ಸಾಲ ಕಟ್ಟದ ರೈತರ ಆಸ್ತಿಗಳ ಜಪ್ತಿ ತಡೆಗೆ ಕಾಯ್ದೆ: ಸಿಎಂ ಬೊಮ್ಮಾಯಿ

By Kannadaprabha NewsFirst Published Sep 25, 2022, 5:30 AM IST
Highlights

ಶೀಘ್ರದಲ್ಲೇ ಅಧಿಕಾರಿಗಳ ಜತೆ ಸಮಾಲೋಚನೆ, ನಾಡಿನ ಕೆಲವೆಡೆ ಪ್ರವಾಹದಿಂದ ಬೆಳೆ ನಷ್ಟವಾಗಿ ರೈತರಿಗೆ ಸಂಕಷ್ಟ, ಸಾಲ ವಸೂಲಾತಿಗೆ ಹಣಕಾಸು ಸಂಸ್ಥೆಗಳಿಂದ ಆಸ್ತಿ ಜಪ್ತಿ ತರವಲ್ಲ: ಸಿಎಂ

ಚಿತ್ರದುರ್ಗ(ಸೆ.25): ಸಾಲ ತೀರುವಳಿ ಸಂಬಂಧ ಬ್ಯಾಂಕುಗಳು ರೈತರ ಆಸ್ತಿ​ಪಾಸ್ತಿ ಜಪ್ತಿ ಮಾಡುವುದನ್ನು ನಿಷೇಧಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಿರಿಗೆರೆಯಲ್ಲಿ ಶನಿವಾರ ನಡೆದ ಲಿಂಗೈಕ್ಯ ತರಳಬಾಳು ಜಗದ್ಗುರು ಶಿವಕುಮಾರ ಶ್ರೀಗಳ 30ನೇ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಘೋಷಣೆ ಮಾಡಿದರು. ಈ ಸಂಬಂಧ ಶೀಘ್ರದಲ್ಲೇ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ರೈತ ಸಂಘಟನೆಗಳು ಆಸ್ತಿಪಾಸ್ತಿ ಜಪ್ತಿ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದಾರೆ. ನಾಡಿನ ಕೆಲವೆಡೆ ಪ್ರವಾಹದಿಂದ ರೈತರ ಬೆಳೆ ಹಾಳಾಗಿ ಸಂಕಷ್ಟದ ಸನ್ನಿವೇಶ ಎದುರಾಗಿದೆ. ರೈತರು ಸಂಕಷ್ಟದಲ್ಲಿರುವಾಗ ಸಾಲ ವಸೂಲಾತಿಗೆ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮನೆ, ಜಮೀನು, ಆಸ್ತಿಗಳನ್ನು ಜಪ್ತಿ ಮಾಡುವುದು ಸೂಕ್ತವಲ್ಲ. ಇದಕ್ಕೆ ಅಂತ್ಯವಾಡಲು ಸರ್ಕಾರ ಬದ್ಧವಿದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ರೈತರ ಸಾಲ ಮರುಪಾವತಿಗೆ ಒತ್ತಾಯಿಸಿ ಜಪ್ತಿ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಸಾಲ ತೀರಿಸುವ ಸಂಬಂಧ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುವುದು ಎಂದರು.

CHITRADURGA: ಸಿಎಂ ಬೊಮ್ಮಾಯಿ ಸಹ ಪ್ರಾಮಾಣಿಕ ಹೆಜ್ಜೆಯಿಡುತ್ತಿದ್ದಾರೆ: ಯಡಿಯೂರಪ್ಪ

ಜತೆಗೆ, ನಮ್ಮ ಸರ್ಕಾರ ರೈತರ ನೆರವಿಗೆ ಬರಲು ಸದಾ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ರಾಜ್ಯದಲ್ಲಿ 14 ಲಕ್ಷ ರೈತರ ಮಕ್ಕಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳು ಸೇರಿದಂತೆ ಎಲ್ಲಾ ದುಡಿಯುವ ವರ್ಗದ ಮಕ್ಕಳಿಗೆ ರೈತವಿದ್ಯಾನಿಧಿ ಯೋಜನೆ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.
 

click me!