ಬಸ್ ಚಾಲಕ ವಿಷ ಸೇವನೆ ಪ್ರಕರಣ; ಸಿಐಡಿ ಪೊಲೀಸರಿಂದ ಜಗದೀಶ್‌ ವಿಚಾರಣೆ

By Kannadaprabha NewsFirst Published Jul 14, 2023, 4:34 AM IST
Highlights

ರಾಜ್ಯಾದ್ಯಂತ ಗಮನ ಸೆಳೆದಿರುವ ಚಾಲಕ ಜಗದೀಶ್‌ ವಿಷ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಾಗಮಂಗಲ ಸೇರಿದಂತೆ ವಿವಿಧೆಡೆ ತನಿಖೆ ನಡೆಸಿದ ಅಧಿಕಾರಿಗಳು ಗುರುವಾರ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಚಾಲಕ ಜಗದೀಶ್‌ ಅವರನ್ನು ವಿಚಾರಣೆ ನಡೆಸಿದರು.

ಮಂಡ್ಯ (ಜು.14) ರಾಜ್ಯಾದ್ಯಂತ ಗಮನ ಸೆಳೆದಿರುವ ಚಾಲಕ ಜಗದೀಶ್‌ ವಿಷ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಾಗಮಂಗಲ ಸೇರಿದಂತೆ ವಿವಿಧೆಡೆ ತನಿಖೆ ನಡೆಸಿದ ಅಧಿಕಾರಿಗಳು ಗುರುವಾರ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಚಾಲಕ ಜಗದೀಶ್‌ ಅವರನ್ನು ವಿಚಾರಣೆ ನಡೆಸಿದರು.

ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಜಗದೀಶ್‌ನನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಮಂಗಳವಾರದಂದು ಆತನನ್ನು ಜನರಲ್‌ ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ಆಸ್ಪತ್ರೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಿಐಡಿ ಅಧಿಕಾರಿಗಳು ಜಗದೀಶ್‌ನನ್ನು ವಿಚಾರಣೆಗೊಳಪಡಿಸಿದರು. ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು. ತನಿಖಾಧಿಕಾರಿಗಳ ಎಲ್ಲ ಪ್ರಶ್ನೆಗಳಿಗೂ ಜಗದೀಶ್‌ ಸಮಚಿತ್ತದಿಂದಲೇ ಉತ್ತರಿಸಿದ್ದಾನೆ ಎಂದು ತಿಳಿದುಬಂದಿದೆ.

Latest Videos

ಸಾರಿಗೆ ನೌಕರನ ಆತ್ಮಹತ್ಯೆ ಯತ್ನ: ಚೆಲುವರಾಯಸ್ವಾಮಿ, ಎಚ್ಡಿಕೆ, ಸಿದ್ದು ಮಾತಿನ ಚಕಮಕಿ, ಕೋಲಾಹಲ

ಜಗದೀಶ್‌ನನ್ನು ವಿಚಾರಣೆ ನಡೆಸುವ ಸಮಯದಲ್ಲಿ ಆತನ ಸಂಬಂಧಿಕರನ್ನು ಸಿಐಡಿ ಅಧಿಕಾರಿಗಳು ಹೊರಗಿಟ್ಟಿದ್ದರು. ಜಗದೀಶ್‌ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲು ಮಾಡುವುದರ ಜೊತೆಗೆ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮತ್ತಷ್ಟುಜನರ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ..

ಜು.5ರಂದು ವರ್ಗಾವಣೆಯಿಂದ ಬೇಸತ್ತು ಚಾಲಕ ಜಗದೀಶ್‌ ವಿಷ ಸೇವಿಸಿದ್ದ ಪ್ರಕರಣ ವಿಧಾನಮಂಡಲ ಅಧಿವೇಶನದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಹಾಗೂ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ(Chaluvarayaswamy) ಜಟಾಪಟಿಗೂ ಕಾರಣವಾಗಿತ್ತು. ವಿರೋಧಪಕ್ಷಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ಐಜಿಪಿ ಪ್ರವೀಣ್‌ಮಧುಕರ್‌ ಪವಾರ್‌(IGP praveen madhukar) ನೇತೃತ್ವದ ಸಿಐಡಿ(CID) ಅಧಿಕಾರಿಗಳ ತಂಡ ತನಿಖೆ ಕೈಗೊಂಡಿತ್ತು. ಈಗಾಗಲೇ ಸಾರಿಗೆ ಇಲಾಖೆ ಅಧಿಕಾರಿಗಳು, ಸಹದ್ಯೋಗಿಗಳು, ವಿಷದ ಬಾಟಲಿ ಖರೀದಿಸಿದ ಕ್ರಿಮಿನಾಶಕ ಸಪ್ತಗಿರಿ ಆಗ್ರೋ ಏಜೆನ್ಸಿ ಸಿಬ್ಬಂದಿ, ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರನ್ನ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಅಲ್ಲದೇ, ಜೆಡಿಎಸ್‌ ಮಾಜಿ ಶಾಸಕ ಕೆ.ಸುರೇಶ್‌ಗೌಡ ಅವರು ಜಗದೀಶ್‌ನನ್ನು ಹೆಚ್ಚಿನ ಚಿಕಿತ್ಸೆಗೆ ರವಾನಿಸುತ್ತಿದ್ದ ಆ್ಯಂಬುಲೆನ್ಸ್‌ನ್ನು ತಡೆಹಿಡಿದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿತ್ತು.

ಬಸ್ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್‌: ವರ್ಗಾವಣೆಗೆ ಬೇಸತ್ರಾ ಜಗದೀಶ್‌..?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕೃಷಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶಗೌಡ ಅವರನ್ನು ವಿಚಾರಣೆಗೆ ಒಳಪಡಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ತನಿಖೆ ಅಂತಿಮ ಹಂತ ತಲುಪಿರುವುದರಿಂದ ಸೋಮವಾರವೇ ಸಿಐಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಿದೆ ಎಂದು ಹೇಳಲಾಗುತ್ತಿದೆ.

click me!