
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ನ.4): ಸಾಮಾನ್ಯವಾಗಿ ಇದ್ದವರೆಲ್ಲಾ ಪ್ರತಿವರ್ಷ ದೀಪಾವಳಿ ಹಬ್ಬವನ್ನ ಮನೆಮಂದಿಗೆ ಹೊಸಬಟ್ಟೆ ಖರೀದಿಸಿ, ಮನೆ ಅಲಂಕರಿಸಿ, ಪಟಾಕಿ ಸಿಡಿಸಿ ಆಚರಿಸೋದು ಕಾಮನ್, ಆದ್ರೆ ಇವ್ಯಾವು ಈ ಸ್ಲಂ ನಿವಾಸಿಗಳಿಗೆ ಮಾತ್ರ ಕನಸಿನ ಮಾತು. ದಿನವಿಡೀ ದುಡಿದು ಬಂದು ಮನೆ ಸಾಗಿಸೋದು ದುಸ್ತರ.
ಇಂತಹ ಬಡ ಕುಟುಂಬಗಳ ಗೋಳು ಕಂಡ ಲೈಯನ್ಸ್ ಸಂಸ್ಥೆ ಸದಸ್ಯರು ಇದೀಗ ಪಟಾಕಿಗಾಗಿ ಖರ್ಚು ಮಾಡೋ ಹಣವನ್ನೇ ಶೇಖರಿಸಿ ಸಾವಿರಾರು ರೂಪಾಯಿ ಹಣದಿಂದ ಸ್ಲಂ ನಿವಾಸಿ ಮಕ್ಕಳಿಗೆ ಬಟ್ಟೆ ನೀಡಿ ಅಭಿಮಾನ ಮೆರೆದಿದ್ದಾರೆ. ಈ ಕುರಿತ ವರದಿ ಇಲ್ಲಿದೆ..
ಗುಡಿಸಲಿನಲ್ಲಿ ಮಕ್ಕಳೊಂದಿಗೆ ಆರ್ಥಿಕ ಸಂಕಷ್ಟದಲ್ಲಿರೋ ಸ್ಲಂ ನಿವಾಸಿಗಳು, ಸ್ಲಂ ನಿವಾಸಿಗಳ ಗೋಳು ಕೇಳಿ ಇವರೊಂದಿಗೆ ದೀಪಾವಳಿ ಆಚರಿಸಲು ಬಂದ ಲೈಯನ್ಸ್ ಸಂಸ್ಥೆ ಸದಸ್ಯರು, ಬಡ ಮಕ್ಕಳಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ತಂದ ಹೊಸ ಹೊಸ ಬಟ್ಟೆಗಳು. ಹೌದು ಇಂತಹವೊಂದು ದೃಶ್ಯ ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ.
"
ನಗರದ ರೈಲು ನಿಲ್ದಾಣದ ಬಳಿಯಲ್ಲಿ ಸ್ಲಂ ಪ್ರದೇಶದಲ್ಲಿ ಕಳೆದ 35 ವರ್ಷಗಳಿಂದಲೂ ಇಲ್ಲಿ ಬಡ ಕುಟುಂಬಗಳು ವಾಸಿಸುತ್ತಿವೆ. ಸೂರಿಲ್ಲದೆ ಗುಡಿಸಲಿನಲ್ಲಿಯೇ ಮಕ್ಕಳು ಮರಿಯೊಂದಿಗೆ ಕೌದಿಗಳನ್ನ ಹೊಲಿದು ಜೀವನ ಸಾಗಿಸೋ ಇವರ ಬದುಕು ದಯನೀಯ. ಇಂತವರಿಗೆ ಪ್ರತಿವರ್ಷ ದೀಪಾವಳಿ ಕತ್ತಲೇಯೇ ಆಗಿರುತ್ತಿತ್ತು.
ಆದ್ರೆ ಇವರನ್ನ ಗುರುತಿಸಿರೋ ಬಾಗಲಕೋಟೆಯ ಲೈಯನ್ಸ್ ಸಂಸ್ಥೆ ತಮ್ಮ ಸದಸ್ಯರು ಈ ವರ್ಷ ದೀಪಾವಳಿಗಾಗಿ ಪಟಾಕಿ ಸಿಡಿಸೋಕೆ ಅಂತ ನಿರ್ಧರಿಸಿದ ಹಣವನ್ನೇ ಕ್ರೂಡಿಕರಿಸಿ ಬರೋಬ್ಬರಿ 75 ಸಾವಿರ ರೂ. ಹಣ ಕೂಡಿಸಿ ಆ ಮಕ್ಕಳಿಗಾಗಿ ಹೊಸ ಹೊಸ ಬಟ್ಟೆಗಳನ್ನ ತಂದು ನೀಡಿ ಅವರೊಂದಿಗೆ ದೀಪಾವಳಿ ಆಚರಿಸೋಕೆ ರೆಡಿಯಾಗಿದ್ದಾರೆ.
ಇನ್ನು ಇಲ್ಲಿ ಒಟ್ಟು 100 ಮನೆಗಳಿವೆ, ಇವರಿಗೆ ಇವತ್ತಿಗೂ ಶಾಶ್ವತ ಮನೆಗಳಿಲ್ಲ. ಪ್ರತಿವರ್ಷ ದೀಪಾವಳಿ ಬಂದಾಗಲೂ ಇವರು ಹಳೆಬಟ್ಟೆಯಲ್ಲಿದ್ದುಕೊಂಡೇ ಇನ್ನೊಬ್ಬರ ಮಕ್ಕಳನ್ನ ನೋಡಿ ಮಮ್ಮಲ ಮರಗುವಂತಾಗುತ್ತಿತ್ತು. ಆದ್ರೆ ಈ ಬಾರಿ ಲೈಯನ್ಸ್ ಸದಸ್ಯರೆಲ್ಲಾ ಪಟಾಕಿ ಸಿಡಿಸೋ ಬದಲಾಗಿ ಅದೇ ಹಣದಿಂದ ಇಲ್ಲಿನ ಬಡ ಮಕ್ಕಳಿಗೆ ಬಟ್ಟೆ ವಿತರಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಸ್ಲಂ ನಿವಾಸಿಗಳ ಮಕ್ಕಳಿಗೆ ಬಟ್ಟೆ ವಿತರಿಸಿ ಜನರ ಗೋಳು ಕೇಳಿ ಸೂರು ಕಲ್ಪಿಸುವ ಭರವಸೆ ನೀಡಿದ್ದಾರೆ. ಇತ್ತ ಲೈಯನ್ಸ್ ಕ್ಲಬ್ನ ಸಹಾಯದಿಂದ ಇಡಿ ತಮ್ಮ ಪ್ರದೇಶದ ಮಕ್ಕಳು ಈ ಬಾರಿ ಹೊಸ ಬಟ್ಟೆ ಧರಿಸುವಂತಾಗಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ದೀಪಾವಳಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡೋ ಜನರಿರೋ ಇಂದಿನ ಕಾಲದಲ್ಲಿ ಲೈಯನ್ಸ್ ಕ್ಲಬ್ ನ ಸದಸ್ಯರೆಲ್ಲಾ ಕೂಡಿ ಸ್ಲಂ ನಿವಾಸಿಗಳ ಮಕ್ಕಳಿಗೆ ಹೊಸ ಹೊಸ ಬಟ್ಟೆ ನೀಡಿ ಅವರ ಬಡತನದ ದೀಪಾವಳಿಯಲ್ಲಿ ತಾವು ಸಂತಸ ಕಾಣಲು ಹೊರಟಿರೋದು ಮಾತ್ರ ನಿಜಕ್ಕೂ ಅಭಿಮಾನಪಡೋ ಸಂಗತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ