ಧರ್ಮೇಗೌಡ್ರ ಡೆತ್​ನೋಟ್‌ನಲ್ಲಿ​ ಅನೇಕ ರಹಸ್ಯಗಳಿವೆ: ಮಾಧ್ಯಮಗಳಿಗೆ ವಿವರಿಸಿದ ಸಿಎಂ

By Suvarna NewsFirst Published Dec 29, 2020, 3:44 PM IST
Highlights

ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಡೆತ್ ನೋಟ್‌ನಲ್ಲಿ ಮಹತ್ವದ ವಿಚಾರಗಳನ್ನ ತಿಳಿಸಿದ್ದಾರೆ ಎಂದು ಸ್ವತಃ ಸಿಎಂ ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ.

ಬೆಂಗಳೂರು, (ಡಿ.29): ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಉಪಸಭಾಪತಿ ಧರ್ಮೇಗೌಡ ಅವರು ಬರೆದಿಟ್ಟಿರುವ ಡೆತ್‍ನೋಟ್ ಪೊಲೀಸರಿಗೆ ಸಿಕ್ಕಿದೆ. ಇದನ್ನು ನಾನು ಓದಿರುವೆ. ತುಂಬಾ ಸುದೀರ್ಘವಾಗಿರುವ ಡೆತ್​ನೋಟ್​ ಇದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

ಸದ್ಯ ಈ ಡೆತ್​ನೋಟ್​ ಅನ್ವಯ ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ. ಈ ಡೆತ್​ನೋಟ್​ನಲ್ಲಿ ತಮ್ಮ ಆಸ್ತಿಯು ಯಾರಿಗೆ ಸೇರಿಬೇಕು ಎಂಬುದನ್ನು ಕೂಡ ಅವರು ಬರೆದಿಟ್ಟಿದ್ದಾರೆ, ಮಾತ್ರವಲ್ಲದೇ ಹಲವಾರು ರಹಸ್ಯಗಳು ಇದರಲ್ಲಿ ಇವೆ. ಆದರೆ ಅದರಲ್ಲಿ ಇರುವ ಯಾವುದೇ ವಿಷಯವನ್ನು ಅವರು ಬಹಿರಂಗಪಡಿಸಿಲ್ಲ. ಸದ್ಯ ನಾನು ಇದರಲ್ಲಿ ಇರುವ ಮಾಹಿತಿಗಳನ್ನು ಬಹಿರಂಗಪಡಿಸಲಾರೆ  ಎಂದು ಯಡಿಯೂರಪ್ಪ ಮಾಧ್ಯಮಗಳ ಮುಂದೆ ವಿವರಿಸಿದರು.

ಧರ್ಮೇಗೌಡ ಆತ್ಮಹತ್ಯೆ: ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

ಗ್ರಾಮ ಪಂಚಾಯ್ತಿಯಿಂದ ಹಿಡಿದು ವಿಧಾನಸಭೆವರೆಗೂ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.ತುಂಬಾ ಮೃದು ಸ್ವಭಾವದವರಾಗಿದ್ದು, ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿರುವುದು ನೋವಿನ ಸಂಗತಿ ಎಂದು ಹೇಳಿದರು.

ಇಂದು ಸಂಜೆ ಧರ್ಮೆಗೌಡ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕೋವಿಡ್ ನಿಯಮದಂತೆ ಅಂತ್ಯಕ್ರಿಯೆಯನ್ನು ನಡೆಸುವಂತೆ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ನಾನು ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.

ಗೃಹ ಸಚಿವರ ಮಾತು
 ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕೂಡ ಹೇಳಿಕೆ ನೀಡಿದ್ದು, ಡೆತ್​ನೋಟ್​ ಸಿಕ್ಕಿದೆ. ಇದನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಅದರಲ್ಲಿ ಅನೇಕ ವಿಚಾರಗಳು ಪ್ರಸ್ತಾಪವಾಗಿವೆ. ಇದನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇತ್ತೀಚೆಗೆ ನಡೆದ ಹಲವು ವಿಚಾರಗಳಲ್ಲಿ ಅವರ ಮನಸ್ಸಿಗೆ ನೋವಾಗಿದ್ದನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಪೊಲೀಸರು ಪರಿಶೀಲಿಸಿದ ಬಳಿಕ ಅನೇಕ ವಿಚಾರಗಳು ಬಹಿರಂಗವಾಗುವುದು ಎಂದು ಹೇಳಿದರು.

click me!