
ಚಿತ್ರದುರ್ಗ (ಆ.7) : ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ತನ್ನ ನಿಲುವಿನಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಿತಾ ಎಂಬ ಆತಂಕ ಚಿತ್ರದುರ್ಗ ಜಿಲ್ಲೆಯ ಭದ್ರಾ ಹೋರಾಟಗಾರರಲ್ಲಿ ಕಾಡಿದೆ.
ಯೋಜನಾ ವ್ಯಾಪ್ತಿಯ ಚಿತ್ರದುರ್ಗ ಜಿಲ್ಲೆಯನ್ನು ಸಂಸತ್ನಲ್ಲಿ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಎರಡು ದಿನಗಳ ಹಿಂದೆ ನಡೆಸಿದ ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಸರ್ಕಾರ ಪರ್ಯಾಯ ಪ್ರಸ್ತಾವನೆ ಮಂಡಿಸಿದ್ದಲ್ಲಿ ಕೇಂದ್ರದಿಂದ ಅನುದಾನ ದೊರಕಿಸಿಕೊಡುವುದಾಗಿ ಹೇಳಿದ ಮಾತು ಅನುಮಾನ ಮೂಡಲು ಕಾರಣವಾಗಿದೆ.
ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದಿದ್ದ ಕೇಂದ್ರ ಯುಟರ್ನ್! ಡಿಕೆಶಿ ಹೇಳೋದೇನು?
ಭದ್ರಾ ಮೇಲ್ದಂಡೆæ ಹನಿ ನೀರಾವರಿಗೆ ಹಾಗೂ ಕೆರೆಗಳನ್ನು ತುಂಬಿಸಲು ಶೇ.60:40ರ ಅನುಪಾತದಲ್ಲಿ 5300 ಕೋಟಿ ರು. ಅನುದಾನ ಒದಗಿಸಲು ಕೇಂದ್ರ ಬಜೆಟ್ನಲ್ಲಿ ಘೋಷಣೆಯಾಗಿದೆ. ರಾಜ್ಯ ಸರ್ಕಾರ ಯೋಜನೆಯಲ್ಲಿ ಕೆಲ ಮಾರ್ಪಾಡು ಮಾಡಿ ನೀಡಿದಲ್ಲಿ ತಕ್ಷಣವೇ ಹಣ ಬಿಡುಗಡೆ ಮಾಡಲು ಕೇಂದ್ರ ನೀರಾವರಿ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಸಂಗತಿಯ ಅಂದಿನ ಸಭೆಯಲ್ಲಿ ನಾರಾಯಣಸ್ವಾಮಿ ಮಂಡಿಸಿದ್ದರು.
ಭದ್ರಾ ಮೇಲ್ದಂಡೆಗೆ ತನ್ನ ಪಾಲಿನ ಶೇ.60 ಹಾಗೂ ರಾಜ್ಯದ ಪಾಲಿನ ಶೇ.40ರ ಅನುಪಾತದಡಿ ಖರ್ಚು ಭರಿಸಲು ಕೇಂದ್ರ ಸಿದ್ಧವಿದೆ. ರಾಷ್ಟ್ರೀಯ ಯೋಜನೆ ಘೋಷಣೆ ಪ್ರಯತ್ನಗಳು ಹಾಗೆ ಮುಂದುವರಿಯುತ್ತವೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಆಕ್ಸಿಲರಿ ಇರಿಗೇಷನ್ ಬೆನಿಫಿಟೆಡ್ ಪ್ರೋಗ್ರಾಂನಡಿ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಕೋರಬಹುದಾಗಿದೆ ಎಂದಿದ್ದರು.
ಈ ನಿಟ್ಟಿನಲ್ಲಿ, ರಾಜ್ಯದ ಜನ ಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿಡಿ.ಕೆ. ಶಿವಕುಮಾರ್, ಇಲಾಖೆಯ ಪ್ರಧಾನ ಕಾರ್ಯದರ್ಶಿ, ವಿಶ್ವೇಶ್ವರಯ್ಯ ಜಲ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಒಳಗೊಂಡ ತಾಂತ್ರಿಕ ಅಧಿಕಾರಿಗಳ ಸಭೆ ಮಾಡಿ, ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಬದಲಿ ಪ್ರಸ್ತಾಪದ ಪತ್ರವನ್ನು ಸಲ್ಲಿಸಲಿ ಎಂದು ನಾರಾಯಣಸ್ವಾಮಿ ಸಲಹೆ ಮಾಡಿದ್ದರು.
ಕೇಂದ್ರ ಸಚಿವರ ಈ ಮಾತು ಭದ್ರಾ ಹೋರಾಟಗಾರರಲ್ಲಿ ಸಹಜವಾಗಿ ಅನುಮಾನಗಳ ಹುಟ್ಟು ಹಾಕಿದೆ. ಸಚಿವರು ಬದಲಿ ಪ್ರಸ್ತಾವನೆ ಸಲ್ಲಿಸಲು ಏಕೆ ಹೇಳಿದರು. ರಾಷ್ಟ್ರೀಯ ಯೋಜನೆ ಯಾಗಿ ಘೋಷಣೆಯಾಗುವ ಮೊದಲೇ ಮತ್ತೇಕೆ ಈ ಹೊಸ ತಿರುವು? ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆ ಘೋಷಣೆಯಿಂದ ಹಿಂದೆ ಸರಿಯಿತಾ ಎಂಬಿತ್ಯಾದಿ ಶಂಕೆಗಳು ಅವರುಗಳ ಮನದಲ್ಲಿ ಮೂಡಿವೆ.
Karnataka Budget 2023: ಮೇಕೆದಾಟು, ಭದ್ರಾ ಮೇಲ್ದಂಡೆ, ಎತ್ತಿನಹೊಳೆ.. ಜಲಸಂಪನ್ಮೂಲಕ್ಕೆ ಸರ್ಕಾರ ಇಟ್ಟಿದ್ದೆಷ್ಟು!
ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳ್ಳಲು ಕೇಂದ್ರದ ನೆರವು ರಾಜ್ಯಕ್ಕೆ ಬೇಕಾಗಿದೆ. ರಾಷ್ಟ್ರೀಯ ಯೋಜನೆ ಘೋಷಣೆ ಮುಖ್ಯವೋ? ಅನುದಾನ ಮುಖ್ಯವೋ? ಎಂಬುದರ ಬಗ್ಗೆ ಸ್ಪಷ್ಟತೆಗಳು ಇರಬೇಕು. ರಾಜ್ಯ ಸರ್ಕಾರ ತಕ್ಷಣವೇ ಬದಲಿ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರದ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು.
ಎ.ನಾರಾಯಣಸ್ವಾಮಿ, ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಚಿತ್ರದುರ್ಗದಲ್ಲಿ ನಡೆಸಿದ ಭದ್ರಾ ಮೇಲ್ದಂಡೆ ಪ್ರಗತಿ ಪರಿಶೀಲನೆ ವೇಳೆ ಆಡಿರುವ ಮಾತುಗಳು ಅನುಮಾನ ಹುಟ್ಟು ಹಾಕಿದೆ. ರಾಷ್ಟ್ರೀಯ ಯೋಜನೆ ಘೋಷಣೆ ಬಾಕಿ ಇರುವಾಗ ಇಂತಹ ತಿರುವು ಅರ್ಥವಾಗದಂತಾಗಿದೆ. ನಮಗೆ ಯೋಜನೆ ಪೂರ್ಣಗೊಳ್ಳುವುದು ಮುಖ್ಯ. ಇದಕ್ಕೆ ಕೇಂದ್ರದ ಅನುದಾನವೇ ಬೇಕೆಂದೇನೂ ಇಲ್ಲ, ರಾಜ್ಯ ಸರ್ಕಾರವೇ ಭರಿಸಿದರೂ ಅಭ್ಯಂತರವಿಲ್ಲ. ಕೇಂದ್ರ ಅನುದಾನ ನೀಡಿದರೆ ರಾಜ್ಯದ ಹೊರೆ ಕಡಿಮೆ ಆಗುತ್ತೆ. ಕಾಮಗಾರಿ ಬೇಗ ಮುಗಿಯುತ್ತೆ ಅನ್ನೋ ನಂಬಿಕೆ ನಮ್ಮದಾಗಿತ್ತು.
ಟಿ.ನುಲೇನೂರು ಎಂ.ಶಂಕರಪ್ಪ, ಅಧ್ಯಕ್ಷ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ