
ಬೆಂಗಳೂರು (ಆ.28): ಮುಂದಿನ ತಿಂಗಳಿಂದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ಗೆ ನೀಡುವ ಕಿಮೋಥೆರಪಿ ಡೇ ಕೇರ್ ಸೆಂಟರ್ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇಲ್ಲಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿ ₹ 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರೋಗ್ಯ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಕ್ರಮವಹಿಸಲಾಗಿದೆ. ಕಿಮೋ ಥೆರಪಿಗೆ ಸಂಬಂಧಿಸಿದಂತೆ ದೊಡ್ಡ ಆಸ್ಪತ್ರೆಗಳಿಗೆ ತೆರಳುವುದನ್ನು ತಪ್ಪಿಸಲು ಮುಂದಿನ ತಿಂಗಳಿಂದ ಜಿಲ್ಲಾ ಆಸ್ಪತ್ರೆಗಳಲ್ಲಿಯೇ ಕಿಮೋಥೆರಪಿ ಡೇ ಕೇರ್ ಸೆಂಟರ್ ಪ್ರಾರಂಭಿಸಲಾಗುವುದು ಎಂದರು.
ಅಪಘಾತಕ್ಕೆ ಒಳಗಾಗುವವರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಪ್ರತ್ಯೇಕ ಆಂಬುಲೆನ್ಸ್ ಸೇವೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುತ್ತದೆ. ಈ ಸಂಬಂಧ ರಾಜ್ಯದಲ್ಲಿ 60-70 ಹಾಟ್ಸ್ಪಾಟ್ (ಅಪಘಾತ ವಲಯ) ಗುರುತಿಸಲಾಗಿದೆ. ಇಲ್ಲಿಗೆ ಹತ್ತಿರದಲ್ಲಿಯೇ ಟ್ರಾಮಾ ಸೌಲಭ್ಯವನ್ನೂ ಒದಗಿಸಲಾಗುವುದು ಎಂದು ಅವರು ತಿಳಿಸಿದರು. ಇನ್ನು, ಹೊರಗಡೆಯಿಂದ ಔಷಧ ಬರೆದುಕೊಡುವ ಪರಿಪಾಠ ತಪ್ಪಿಸಿ, ಸರ್ಕಾರಿ ಆಸ್ಪತ್ರೆಗಳಲ್ಲೇ ಎಲ್ಲ ಬಗೆಯ ಔಷಧವನ್ನು ಪೂರೈಸಲು ಕ್ರಮ ವಹಿಸುತ್ತೇವೆ ಎಂದರು.
ಶಿಕ್ಷಣದಲ್ಲಿ ಎಲ್ಲವೂ ಕೇಂದ್ರ ನಿಯಂತ್ರಣ ಸರಿಯಲ್ಲ: ನೀಟ್ ಪರೀಕ್ಷೆಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣದಲ್ಲಿ ಎಲ್ಲವನ್ನು ಸಹ ಕೇಂದ್ರದಿಂದಲೇ ನಿಯಂತ್ರಣ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದಿದ್ದಾರೆ ಸುದ್ದಿಗಾರರಲ್ಲಿ ಮಾತನಾಡಿದ ಅವರು, ನಾವು ಮೆಡಿಕಲ್ ಕಾಲೇಜು ಸ್ಥಾಪಿಸಿದ್ದು, ವಿದ್ಯಾರ್ಥಿಗಳು ಬೇರೆ ಕಡೆಯಿಂದ ಬಂದು ಡಾಕ್ಟರ್ ಓದಿಕೊಂಡು ಹೋಗುತ್ತಿದ್ದಾರೆ. ನೀಟ್ ಪದ್ಧತಿಯಿಂದ ನಮ್ಮ ಕಾಲೇಜಿನಲ್ಲಿ ನಮ್ಮ ಡಾಕ್ಟರ್ಸ್ಗೆ ಸೀಟು ಸಿಗುತ್ತಿಲ್ಲ. ಆಲ್ ಇಂಡಿಯಾದಿಂದ ಬಂದು ಸೀಟು ಪಡೆದುಕೊಂಡು ಹೋಗುತ್ತಾರೆ.
ಜೈಲಲ್ಲಿ ದರ್ಶನ್ ಫೋಟೋ ಕ್ಲಿಕಿಸಿದ್ದು ರೌಡಿ ಶೀಟರ್ ವೇಲು: ಆತನ ಮೇಲೆ ಹಲ್ಲೆ
ನಮ್ಮ ಮಕ್ಕಳಿಗೆ ಸೀಟು ಸಿಗುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇಲ್ಲ. ನೀಟ್ ಬಗ್ಗೆ ಚರ್ಚೆ ಮಾಡಬೇಕಿದೆ, ಹಾಗಾಗಿ ನಾವು ಸಹ ನೀಟ್ಗೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂದರು. ನಾವು ಹೆಚ್ಚು ಮೆಡಿಕಲ್ ಕಾಲೇಜು ಸ್ಥಾಪಿಸಿದ್ದೇವೆ. ನೂರಾರು ಕೋಟಿ ರು. ಖರ್ಚು ಮಾಡಿ ಸರ್ಕಾರ ಮೆಡಿಕಲ್ ಕಾಲೇಜು ಮಾಡುತ್ತದೆ. ಆದರೆ ಇದರ ಪ್ರಯೋಜನ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ. ದೇಶದಲ್ಲಿ ಎಲ್ಲವನ್ನೂ ಕೇಂದ್ರದಿಂದಲೇ ನಿಯಂತ್ರಣ ಮಾಡುವುದು ಒಳ್ಳೆಯದಲ್ಲ. ನಾವು ಹೇಳಿದ ಪ್ರಕಾರ ನಡೆಯಬೇಕು ಎಂಬಂತೆ ಕೇಂದ್ರದ ವರ್ತನೆ ಇದೆ. ನಾವು ಅದನ್ನು ಈಗ ಫಾಲೋ ಮಾಡಲೇ ಬೇಕು. ಪಾರ್ಲಿಮೆಂಟ್ನಲ್ಲಿ ಕಾನೂನು ತಿದ್ದುಪಡಿ ಆಗಬೇಕು. ನೀಟ್ ಪರಿಷ್ಕರಣೆ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತಾರಾ ಎಂದು ನೋಡಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ