂತಾ ಡಿಕೆಶಿ ಅವರ ತಾಯಿನೇ ಹೇಳಿದ್ದಾರೆ. ಡಿಕೆಶಿ, ಸತೀಶ್ ಜಾರಕಿಹೊಳಿ, ಖರ್ಗೆ ಸೇರಿದಂತೆ ಹಳೆ ಕಾಂಗ್ರೆಸ್ ಬಣ ಸಿದ್ದರಾಮಯ್ಯ ಬುಡಕ್ಕೆ ಕೈ ಹಾಕಿದೆ. ಸಿಎಂ ಗಾದಿಯಿಂದ ಇಳಿಸುಯುವ ಪ್ರಯತ್ನ ಮಾಡ್ತಿದ್ದಾರೆ ಎಂದರು. 

ಇದನ್ನೂ ಓದಿ: ಜಮೀರ್ ಅಹಮದ್ ಖಾನ್ ಮುತ್ತಜ್ಜನ ಹೆಸರು ಮಲ್ಲಪ್ಪ, ಕಲ್ಲಪ್ಪ ಇರಬಹುದು: ಶಾಸಕ ಯತ್ನಾಳ್!

ಸಂಗೊಳ್ಳಿ ರಾಯಣ್ಣನಿಗೆ ಹೊಲಿಕೆ ಮಾಡಿಕೊಂಡ ಜನಾರ್ದನ ರೆಡ್ಡಿ: 
ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರ ಕುತಂತ್ರಕ್ಕೆ ರಾಯಣ್ಣ ಬಲಿಯಾದರು. ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಂಟ್ಟಂತೆ ರಾಜ್ಯದ ನಾಯಕರು ಸೋನಿಯಾ ಕೈಗೆ ಹಿಡಿದುಕೊಟ್ಟರು. ಬ್ರಿಟೀಷರು ರಾಯಣ್ಣನನ್ನು ನೇಣಿಗೆರಿಸಿದರು. ಆದರೆ, ಈಗ ನೆಣಿಗೇರಿಸಲು ಅಗಲ್ಲವಲ್ಲ ಆದ್ದರಿಂದ ನಾನು ಉಳಿದುಕೊಂಡಿದ್ದೇನೆ. ವಿದೇಶಿ ಮಹಿಳೆ ಸೋನಿಯಾ ಗಾಂಧಿ ಹೊಡೆತಕ್ಕೆ ನಾನು  ಉಳಿದದ್ದೇ ಹೆಚ್ಚು. ಕಾಂಗ್ರೆಸ್‌ನವರು ಮತ್ತು ಸೋನಿಯಾಗಾಂಧಿಯ ಕುತಂತ್ರದ ನಡುವೆಯೂ ನಾನು ಉಳಿದುಕೊಂಡೆ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದರು.

click me!