ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿ ಮತ್ತೆ ಅರೆಸ್ಟ್‌: 2ನೇ ಪೋಕ್ಸೋ ಕೇಸ್‌ನಲ್ಲಿ ಬಂಧನ

By Sathish Kumar KHFirst Published Nov 20, 2023, 3:22 PM IST
Highlights

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು 2ನೇ ಪೋಕ್ಸೋ ಪ್ರಕರಣದಡಿಯಲ್ಲಿ ಪೊಲೀಸರು ಬಂಧಿಸಿ ಜೈಲಿಗೆ ಕರೆದೊಯ್ದಿದ್ದಾರೆ.

ಚಿತ್ರದುರ್ಗ (ನ.20): ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು 2ನೇ ಪೋಕ್ಸೋ ಪ್ರಕರಣದಡಿಯಲ್ಲಿ ಪೊಲೀಸರು ಬಂಧಿಸಿ ಜೈಲಿಗೆ ಕರೆದೊಯ್ದಿದ್ದಾರೆ. ಮೊದಲ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ದಾವಣಗೆರೆಯ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದ ಸ್ವಾಮೀಜಿಯನ್ನು ಪುನಃ ಚಿತ್ರದುರ್ಗ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರು ಮಠದ ವಸತಿ ಶಾಲೆಯ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಈಗಾಗಲೇ 14 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಸುಮಾರು 14 ತಿಂಗಳ ಬಳಿಕ ಹೈಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಆದರೆ, ಅವರ ಮೇಲೆ ಇನ್ನೊಂದು ಪೋಕ್ಸೋ ಕೇಸ್‌ ದಾಖಲಾಗಿದ್ದು, ಇದರಲ್ಲಿ ಬಾಡಿ ವಾರೆಂಟ್‌ನಲ್ಲಿ ಹೊರಗಿದ್ದರು. ಈಗ ಪುನಃ ಮುರುಘಾ ಸ್ವಾಮೀಜಿ ಜಾಮೀನಿನ ಮೇಲೆ ಹೊರಗಿದ್ದಲ್ಲಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಅವರನ್ನು ಬಂಧಿಸುವಂತೆ ದೂರುದಾರರು ಮನವಿ ಮಾಡಿದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳ 2ನೇ ಪೋಕ್ಸೋ ಪ್ರಕರಣದಲ್ಲಿ  ಬಂಧಿಸುವಂತೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಬಿ.ಕೆ ಕೋಮಲಾರಿಂದ ಅವರು ಆದೇಶ ಹೊರಡಿಸಿದ್ದರು. 

ಕಾಂಗ್ರೆಸ್‌ ಮುಖಂಡನಿಂದ ಅತ್ಯಾಚಾರ: ಒಬ್ಬಳನ್ನು ಒಬ್ಬನೇ ವ್ಯಕ್ತಿ ರೇಪ್‌ ಮಾಡೋಕೆ ಅಸಾಧ್ಯವೆಂದ ಮಾಜಿ ಶಾಸಕ ಬಯ್ಯಾಪುರ

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಮತ್ತೆ ಬಂಧನ ವಾರೆಂಟ್ ಹೊರಡಿಸಿದ ನಂತರ ನ್ಯಾಯಾಲಯಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸ್‌ ಠಾಣೆ ಪೊರಲೀಸ್‌ ಇನ್ಸ್‌ಪೆಕ್ಟರ್ ಮುದ್ದುರಾಜ ಅವರು ಕೋರ್ಟ್‌ನ ಬಂಧನದ ಆದೇಶದ ಪ್ರತಿಯನ್ನು ಪಡೆದುಕೊಂಡರು. ಆದೇಶ ಪಡೆದ ಬಳಿಕ ಪೊಲೀಸರಿಂದ ಬಂಧನ ಪ್ರಕ್ರಿಯೆಗಾಗಿ ಮುರುಘಾ ಸ್ವಾಮೀಜಿ ವಾಸ್ತವ್ಯ ಹೂಡಿದ್ದ ದಾವಣಗೆರೆ ವಿರಕ್ತ ಮಠಕ್ಕೆ ತೆರಳಿದ್ದರು. ಈ ವೇಳೆಗಾಗಲೇ ವಿರಕ್ತ ಮಠದ ಸುತ್ತಲೂ ಸುಮಾರು 25ಕ್ಕೂ ಅಧಿಕ ಪೊಲೀಸರನ್ನು ಕಾವಲಿಗೆ ಇರಿಸಲಾಗಿತ್ತು. ಸುಮಾರು 25 ಪೊಲೀಸರ ನೇತೃತ್ವದಲ್ಲಿ ದಾವಣಗೆರೆ ವಿರಕ್ತ ಮಠದಿಂದ ಮುರುಘಾ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿ ಜೀಪಿನಲ್ಲಿ ಚಿತ್ರದುರ್ಗಕ್ಕೆ ಕರೆದೊಯ್ದಿದ್ದಾರೆ. 

ಚಿತ್ರದುರ್ಗ ಡಿವೈಎಸ್‌ಪಿ ನೇತೃತ್ವದಲ್ಲಿ ಆಗಮಿಸಿದ ಪೊಲೀಸರ ತಂಡವು ಮುರುಘಾ ಸ್ವಾಮೀಜಿಯನ್ನು ವಶಕ್ಕೆ ಪಡೆದುಕೊಂಡಿತು. ಮುರುಘಾಶ್ರೀ ಬಂಧಿಸಿದ ಪೊಲೀಸರು ಚಿತ್ರದುರ್ಗಕ್ಕೆ ಕೊಂಡೊಯ್ದು ಅಲ್ಲಿ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಪರೀಕ್ಷೆ ಮಾಡಸಲು ಕರೆದೊಯ್ಯಲಿದ್ದಾರೆ. ಹೀಗಾಗಿ, ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಗಿ ಪೊಲೀಸ್‌ ಬಂದಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ನಂತರ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಈ ವೇಳೆ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದರೆ ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ಪಡೆಯಲಿದ್ದಾರೆ. 

ರಾಜ್ಯದ 4 ಲಕ್ಷ ವಿದ್ಯಾರ್ಥಿಗಳಿಗೆ ಶಾಕ್‌: ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ರದ್ದುಗೊಳಿಸಿದ ಸರ್ಕಾರ

ಮುರುಘಾ ಶ್ರೀ ವಿರುದ್ದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಒಂದು ಪ್ರಕರಣದಲ್ಲಿ ಜಾಮೀನು ಹಿನ್ನೆಲೆಯಲ್ಲಿ ಜೈಲಿನಿಂದ ಹೊರ ಬಂದಿದ್ದರು. ಆದರೂ, ಮುರುಘಾಶ್ರೀ ವಿರುದ್ದ ನಿಲ್ಲದ ಆರೋಪಗಳು ನಿಂತಿರಲಿಲ್ಲ. ಆದರೆ, ಸ್ವಾಮೀಜಿ ಷರತ್ತುಗಳನ್ನು ಉಲ್ಲಂಘನೆ ಮಾಡ್ತಾರೆ ಎಂದು ಚಿತ್ರದುರ್ಗದ ವಕೀಲ ಮಧುಕುಮಾರ್ ಆರೋಪ ಮಾಡಿದ್ದರು. ದಾವಣಗೆರೆಯ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದ ಸ್ವಾಮೀಜಿಯನ್ನು ಕೂಡಲೇ ಸ್ಥಳಾಂತರ ಮಾಡಿ ಸಾರ್ವಜನಿಕರನ್ನು ಬಿಟ್ಟು ಖಾಸಗಿಯಾಗಿ ಇರುವಂತೆ ವ್ಯವಸ್ಥೆ ಮಾಡಲಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. 

click me!