
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.6) : ದೇಶ ಕಂಡ ಅಪ್ರತಿಮ ನಾಯಕ, ವೀರ ಸೇನಾನಿ ಪ್ರಥಮ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅಪಮಾನಿಸಿದ ವಕೀಲ ವಿದ್ಯಾಧರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಡಿಕೇರಿಯಲ್ಲಿ ಮಾಜಿ ಸೈನಿಕರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಬಳಿಕ ಪ್ರತಿಭಟನೆ ಚಾಲನೆ ನೀಡಲಾಯಿತು. ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಮಾಜಿ ಸೈನಿಕರು ಹಾಗೂ ಸೇನಾಧಿಕಾರಿಗಳು ವಕೀಲ ವಿದ್ಯಾಧರ ವಿರುದ್ಧ ಆಕ್ರೋಶ ಹೊರ ಹಾಕಿದರು. ವಕೀಲ ವಿದ್ಯಾಧರನನ್ನು ಕೂಡಲೇ ಬಂಧಿಸಬೇಕು, ದೇಶ ದ್ರೋಹ ಕಾನೂನಿನ ಅಡಿಯಲ್ಲಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಮಾಜಿ ಸೈನಿಕರು, ಸೇನಾಧಿಕಾರಿಗಳು ಬಳಿಕ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಮಾನವ ಸರಪಳಿ ನಿರ್ಮಿಸಿ ವಕೀಲನ ವಿರುದ್ಧ ಅಸಮಾಧಾನ ಹೊರ ಹಾಕಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೂ ತೆರಳಿದ ಪ್ರತಿಭಟನಾಕಾರರು ಕೂಡಲೇ ವಕೀಲ ವಿದ್ಯಾಧರನನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಭಾರತಕ್ಕೆ ನುಸುಳಿರುವ 4 ಕೋಟಿ ಅಕ್ರಮ ಬಾಂಗ್ಲಾದೇಶಿಯರನ್ನ ಏನು ಮಾಡಬೇಕು? ಹಿಂದು ಮುಖಂಡರ ಪ್ರಶ್ನೆ!
ಈ ಸಂದರ್ಭ ಮಾತನಾಡಿದ ಮಾಜಿ ಸೈನಿಕರ ಕರ್ನಾಟಕ ರಾಜ್ಯಾಧ್ಯಕ್ಷ ಶಿವರಾಮ್ ಅವರು ದೇಶದ ಗಡಿಗಳಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ಹೋರಾಡಲು ಸೈನಿಕರು ಬೇಕು. ಎಲ್ಲಾದರೂ ಸೈನಸರ್ಗಿಕ ವಿಕೋಪಗಳಾದರೆ ಅವುಗಳನ್ನು ಎದುರಿಸಲು ಸೈನಿಕರು ಬೇಕು. ಆಂತರಿಕ ಗಲಭೆಗಳಾದರೆ ಅವುಗಳನ್ನು ನಿಯಂತ್ರಿಸಲು ಸೈನಿಕ ಬೇಕು. ಆದರೆ ಸೈನಿಕನಿಗೆ ಏನಾದರೂ ಆದರೆ ಆತನ ಪರವಾಗಿ ನಿಲ್ಲವುದಕ್ಕೆ ಯಾರೂ ಇಲ್ಲ. ದೇಶ ಕಂಡ ಮಹಾನ್ ನಾಯಕರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರೆಂದರೆ ಅದು ಇಡೀ ದೇಶದ ಹೆಮ್ಮೆ. ಹೀಗಿರುವಾಗ ಅಂತಹವರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದರೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ನಾಚಿಕೆಗೇಡಿನ ಸಂಗತಿ. ಒಬ್ಬ ಶಾಸಕರಿಗೆ ಅಪಮಾನವಾದರೆ, ಅಪಮಾನಿಸಿದ ವ್ಯಕ್ತಿಯನ್ನು ಕೂಡಲೇ ಬಂಧಿಸಲಾಗುತ್ತದೆ. ಆತನಿಗೆ ಕಾನೂನಾತ್ಮಕವಾಗಿ ಶಿಕ್ಷೆಯಾಗುತ್ತದೆ. ಆದರೆ ಸೇನೆಯ ಪ್ರಥಮ ಮಹಾದಂಡ ನಾಯಕರು, ಸೇನೆಯ ಜನರಲ್ಗಳಾಗಿದ್ದವರ ವಿರುದ್ಧ ಅತ್ಯಂತ ಕೀಳಾಗಿ ಪೋಸ್ಟ್ ಹಾಕಿದ್ದವನ್ನು ಬಂಧಿಸಿಲ್ಲ. ರಾತ್ರೋ ರಾತ್ರಿ ಜಾಮೀನು ನೀಡಿ ಬಿಡುಗಡೆಯಾಗುತ್ತದೆ ಎಂದರೆ ಒಬ್ಬ ಶಾಸಕನಿಗಿಂತ ಸೈನಿಕ ಕಡಿಮೆಯೇ ಎಂದು ಪ್ರಶ್ನಿಸಿದ್ದಾರೆ.
ಫೆಂಗಲ್ ಚಂಡಮಾರುತಕ್ಕೆ ಕರ್ನಾಟಕ ತತ್ತರ: ಇಂದು 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಸೋಮಣ್ಣ ಮಾತನಾಡಿ ಸೈನಿಕರಿಗೆ ಯಾವುದೇ ಜಾತಿ ಧರ್ಮ ಎಂಬುದಿಲ್ಲ. ಆದರೆ ವೀರ ಸೇನಾನಿಗಳಿಗೆ ಅಪಮಾನ ಮಾಡುವ ಮೂಲಕ ದೇಶದ ಸೇನೆಗೆ ಅಪಮಾನ ಎಸಗಿದ್ದಾರೆ. ಇದು ದೇಶ ದ್ರೋಹದ ಕೆಲಸ. ಹೀಗಾಗಿ ಅದೇ ಸಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ