ಡೆಡ್ಲಿ ಕೊರೋನಾ ವೈರಸ್‌ ಮೇಲೆ ನಿಗಾ ಇಡಲು ಕಣ್ಗಾವಲು ತಂಡ

By Kannadaprabha NewsFirst Published May 29, 2020, 9:28 AM IST
Highlights

ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ ಲಕ್ಷಾಂತರ ಜನರ ಆರೋಗ್ಯ ಹಾಗೂ ಆರ್ಥಿಕ ಭದ್ರತೆಗೆ ಗಂಭೀರ ಸವಾಲು ಒಡ್ಡಿದೆ| ಸಮಸ್ಯೆ ಪತ್ತೆ ಹಚ್ಚಿ ನಿಯಂತ್ರಿಸುವುದು ಹಾಗೂ ಅಪಾಯದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ತುರ್ತು ಅಗತ್ಯಕ್ಕಾಗಿ 17 ಸಮಿತಿ ರಚನೆ|

ಬೆಂಗಳೂರು(ಮೇ.29): ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವಿಕೆ ಮೇಲೆ ನಿಗಾ ವಹಿಸಲು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಅಧ್ಯಕ್ಷತೆಯಲ್ಲಿ ಕಾಯಿಲೆ ಕಣ್ಗಾವಲು ತಂಡವನ್ನು ರಚಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಆದೇಶ ಹೊರಡಿಸಿದ್ದಾರೆ.

ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ ಲಕ್ಷಾಂತರ ಜನರ ಆರೋಗ್ಯ ಹಾಗೂ ಆರ್ಥಿಕ ಭದ್ರತೆಗೆ ಗಂಭೀರ ಸವಾಲು ಒಡ್ಡಿದೆ. ಸಮಸ್ಯೆ ಪತ್ತೆ ಹಚ್ಚಿ ನಿಯಂತ್ರಿಸುವುದು ಹಾಗೂ ಅಪಾಯದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ತುರ್ತು ಅಗತ್ಯಕ್ಕಾಗಿ 17 ಸಮಿತಿಗಳನ್ನು ಈ ಮೊದಲೇ ರಚಿಸಲಾಗಿತ್ತು.

'ಮೋದಿ, ಯಡಿಯೂರಪ್ಪ ಪೂಜೆ ಮಾಡಿಸದಿದ್ರೆ ಕೊರೋನಾ ಕಾಟ ಮತ್ತಷ್ಟು ಹೆಚ್ಚಳ'

ಇದರಲ್ಲಿ ಕಾಯಿಲೆ ಕಣ್ಗಾವಲು ತಂಡವನ್ನು ಸೇರ್ಪಡೆ ಮಾಡಿ ಆದೇಶಿಸಿದ್ದು, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್‌ಸೇಠ್‌ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಉಳಿದಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಅವರನ್ನು ನೋಡಲ್‌ ಅಧಿಕಾರಿ, ಐಎಫ್‌ಎಸ್‌ ಅಧಿಕಾರಿ ಮೀನಾಕ್ಷಿ ನೇಗಿ ಅವರನ್ನು ಆಪ್ತಮಿತ್ರ ಸಹಾಯವಾಣಿ ನೋಡಲ್‌ ಅಧಿಕಾರಿ, ಐಎಎಸ್‌ ಅಧಿಕಾರಿಗಳಾದ ಕ್ಯಾಪ್ಟನ್‌ ಮಣಿವಣ್ಣನ್‌, ಪಿ. ಅನಿರುಧ್‌ ಶ್ರವಣ್‌ ಅವರನ್ನು ದೇಶಿಯ ವಿಮಾನಯಾನ, ಮೀನಾ ನಾಗರಾಜ್‌ ಅವರನ್ನು ವಿದೇಶಿ ಪ್ರಯಾಣಿಕರ ಆಪ್ತ ಶಾಖೆ, ಕೆ.ಎ. ದಯಾನಂದ್‌ ಅವರನ್ನು ರೈಲು ಪ್ರಯಾಣಿಕರ ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಉಳಿದಂತೆ ಎನ್‌ಯುಎಲ್‌ಎಂ ಮಿಷನ್‌ ನಿರ್ದೇಶಕರಾದ ಡಾ. ಅರುಂಧತಿ ಚಂದ್ರಶೇಖರ್‌ ಅವರನ್ನು ಸಂಪರ್ಕ ಪತ್ತೆ ಹಚ್ಚುವಿಕೆ, ಕಂಟೈನ್‌ಮೆಂಟ್‌ ವಲಯ ಹಾಗೂ ತಪಾಸಣೆಯ ಸಮನ್ವಯತೆ ಕಾರ್ಯಗಳ ಮೇಲುಸ್ತುವಾರಿಗೆ ನೇಮಿಸಲಾಗಿದೆ. ಕೆ.ಎನ್‌. ರಮೇಶ್‌ ಅವರಿಗೆ ಹೆಚ್ಚಿನ ಅಪಾಯ ಹೊಂದಿದ ಪ್ರದೇಶ ಹಾಗೂ ಸಾರ್ವಜನಿಕ ಸ್ಥಳಗಳ ಉಸ್ತುವಾರಿ, ಬಿಎಂಆರ್‌ಸಿಐನ ಡಾ.ಕೆ. ರವಿ ಹಾಗೂ ಡಾ. ಶಶಿ ಭೂಷಣ್‌, ನಿಮ್ಹಾನ್ಸ್‌ನ ಡಾ.ಕೆ. ಅನಿತಾ ದೇಸಾಯಿ ಹಾಗೂ ರಾಮಯ್ಯ ಮೆಡಿಕಲ್‌ ಕಾಲೇಜಿನ ಡಾ. ನಂದಕುಮಾರ್‌ ಅವರನ್ನು ವೈದ್ಯಕೀಯ ತಜ್ಞರನ್ನಾಗಿ ನೇಮಿಸಿ ಆದೇಶಿಸಲಾಗಿದೆ.
 

click me!